ಬಂಟ್ವಾಳ: ಹಲವು ಅನುಮಾನಗಳನ್ನು ಸೃಷ್ಟಿಸಿ ನಾಪತ್ತೆಯಾಗಿದ್ದ ಫರಂಗಿಪೇಟೆ ಕಿದೆಬೆಟ್ಟು ಪದ್ಮನಾಭ ಅವರ ಪುತ್ರ ಅಪ್ರಾಪ್ತ ಬಾಲಕ ದಿಗಂತ್ ಕೊನೆಗೂ ಸುರಕ್ಷಿತವಾಗಿ ಸಿಕ್ಕಿದ್ದಾನೆ.

ಫೆ. 25 ರಂದು ಮನೆಯ ಸಮೀಪದ ರೈಲ್ವೆ ಹಳಿಯಿಂದ ನಿಗೂಢ ರೀತಿಯಲ್ಲಿ ದಿಗಂತ್ ನಾಪತ್ತೆಯಾಗಿದ್ದ, ಅಬಳಿಕ ಕಳೆದ 12 ದಿನಗಳಿಂದ ನಿರಂತರವಾದ ಪೋಲೀಸ್ ಕಾರ್ಯಚರಣೆ ನಡೆಯುತ್ತಿದ್ದು, ಇಂದಿಗೆ ಸೇಫ್ ಆಗಿ ಕಾರ್ಯಚರಣೆ ಕೊನೆಗೊಂಡಿದ್ದಲ್ಲದೆ, ಪೋಲೀಸ್ ಇಲಾಖೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಜಿಲ್ಲೆ ಬಿಟ್ಟ ಹೊರ ಜಿಲ್ಲೆಗೆ ದಿಗಂತ್ ಹೋಗಿರಬಹುದು ಎಂದು ಊಹಾಪೋಹಗಳು ಎಬ್ಬಿತ್ತಾದರೂ ಕರಾವಳಿಯ ಭಾಗದಲ್ಲಿಯೇ ಈತನ ಪತ್ತೆಯಾಗಿರುವುದು ಮತ್ತೆ ಅನುಮಾನಗಳು ಹುಟ್ಟಿಕೊಂಡಿದೆ.ಉಡುಪಿಯ ಡೀ ಮಾರ್ಟ್ ನಲ್ಲಿ ಪರ್ಚೇಸ್ ಮಾಡಲು ಬಂದಿದ್ದಾಗ ಆತನನ್ನು ನೋಡಿದ ವ್ಯಕ್ತಿಯೋರ್ವರು ದಿಗಂತ್ ಗುರುತು ಹಿಡಿದಿದ್ದಾರೆ ಎಂದು ಹೇಳಲಾಗಿದೆ.


ಬಳಿಕ ಮನೆಯವರಿಗೆ ಆತ ಅಲ್ಲಿನ ವ್ಯಕ್ತಿಯೋರ್ವರ ಮೊಬೈಲ್ ಮೂಲಕ ಪೋನ್ ಕಾಲ್ ಕೂಡ ಮಾಡಿರುವ ಬಗ್ಗೆ ಹೇಳಲಾಗಿದೆ. ಉಡುಪಿಯ ಬಿಜೆಪಿ ಪಕ್ಷದ ಪ್ರಮುಖರೋರ್ವರ ಮಗನಿಗೆ ದಿಗಂತ್ ಕಾಣಸಿಕ್ಕಿದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರು ದ.ಕ.ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರಿಗೆ ತಿಳಿಸಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಬಳಿಕ ಪೋಲೀಸ್ ತಂಡಕ್ಕೆ ಹಾಗೂ ಹಿಂದೂ ಸಂಘಟನೆಯ ಪ್ರಮುಖರಲ್ಲಿ ಹಂಚಿಕೊಂಡಿರುವ ಅವರು ದಿಗಂತ್ ಪತ್ತೆಯಾದ ಉಡುಪಿಯ ಡೀಮಾರ್ಟ್ ಗೆ ತೆರಳಿ ಅಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ.
ಫರಂಗಿಪೇಟೆಯ ದಿಗಂತ್ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ.ಸತತ ಕಾರ್ಯಾಚರಣೆ ಬಳಿಕ ದಿಗಂತ್ ನನ್ನು ಪತ್ತೆ ಹಚ್ಚಿದ ಪೊಲೀಸರ ಮುಖದಲ್ಲಿಯೂ ಸಂತಸದ ಛಾಯೆ ಮೂಡಿದೆ.

ತಾಯಿಯಲ್ಲಿ ಏನು ಹೇಳಿದ್ದ ದಿಗಂತ್:
ನನಗೇನು ತೊಂದರೆಯಾಗಿಲ್ಲ ಎಂದು ಹೇಳಿದ್ದ ದಿಗಂತ್ , ನನ್ನನ್ನು ಹೊತ್ತುಕೊಂಡು ಹೋಗಿದ್ದಾರೆ,ನಾನೇ ನಾಪತ್ತೆಯಾಗುವ ಹುಡುಗ ಅಲ್ಲ ಎಂದು ಹೇಳಿರುವ ಬಗ್ಗೆ ತಾಯಿ ಸುಜಾತಪದ್ಮನಾಭ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.ಎಲ್ಲವನ್ನೂ ನಾನು ಬಂದು ಹೇಳುತ್ತೇನೆ ಎಂದು ಹೇಳಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಶರ್ಟ್ ಬದಲಿಸಿದ ದಿಗಂತ್:
ದಿಗಂತ್ ಕಾಣೆಯಾಗಿ 12 ದಿನಗಳ ಎಲ್ಲಿ ತಂಗಿದ್ದ ಯಾರ ಜೊತೆ ಇದ್ದ ಎಂಬುದು ಇನ್ನೂ ನಿಗೂಡ ಆದರೆ ಈತ ಮನೆಯಿಂದ ಹೋಗುವಾಗ ಹಾಕಿಕೊಂಡಿದ್ದ ಅಂಗಿಯನ್ನು ಬದಲಿಸಿ ಬೇರೆ ಶರ್ಟ್ ಹಾಕಿಕೊಂಡಿದ್ದಾನೆ, ಜೊತೆಗೆ ಹೊಸ ಚಪ್ಪಲಿ ಕೂಡ ಇದೆ,ಮನೆಯಿಂದ ಹೋಗುವಾಗ ಧರಿಸಿಕೊಂಡಿದ್ದ ಪ್ಯಾಂಟ್ ನ್ನು ಇವತ್ತು ಕೂಡ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
