Tue. Apr 8th, 2025

Mangaluru: ಬಾಲ್ಯವಿವಾಹ ಪ್ರಕರಣ – ಐವರಿಗೆ ಕಠಿಣ ಶಿಕ್ಷೆ!!

ಮಂಗಳೂರು:(ಡಿ.17) ಬಾಲ್ಯವಿವಾಹ ಪ್ರಕರಣದಲ್ಲಿ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಬಾಲಕಿಯ ಪತಿ, ತಂದೆ- ತಾಯಿ ಮತ್ತು ಅತ್ತೆ-ಮಾವಂದಿರಿಗೆ 1 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ಒಟ್ಟು 35,000 ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಇದನ್ನೂ ಓದಿ: ಸುಳ್ಯ : ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿ‌ ಆತ್ಮಹತ್ಯೆಗೆ ಶರಣಾದ ವ್ಯಕ್ತಿ!!!

ಮಂಗಳೂರಿನ ಮೊಂಟೆಪದವು ನಿವಾಸಿ, ಬಾಲಕಿಯ ಪತಿ ಮುಹಮ್ಮದ್ ಇಮ್ತಿಯಾಜ್ (29), ಬಂಟ್ವಾಳದ ರಾಮಲ್ ಕಟ್ಟೆಯ ಅಬ್ದುಲ್ ಖಾದರ್ (41) ರಮ್ಲತ್ (43), ಮಂಜನಾಡಿಯ ಜೆ ಐ ಮುಹಮ್ಮದ್ ಮತ್ತು ಮೈಮುನಾ ಶಿಕ್ಷೆಗೊಳಗಾದ ಅಪರಾಧಿಗಳು.

2023ರ ಮೇ 31ರಂದು ಬಾಲಕಿ 17 ವರ್ಷ ಪ್ರಾಯವಾಗಿರುವಾಗಲೇ ಆಕೆಯ ಹೆತ್ತವರು ಮುಹಮ್ಮದ್ ಇಮ್ತಿಯಾಜ್ ನೊಂದಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. 2023 ಜೂನ್ 1ರಂದು ಉಳ್ಳಾಲದ ಕೈರಂಗಳ ಗ್ರಾಮದ ನಂದರಪದವು ಎಂಬಲ್ಲಿರುವ ಎಸ್‌.ಕೆ.ಮಲ್ಟಿಪರ್ಪಸ್ ಹಾಲ್‌ನಲ್ಲಿ ಔತಣಕೂಟ ಏರ್ಪಡಿಸಿದ್ದಾರೆ. ಬಾಲಕಿಗೆ ಅಪ್ರಾಪ್ತಿಯಾಗಿರುವಾಗಲೇ ಮದುವೆ ಮಾಡಿರುವ ಕಾರಣಕ್ಕಾಗಿ ಆರೋಪಿತರ ವಿರುದ್ದ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯ ನಿರೀಕ್ಷಕ ರಾಜೇಂದ್ರ ಬಿ.ಯವರು ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಕಲಂ 6 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಲಂ 9, 10, 11 ರಂತೆ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 10 ಸಾಕ್ಷ ಮತ್ತು 22 ದಾಖಲೆಗಳನ್ನು ಗುರುತಿಸಲಾಗಿದೆ. ವಾದವಿವಾದವನ್ನು ಆಲಿಸಿ ಆರೋಪಿಗಳ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಲಾಗಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್.ರವರು ಆರೋಪಿಗಳಿಗೆ ಅಪರಾಧಕ್ಕೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ: 10 ಮತ್ತು 11 ರಡಿಯಲ್ಲಿ 1ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ತಲಾ 5,000 ರೂ. ದಂಡ ವಿಧಿಸಲಾಗಿದೆ. ಎಲ್ಲಾ ಆರೋಪಿತರಿಗೆ ಒಟ್ಟು 35,000 ರೂ. ದಂಡ ವಿಧಿಸಲಾಗಿದೆ.

Leave a Reply

Your email address will not be published. Required fields are marked *