ಶಿವಮೊಗ್ಗ(ಫೆ.11): ಅಕ್ರಮ ಮರುಳುಗಾರಿಕೆ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಮಗ ಅವಾಚ್ಯ ಶಬ್ದಗಳಿಂದ ಬೈದಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: Puttur: ಕರ್ತವ್ಯ ನಿರತ ಪೊಲೀಸ್ ಉಪನಿರೀಕ್ಷಕರ ಮೇಲೆ ಹಲ್ಲೆ
ಭದ್ರಾವತಿ ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರುಳು ಗಣಿಗಾರಿಕೆ ಮೇಲೆ ಗಣಿ ಇಲಾಖೆಯ ಮಹಿಳಾ ವಿಜ್ಞಾನಿ ಸೋಮವಾರ ಮಧ್ಯರಾತ್ರಿ ದಾಳಿ ಮಾಡಿದ್ದರು. ಈ ವೇಳೆ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಮಹಿಳಾ ಅಧಿಕಾರಿಗೆ ದೂರವಾಣಿ ಕರೆಯಲ್ಲಿ ಬೇ*****, ಮು *****, ನಿಮ್ಮ ***** ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಹಿಳಾ ಅಧಿಕಾರಿಗೆ ಅಶ್ಲೀಲವಾಗಿ ಬೈದಿರುವ ವಿಡಿಯೋ ವೈರಲ್ ಆಗಿದೆ.

ಪ್ರಕರಣ ಸಂಬಂಧ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕುಮಾರ ಮಂಜುಳಾ ಮಾತನಾಡಿ, ಈಗಾಗಲೇ ಶಾಸಕ ಸಂಗೇಶ್ವರ ಪುತ್ರ ಬಸವೇಶ್ 45 ದಿನ ಜೈಲಿನಲ್ಲಿ ಇದ್ದು ಬಂದಿದ್ದಾರೆ.


ಪಾಗಲ್ ಬಸವೇಶ್ರ ತಲೆ ಕೆಟ್ಟಿದೆ. ಶಾಸಕ ಹಾಗೂ ಅವರು ಪುತ್ರ ವರ್ತನೆಗೆ ಭದ್ರಾವತಿ ಬೇಸತ್ತಿದೆ. ಎಸ್ಪಿ ಅವರು ಓರ್ವ ಸಿಬ್ಬಂದಿಯನ್ನು ಅಮಾನತ್ತು ಮಾಡಿದ್ದರು. ಆದರೆ, ಅದೇ ಅಧಿಕಾರಿಯನ್ನು ಅದೇ ಹುದ್ದೆಗೆ ಶಾಸಕ ಸಂಗಮೇಶ ತರುತ್ತಾರೆ. ಎಸ್ಪಿ ಆದೇಶಕ್ಕೆ ಬೆಲೆ ಇಲ್ವಾ ಎಂದು ವಾಗ್ದಾಳಿ ಮಾಡಿದರು.

ಇಡೀ ರಾಜ್ಯದಲ್ಲಿ ಇಂತಹ ಹತ್ತಾರು ಪ್ರಕರಣಗಳು ನಡೆಯುತ್ತಿವೆ. ಮಹಿಳಾ ಅಧಿಕಾರಿ ದೂರು ಕೊಡುವ ಮೊದಲೇ ಶಾಸಕನ ಪುತ್ರನ ಚೇಲಾಗಳು ಅಧಿಕಾರಿ ವಿರುದ್ದ ಜಾತಿ ನಿಂದನೆ ಕೇಸ್ ಮಾಡಿದ್ದಾರೆ. ಶಾಸಕರ ಪುತ್ರ ಬಸವೇಶ ಅವರನ್ನು ಬಂಧಿಸುವ ತನಕ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
