Wed. Mar 12th, 2025

Forest Department: ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಶ್ಯಾಂಪೂ, ಸೋಪುಗಳ ಮಾರಾಟ ನಿಷೇಧ: ಅರಣ್ಯ ಇಲಾಖೆ ಮಹತ್ವದ ಆದೇಶ

ಬೆಂಗಳೂರು(ಮಾ.11): ಕರ್ನಾಟಕದ ಎಲ್ಲಾ ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಶ್ಯಾಂಪು, ಸೋಪುಗಳ ಮಾರಾಟ ನಿಷೇಧಿಸಿ ಅರಣ್ಯ ಮತ್ತು ಪರಿಸರ ಆದೇಶ ಹೊರಡಿಸಿದೆ. ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಸೋಪು, ಶ್ಯಾಂಪೂ ಬಳಕೆ ಹೆಚ್ಚಾಗಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ತಿಳಿಸಿದೆ. ನದಿ ದಡಗಳಲ್ಲಿ‌ ಸೋಪು, ಶ್ಯಾಂಪು ಮಾರಾಟ ಹಾಗೂ ಬಳಕೆ ಮಾಡದಂತೆ ಆದೇಶಿಸಲಾಗಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ: ಉಜಿರೆ ಗ್ರಾಮದ ನಿನ್ನಿಕಲ್ಲು ಬಳಿ 33/11ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ – ಇಂಧನ ಸಚಿವ ಕೆ.ಜೆ. ಜಾರ್ಜ್

ಭಕ್ತರು ತಮ್ಮ ವಸ್ತುಗಳನ್ನು ನದಿಗಳಲ್ಲಿ ವಿಸರ್ಜನೆ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಈ ಆದೇಶ ಹೊರಡಿಸಿದ್ದಾರೆ.

ಅರಣ್ಯ ಇಲಾಖೆ ಆದೇಶದಲ್ಲೇನಿದೆ?
‘ರಾಜ್ಯದ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ನದಿ ತೀರ, ಕಲ್ಯಾಣಿ ಹಾಗೂ ಸ್ನಾನಘಟ್ಟಗಳಲ್ಲಿ ಭಕ್ತರು ಶ್ಯಾಂಪು, ಸೋಪು ಬಳಸಿ ಸ್ನಾನ ಮಾಡಿ, ಉಳಿದ ಸೋಪಿನ ತುಂಡು ಮತ್ತು ಶ್ಯಾಂಪೂ ಪ್ಯಾಕೇಟ್​ಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ಇದೆಲ್ಲವೂ ನದಿ, ಕೊಳ, ಸರೋವರ ಸೇರಿ ನದಿಯ ನೀರಿನಲ್ಲೂ ನೊರೆ ಉಕ್ಕುತ್ತಿರುವುದು. ನೀರು ಕಲುಷಿತವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಂದುವರಿದು, ‘ನದಿಗಳ ನೀರಿನ ಶುದ್ಧತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ರಾಜ್ಯದ ಎಲ್ಲ ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕೆರೆ, ಕಲ್ಯಾಣಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಇತ್ಯಾದಿ ಮಾರಾಟ ಮಾಡದಂತೆ ಹಾಗೂ ನದಿ, ಕಲ್ಯಾಣಿ, ಸರೋವರಗಳಲ್ಲಿ ಭಕ್ತರು ತಮ್ಮ ವಸ್ತ್ರಗಳನ್ನು ವಿಸರ್ಜನೆ ಮಾಡದಂತೆ ನಿರ್ಬಂಧಿಸಲು ಸೂಕ್ತ ಕ್ರಮ ವಹಿಸುವಂತೆ ಈ ಮೂಲಕ ಸೂಚಿಸಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಂತ ಅನೇಕ ಕ್ಷೇತ್ರಗಳಿಗೆ ಭಕ್ತರು ಪುಣ್ಯಸ್ನಾನ ಮಾಡಲು ಬರುತ್ತಾರೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ, ಧರ್ಮಸ್ಥಳದ ನೇತ್ರಾವತಿ ಸೇರಿ ರಾಜ್ಯದ ಅನೇಕ ದೇಗುಲ, ಪುಣ್ಯ ಕ್ಷೇತ್ರಗಳ ನದಿಗಳಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಈ ಸಂದರ್ಭದಲ್ಲಿ ಸೋಪು, ಶ್ಯಾಂಪೂ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಬಾರದು ಎಂಬ ಕಾರಣ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *