ಉಡುಪಿ:(ಡಿ.30) ಅಮಾವಾಸ್ಯೆಯ ದಿನದಂದು ಸಮುದ್ರಕ್ಕೆ ಸ್ನಾನ ಮಾಡಲು ತೆರಳಿದ ಇಬ್ಬರು ಸಮುದ್ರಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಸಮುದ್ರ ತೀರದಲ್ಲಿ ನಡೆದಿದೆ.

ಇದನ್ನೂ ಓದಿ: ಮೂಡುಬಿದ್ರೆ : ಚಲಿಸುತ್ತಿದ್ದ ಖಾಸಗಿ ಬಸ್ಸಿನಿಂದ ಪೊದೆಗೆ ಬಿದ್ದ ವಿದ್ಯಾರ್ಥಿ
ಎಳ್ಳಮಾವಾಸ್ಯೆ ಪ್ರಯುಕ್ತ ಹೆಜಮಾಡಿ ಸಮುದ್ರಕ್ಕೆ ತೀರ್ಥ ಸ್ನಾನ ಮಾಡಲೆಂದು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಸಮುದ್ರಕ್ಕೆ ಈಜಲು ತೆರಳಿದ್ದ 6 ಜನರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕಾಪು ತಾಲೂಕಿನ ಹೆಜಮಾಡಿಯ ಅಕ್ಷಯ್ ಮತ್ತು ಅಮನ್ ಎಂಬ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಸಮುದ್ರದಲ್ಲಿ ಮುಳುಗುತ್ತಿದ್ದ 6 ಜನರನ್ನು ರಕ್ಷಿಸಲು ಸ್ಥಳೀಯರು ಮುಂದಾಗಿದ್ದರು.

ಈ ಪೈಕಿ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದ ಇಬ್ಬರನ್ನು ರಕ್ಷಿಸಲು ಯತ್ನಿಸಿದರೂ ಆ ಪ್ರಯತ್ನ ಫಲಪ್ರದವಾಗಲಿಲ್ಲ. 6 ಯುವಕರಲ್ಲಿ ನಾಲ್ಕು ಜನರನ್ನು ಮಾತ್ರ ಕಾಪಾಡಲು ಸಾಧ್ಯವಾಯಿತು.


ಅಮಾವಾಸ್ಯೆಯಂದೇ ಇಬ್ಬರು ಯುವಕರು ದಾರುಣ ಅಂತ್ಯ ಕಂಡಿದ್ದಾರೆ. ಸ್ಥಳೀಯರು ಕಾಪಾಡಿದ ನಾಲ್ವರು ಯುವಕರು ನೀರು ಕುಡಿದು ಅಸ್ವಸ್ಥರಾಗಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
