ಬಂಟ್ವಾಳ: (ಮಾ.10) ಫರಂಗಿಪೇಟೆ ಕಿದೆಬೆಟ್ಟಿನ ಪಿಯುಸಿ ವಿದ್ಯಾರ್ಥಿ ದಿಗಂತ್ ನಿಗೂಢ ಕಣ್ಮರೆಗೆ ಬಿಗ್ ಟ್ವಿಸ್ಟ್ ದೊರಕಿದೆ. ದಿಗಂತ್ ರೋಚಕ ಸತ್ಯವೊಂದನ್ನು ರಿವೀಲ್ ಮಾಡಿದ್ದಾನೆ.

ಇದನ್ನೂ ಓದಿ: 🛑ಬಂಟ್ವಾಳ: ಫರಂಗಿಪೇಟೆಯ ಕಾಲೇಜು ವಿದ್ಯಾರ್ಥಿ ದಿಗಂತ್ ಪತ್ತೆ ವಿಚಾರ
ದ್ವಿತೀಯ ಪಿಯುಸಿ ಪರೀಕ್ಷೆ ಭೀತಿಯಿಂದ ಮನೆ ತೊರೆದಿದ್ದಾಗಿ ತನಿಖೆಯ ವೇಳೆ ಆತ ಬಾಯಿಬಿಟ್ಟಿದ್ದಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಎನ್. ಹೇಳಿದ್ದಾರೆ. ಇನ್ನು, 12 ದಿನಗಳ ಬಳಿಕ ಶುಕ್ರವಾರ ವಿದ್ಯಾರ್ಥಿ ದಿಗಂತ್ ಉಡುಪಿಯ ಡಿ-ಮಾರ್ಟ್ನಲ್ಲಿ ಪತ್ತೆಯಾಗಿದ್ದು, ಫೈನಲ್ ಪರೀಕ್ಷೆಗೆ ಹೆದರಿ ಪರಾರಿಯಾಗಿರುವುದಾಗಿ ಬಾಲಕನು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.


ಬಾಲಕನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಆತ ಮೊದಲಿಗೆ ತನ್ನನ್ನು ಯಾರೋ ಕರೆದೊಯ್ದಿದ್ದಾಗಿ ಹೇಳಿದ್ದನು. ಆದರೆ ಆತನಿಗೆ ಸಮಾಧಾನಿಸಿ ನಿಧಾನವಾಗಿ ಬಾಯಿ ಬಿಡಿಸಿದಾಗ ಪರೀಕ್ಷೆಗೆ ಸರಿಯಾಗಿ ತಯಾರಾಗದಿದ್ದ ಕಾರಣ ಭಯದಿಂದ ಮನೆ ತೊರೆದಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಎನ್ ತಿಳಿಸಿದ್ದಾರೆ. ಫೆ.25ರಂದು ಸಂಜೆ ವೇಳೆ 500 ರೂಪಾಯಿ ಹಣದೊಂದಿಗೆ ಮನೆ ಬಿಟ್ಟ ವಿದ್ಯಾರ್ಥಿ ದಿಗಂತ್, ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬಂದು ಅರ್ಕುಳ ತಲುಪಿದ್ದಾನೆ. ಅಲ್ಲಿ ಮುಖ್ಯರಸ್ತೆಗೆ ಬಂದು ಬೈಕೊಂದರಲ್ಲಿ ಲಿಫ್ಟ್ ಪಡೆದು ಮಂಗಳೂರು ನಗರಕ್ಕೆ ಬಂದಿದ್ದಾನೆ.

ಅಲ್ಲಿಂದ ಬಸ್ನಲ್ಲಿ ಶಿವಮೊಗ್ಗಕ್ಕೆ ಹೋಗಿದ್ದಾನೆ. ಅಲ್ಲಿ ರೈಲು ಹತ್ತಿ ಮೈಸೂರಿಗೆ ತೆರಳಿದ್ದಾನೆ. ಉಡುಪಿಯಲ್ಲಿ ತಿನ್ನಲು ಹಾಗೂ ಬಟ್ಟೆ ಖರೀದಿಸಲು ಸ್ಥಳೀಯ ಅಂಗಡಿಗೆ ಹೋಗಿದ್ದಾನೆ. ಅಲ್ಲಿ ಹಣ ಕಡಿಮೆಯಾಗಿ ಓಡಲು ಯತ್ನಿಸಿದಾಗ ಸಿಬ್ಬಂದಿ ತಡೆದು ವಿಚಾರಿಸಿ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಆತನನ್ನು ಕರೆತಂದು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ಆತನನ್ನು ಬೋಂದೆಲ್ ನ ಬಾಲ ಗೃಹದಲ್ಲಿ ಇರಿಸಲಾಗಿದೆ. ಹೆತ್ತವರು ಆತನ ಪತ್ತೆಗೆ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಆದ್ದರಿಂದ ನಾವು ಹೈಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಲಯ ಏನೂ ಸೂಚಿಸಿತ್ತೋ ಅದರಂತೆ ಮುಂದುವರಿಯಲಿದ್ದೇವೆ ಎಂದು ಎಸ್ಪಿ ಯತೀಶ್ ಹೇಳಿದ್ದಾರೆ. ನಾಪತ್ತೆಯಾದ ಸಂದರ್ಭ ದೊರಕಿದ ಆತನ ಚಪ್ಪಲಿಯಲ್ಲಿನ ರಕ್ತದ ಕಲೆಯ ಬಗ್ಗೆ ಮಾಹಿತಿ ನೀಡಿದ ಎಸ್ಪಿ, ಈ ಬಗ್ಗೆ ನಾವು ಆತನನ್ನು ವಿಚಾರಿಸಿದ್ದೇವೆ. ಆಗ ಇಮ್ಮಡಿಯಲ್ಲಿ ಆದ ಗಾಯದಿಂದ ರಕ್ತ ಒಸರಿ ಅಂಟಿಕೊಂಡ ರಕ್ತ ಎಂದು ಆತ ಹೇಳಿಕೆ ನೀಡಿದ್ದಾಗಿ ಹೇಳಿದ್ದಾರೆ.

ಕಾಣೆಯಾಗಿದ್ದ ದಿಗಂತ್ ದ್ವಿತೀಯ ಪಿಯುಸಿ ಫೈನಲ್ ಪರೀಕ್ಷೆಯ ಹಾಲ್ ಟಿಕೆಟ್ ತಂದ ಬಳಿಕ ನಾಪತ್ತೆಯಾಗುವ ಪ್ಲ್ಯಾನ್ ಮಾಡಿದ್ದನಂತೆ. ಅದರಂತೆ ಕಳೆದ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡ ಕಾರಣ ದಿಗಂತ್ಗೆ ಮನೆಯಲ್ಲಿ ಬೈದಿದ್ದರು. ಹೀಗಾಗಿ, ಫೈನಲ್ ಪರೀಕ್ಷೆಯ ಭಯದಿಂದ ಏಕಾಏಕಿ ನಾಪತ್ತೆಯಾಗಿದ್ದಾನೆ. ಅಲ್ಲದೇ ತಾನೇ ಮನೆಬಿಟ್ಟು ಹೋಗಿದ್ದಲ್ಲದೇ, ಈ ತಪ್ಪು ಮರೆಮಾಡಲು ತಾಯಿ ಬಳಿ ನನ್ನನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದರು ಎಂದು ಸುಳ್ಳನ್ನೂ ಹೇಳಿದ್ದನು. ಅಲ್ಲದೇ ಇದೀಗ ದಿಗಂತ್ ಪೊಲೀಸರ ಬಳಿ ಪರಾರಿಯಾಗಲು ಮಾಡಿದ ರೂಟ್ ಮ್ಯಾಪ್ ಪ್ಲ್ಯಾನ್ ಬಗ್ಗೆ ದಿಗಂತ್ ಬಾಯಿಬಿಟ್ಟಿದ್ದಾನೆ.
