Ranya Rao Gold smuggling case: (ಮಾ.5) ಡಿಜಿಪಿ ರಾಮಚಂದ್ರ ರಾವ್ 2ನೇ ಪತ್ನಿಯ ಮಗಳಾದ ರನ್ಯಾ ದುಬೈನಿಂದ 14.2 ಕೆ.ಜಿ ಚಿನ್ನವನ್ನು ಉಡುಪಿನಲ್ಲಿ ಇರಿಸಿಕೊಂಡು ಬಂದಿದ್ದಳು. ಅನುಮಾನದಿಂದಲೇ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಲ್ಲಿ ದೆಹಲಿ ಡಿಆರ್ಐ ಅಧಿಕಾರಿಗಳು ರನ್ಯಾ ರಾವ್ಳನ್ನು ಬಂಧಿಸಿದಾಗ ಕೋಟಿ ಕೋಟಿ ಬೆಲೆಯ ಚಿನ್ನ ಕಳ್ಳಸಾಗಾಣಿಕೆ ಅಸಲಿಯತ್ತು ಹೊರಬಿದ್ದಿತ್ತು.

ಇದನ್ನೂ ಓದಿ: ಬಂಟ್ವಾಳ: ಫರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ
ಮಾರ್ಚ್ 04 ರಂದು ರನ್ಯಾ ರಾವ್ಳನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ನಟಿಯನ್ನು ಮಾರ್ಚ್ 18ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಇನ್ನು ರನ್ಯಾ ರಾವ್ ಬಂಧನದ ಬಳಿಕ ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಶನ್ನ ಫ್ಲ್ಯಾಟ್ ಪರಿಶೀಲನೆ ಮಾಡಲಾಗಿತ್ತು. 5ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸಿ 3 ದೊಡ್ಡ ಪೆಟ್ಟಿಗೆ ತೆಗೆದುಕೊಂಡು ಹೋಗಿದ್ರು. ಈ ಬಗ್ಗೆ ಡಿಆರ್ಐ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಪ್ರಯಾಣಿಕರೊಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ತಪಾಸಣೆ ನಡೆಸಿದಾಗ 12.56 ಕೋಟಿ ಮೌಲ್ಯದ ವಿದೇಶಿ ಮೂಲದ ಚಿನ್ನದ್ ಬಿಸ್ಕತ್ತುಗಳು ಪತ್ತೆಯಾಗಿವೆ. ಆಕೆ ಮಾರ್ಚ್ 3, 2025ರಂದು ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ ವಿಮಾನದಲ್ಲಿ ಆಗಮಿಸಿದ್ದಳು. ಏರ್ಪೋರ್ಟ್ನಲ್ಲಿ ಚಿನ್ನ ಪತ್ತೆ ಬಳಿಕ ಡಿಆರ್ಐ ಅಧಿಕಾರಿಗಳು ತನ್ನ ಪತಿ ಜೊತೆ ವಾಸವಿರುವ ಬೆಂಗಳೂರಿನ ಲ್ಯಾವಿಲ್ಲೆ ರೋಡ್ನ ಮನೆಯಲ್ಲೂ ತಪಾಸಣೆ ನಡೆಸಿದ್ದರು.

ಶೋಧದ ವೇಳೆ 2.06ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 2.67 ಕೋಟಿ ನಗದು ಪತ್ತೆಯಾಗಿದೆ. 1962ರ ಕಸ್ಟಮ್ಸ್ ಕಾಯ್ದೆಯ ಪ್ರಕಾರ ಪ್ರಯಾಣಿಕ ಮಹಿಳೆಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟು ಜಪ್ತಿ ಮಾಡಿದ ವಸ್ತುಗಳ ಮೌಲ್ಯ 17.29 ಕೋಟಿಯಾಗಿದ್ದು, ಒಟ್ಟು 14.2 ಕೆಜಿಯಷ್ಟು ಭಾರೀ ಪ್ರಮಾಣದ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಇನ್ನು ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿವೆ. ರನ್ಯಾ ದುಬೈ ಏರ್ಪೋರ್ಟ್ಗೆ ಬಂದಾಗ ಏರ್ಪೋರ್ಟ್ ನ ರೆಸ್ಟ್ ರೂಂಗೆ ವ್ಯಕ್ತಿಯೊಬ್ಬ ಗೋಲ್ಡ್ ತಂದು ಕೊಟ್ಟಿದ್ದ. ಆಗ ರನ್ಯಾ ಗಮ್ ಮೂಲಕ ಗೋಲ್ಡ್ ಬಿಸ್ಕತ್ಗಳನ್ನು ಸೊಂಟಕ್ಕೆ ಬೆಲ್ಟ್ ರೀತಿ ಹಚ್ಚಿಕೊಂಡಿದ್ಳು. ಅಲ್ಲಿಂದ ನೇರವಾಗಿ ಪ್ಲೈಟ್ ಹತ್ತಿ ಬೆಂಗಳೂರಿಗೆ ಬಂದಿದ್ಳು. ಬೆಂಗಳೂರು ಏರ್ಪೋರ್ಟ್ಗೆ ಬರ್ತಿದ್ದಂತೆ ಡಿಜಿ ಮಗಳು ಅಂತ ಅಧಿಕಾರಿಗಳೇ ಮುತುವರ್ಜಿ ವಹಿಸಿ ಹೊರಗೆ ಕರೆದುಕೊಂಡು ಬರ್ತಿದ್ರು. ಡಿಜಿ ಮಗಳು ಎಂದು ಹೇಳಿ ತಪಾಸಣೆ ಮಾಡಿಸದೇ ರನ್ಯಾ ಬರುತ್ತಿದ್ಳು. ಆದ್ರೆ ಮೊದಲೇ ಮಾಹಿತಿ ತಿಳಿದು ಆಕೆ ಬರುವುದನ್ನೇ ಕಾಯುತ್ತಿದ್ದ ದೆಹಲಿಯ ಅಧಿಕಾರಿಗಳು ಕೊನೆಯ ಗೇಟ್ನಲ್ಲಿ ತಪಾಸಣೆ ಮಾಡಿದರು. ಆಗಲೇ ರನ್ಯಾ ಚಿನ್ನ ಕಳ್ಳಸಾಗಾಣಿಕೆ ಸತ್ಯ ಹೊರಬಿದ್ದಿದೆ.

ರನ್ಯಾ ದುಬೈಗೆ ಹೋಗಿ ಬಂದಿದ್ದು ಇದೇ ಮೊದಲ ಬಾರಿಯಲ್ಲ. ಒಂದು ವರ್ಷದಲ್ಲಿ 10ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದಿದ್ದಾಳೆ. ಕಳೆದ 15 ದಿನಗಳಲ್ಲೇ 4 ಬಾರಿ ದುಬೈಗೆ ಹೋಗಿ ಬಂದಿದ್ದಾಳೆ. ಪ್ರತೀ ಬಾರಿ ದುಬೈನಿಂದ ಬಂದಾಗ್ಲೂ ಈಕೆಯನ್ನೂ ಬೆಂಗಳೂರಿನ ಅಧಿಕಾರಿಗಳು ಪರಿಶೀಲನೆ ಮಾಡ್ತಿರಲಿಲ್ಲ ಎಂದು ತಿಳಿದುಬಂದಿದೆ. ಇದ್ರಿಂದ ಗೋಲ್ಡ್ ರಾಕೆಟ್ನಲ್ಲೂ ಶಾಮೀಲಾಗಿರುವ ಬಗ್ಗೆ ಅನುಮಾನಗಳಿವೆ. ಇನ್ನು ರನ್ಯಾ ಬಳಿ ಕೋಟಿ ಕೋಟಿ ಹಣ ಸಿಕ್ಕಿರೋದ್ರಿಂದ ಜಾರಿ ನಿರ್ದೇಶನಾಲಯದ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣ್ತಿವೆ.

ರನ್ಯಾ ಮನೆಯಲ್ಲಿ 2.67 ಕೋಟಿ ನಗದು ಹಣ, 2.06 ಕೆಜಿ ಚಿನ್ನ ಸಿಕ್ಕಿದೆ. ವಿಮಾನ ನಿಲ್ದಾಣದಲ್ಲಿ ಸಿಕ್ಕ ಚಿನ್ನ ಸೇರಿ ಈವರೆಗೆ ಬರೋಬ್ಬರಿ 17.29 ಕೋಟಿ ಮೌಲ್ಯದ ಚಿನ್ನ, ನಗದು ಸಿಕ್ಕಂತಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲೇ ಇಷ್ಟೊಂದು ಚಿನ್ನ ಸಿಕ್ಕಿರೋದು ಈವರೆಗಿನ ದಾಖಲೆಯಾಗಿದೆ.

ಮೂರು ತಿಂಗಳ ಹಿಂದಷ್ಟೇ ರಾಜ್ಯದ ಹೆಸರಾಂತ ರಾಜಕೀಯ ಕುಟುಂಬದ ಸಂಬಂಧಿಕರ ಜೊತೆ ತಾಜ್ವೆಸ್ಟ್ ಎಂಡ್ ನಲ್ಲಿ ಅದ್ದೂರಿಯಾಗಿ ರನ್ಯಾ ಮದುವೆಯಾಗಿದ್ಳು. ಗಂಡ ಹೆಸರಾಂತ ಅರ್ಕಿಟೆಕ್ಟ್ ಕೂಡ ಆಗಿದ್ದಾನೆ. 3 ತಿಂಗಳ ಹಿಂದಷ್ಟೆ ಲ್ಯಾವೆಲ್ಲಿ ರಸ್ತೆಯ ಫ್ಲ್ಯಾಟ್ಗೆ ಶಿಫ್ಟ್ ಆಗಿದ್ರು. ಈ ಫ್ಲಾಟ್ನಲ್ಲಿ ಇದಕ್ಕೂ ಮೊದಲು ಹೊರ ರಾಜ್ಯದ ಸಿಎಂ ಮಕ್ಕಳು ವಾಸವಿದ್ರು. ಅವರು ವಿದ್ಯಾಭ್ಯಾಸ ಮುಗಿಸಿ ತೆರಳಿದ ಬಳಿಕ ಬಾಡಿಗೆ ಪಡೆಯಲಾಗಿತ್ತು. ಸದ್ಯ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ತನಿಖೆ ಮುಂದುವರೆದಿದ್ದು, ಮತ್ತಷ್ಟು ಸತ್ಯಗಳು ಹೊರಬೀಳುವ ಸಾಧ್ಯತೆಗಳಿವೆ.
