ಮಂಡ್ಯ (ಮಾ.18): ಮದುವೆಯಾಗಿದ್ದರೂ ಹೆಂಡ್ತಿಯನ್ನು ಬಿಟ್ಟು ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಸುಂದರಿ ಜೊತೆ ಸಂಸಾರ ಮಾಡುತ್ತಿದ್ದ ಮೈಸೂರಿನ ದೊರೆಸ್ವಾಮಿ ಅಲಿಯಾಸ್ ಸೂರ್ಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೈಸೂರು ತಾಲೂಕಿನ ಅನುಗನಹಳ್ಳಿ ನಿವಾಸಿ ಸೂರ್ಯ ಅಲಿಯಾಸ್ ದೊರೆಸ್ವಾಮಿ ಆರೇಳು ವರ್ಷಗಳ ಹಿಂದೆ ಹಿನಕಲ್ ನಿವಾಸಿ ದೀಪಿಕಾ ಎಂಬಾಕೆಯನ್ನು ವಿವಾಹವಾಗಿದ್ದ. ಇಬ್ಬರು ಮಕ್ಕಳು ಕೂಡ ಇದ್ದಾರೆ. ಹೆಂಡತಿ ಮಕ್ಕಳ ಜೊತೆ ಸುಖ ಸಂಸಾರ ಮಾಡಬೇಕಿದ್ದ ಈತ ಇನ್ಸ್ಟಾಗ್ರಾಂ ನಲ್ಲಿ ಬೆಂಗಳೂರು ಮೂಲದ ಶ್ವೇತಾ ಎಂಬಾಕೆಯನ್ನು ಪರಿಚಯ ಮಾಡಿಕೊಂಡು ಮನೆಗೆ ಕರೆದುಕೊಂಡು ಇಟ್ಟುಕೊಂಡಿದ್ದ. ಇದಾದ ಬಳಿಕ ಮಾರ್ಚ್ 12 ರ ರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದ. ಆರಂಭದಲ್ಲಿ ಶ್ವೇತಾ ಅವಳ ಮೇಲೆಯೇ ಅನುಮಾನಗಳು ವ್ಯಕ್ತವಾಗಿದ್ದವು. ಆದ್ರೆ, ಪೊಲೀಸ್ ತನಿಖೆಯಲ್ಲಿ ಬೇರೊಂದು ಗ್ಯಾಂಗ್ ಇರುವುದು ಪತ್ತೆಯಾಗಿದೆ.

ಶ್ವೇತಾ ಯಾವ ಮನೆಗೆ ಬಂದಳೋ ಆಗ ಸೂರ್ಯನ ಹೆಂಡತಿ ದೀಪಿಕಾ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆ ಸೇರಿದ್ದಾಳೆ. ಅಷ್ಟೆ ಮಗನ ಟಾರ್ಚರ್ ತಡೆಯಲು ತಾಯಿ ಪುಷ್ಪ ಕೂಡ ತವರು ಮನೆಗೆ ಹೋಗಿದ್ದಾರೆ. ಇಷ್ಟೆಲ್ಲ ಆದ್ರೂ ಸೂರ್ಯ ಮಾತ್ರ ಬದಲಾಗಿಲ್ಲ, ಬಳಿಕವು ಅನುಗನಹಳ್ಳಿಯಲ್ಲಿ ಇದ್ದ ಒಂದೆರಡು ಎಕರೆ ಜಮೀನು ಮನೆ ಆಸ್ತಿ ಎಲ್ಲವನ್ನು ತನ್ನ ಹೆಸರಿಗೆ ಬರೆಯಬೇಕು ಅಂತ ಪೋನ್ ಮಾಡಿ ಟಾರ್ಚರ್ ಕೊಡೋಕೆ ಶುರುಮಾಡಿದ್ದಾನೆ. ಇದರಿಂದ ಈತನ ಸಹವಾಸವೇ ಬೇಡ ಅಂತ ಕುಟುಂಬಸ್ಥರು ದೂರ ಉಳಿದಿದ್ದಾರೆ. ಇದಷ್ಟೇ ಅಲ್ಲದೆ ಊರಿನವರು ಈತನ ಟಾರ್ಚರ್ ನಿಂದ ಬೇಸತ್ತಿದ್ದರಂತೆ. ಮನೆ ಮುಂದೆ ಯಾರಾದ್ರು ಓಡಾಡಿದ್ರು ಬಾಯಿಗೆ ಬಂದಂತೆ ಬೈಯ್ತಾ ಇದ್ದನಂತೆ. ಇದರಿಂದ ಊರಿನವರು ಕೂಡ ಈತನ ಸಹವಾಸದಲ್ಲಿ ಇರಲಿಲ್ಲವಂತೆ. ಆದ್ರೆ ಮಾರ್ಚ್ 12 ರ ರಾತ್ರಿ ಈತ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ.

ಈತನ ಕೊಲೆಗೆ ಶ್ವೇತಾಳೆ ಕಾರಣ ಇರಬಹುದು ಅಂತ ಕುಟುಂಬಸ್ಥರು ಆರೋಪ ಮಾಡಲು ಶುರುಮಾಡಿದ್ದಾರೆ. ಯಾಕೆಂದರೆ ಕೊಲೆಯಾದ ದಿನ ಸೂರ್ಯ ಶ್ವೇತಾಳ ಜೊತೆ ಮನೆಯಲ್ಲೇ ಇದ್ದಿದನ್ನು ಗ್ರಾಮಸ್ಥರು ನೋಡಿದ್ದಾರೆ. ಬಳಿಕ ಮಾರ್ಚ್ 13 ರ ಬೆಳಿಗ್ಗೆ ಬಸ್ ನಿಲ್ದಾಣದ ಬಳಿಕ ಆಕೆ ನಡೆದುಕೊಂಡು ಹೋಗುವುದನ್ನು ನೋಡಿದ್ದಾರೆ. ಅಷ್ಟೇ ಅಲ್ಲದೆ ಕೆಲ ದಿನಗಳಿಂದ ಶ್ವೇತಾಳೇ ಟಾರ್ಚರ್ ಕೊಡ್ತಿದ್ದಾಳೆ ಅಂತ ಕಂಠ ಪೂರ್ತಿ ಕುಡಿದು ವಾಯ್ಸ್ ಮೆಸೆಜ್ ಮಾಡಿದ್ದ. ಶ್ವೇತಾ ನನಗೆ ಸಾಕಷ್ಟು ಟಾರ್ಚರ್ ಕೊಡ್ತಿದ್ದಾಳೆ, ನಾನು ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆಂದು ಕುಟುಂಬಸ್ಥರಿಗೆ ಮೆಸೇಜ್ ಹಾಕಿದ್ದ . ಇದರಿಂದ ಆಸ್ತಿಗಾಗಿ ಶ್ವೇತಾ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಆರೋಪ ಮಾಡಿದ್ದರು.

ತನಿಖೆಯಲ್ಲಿ ಸ್ಫೋಟಕ ಮಾಹಿತಿ ಪತ್ತೆ:
ಯಾವಾಗ ಕುಟುಂಬಸ್ಥರು ಶ್ವೇತಾಳ ಬಗ್ಗೆ ಆರೋಪ ಮಾಡೋಕೆ ಶುರುಮಾಡಿದ್ರೋ, ಜಯಪುರ ಪೊಲೀಸರು ಶ್ವೇತಾಳ ಸಂಪರ್ಕ ಮಾಡಿದ್ದಾರೆ. ಆದ್ರೆ ಶ್ವೇತಾ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಈವರೆಗೂ ಸಿಕ್ಕಿಲ್ಲ. ಇದರಿಂದ ಶ್ವೇತಾಳೆ ಕೊಲೆ ಮಾಡಿರಬಹುದು ಎಂದು ಪೊಲೀಸರಿಗೂ ಸಹ ಅನುಮಾನ ಇತ್ತು. ಆದ್ರೆ ಪೊಲೀಸರು ಅಷ್ಟಕ್ಕೆ ತನಿಖೆ ನಿಲ್ಲಿಸಿಲ್ಲ. ಬೇರೆ ಆಯಾಮದಲ್ಲೂ ತನಿಖೆ ಮಾಡಿದ್ದು, ಸೂರ್ಯನಿಗೆ ಬೇರೆ ಯಾರಿಗಾದ್ರು ದ್ವೇಷ ಇದಿಯಾ ಎಂದು ತನಿಖೆ ನಡೆಸಿದಾಗ ಶರತ್ ಎನ್ನುವನ ಜೊತೆ ಗಲಾಟೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

ಅಸಲಿಗೆ ಶರತ್ ಹಾಗೂ ಸೂರ್ಯ ಇಬ್ಬರು ಸ್ನೇಹಿತರಾಗಿದ್ದರಂತೆ. ಕುಡಿದಾಗ ಇಬ್ಬರು ಗಲಾಟೆ ಮಾಡಿಕೊಂಡಿದ್ದರಂತೆ. ಗಲಾಟೆಯಾದ ಮೇಲೆ ಶರತ್ ವಿರುದ್ಧ ಸೂರ್ಯ ದೂರು ಸಹ ಕೊಟ್ಟಿದ್ದ. ಇಷ್ಟೆಲ್ಲ ಆದ ಮೇಲು ಸಿಕ್ಕ ಸಿಕ್ಕ ಕಡೆ ಸೂರ್ಯ ಶರತ್ ಗುರಾಯಿಸುವುದನ್ನು ಮಾಡುತ್ತಿದ್ದನಂತೆ. ಅಷ್ಟೆ ಅಲ್ಲದೆ ಕೊಲೆ ಮಾಡುವುದಾಗಿಯೂ ಹೇಳುತ್ತಿದ್ದನಂತೆ. ಇದರಿಂದ ಶರತ್ ಗ್ಯಾಂಗ್ ಕಳೆದ ಎರಡು ವರ್ಷಗಳಿಂದಲು ಸೂರ್ಯನನ್ನು ಕೊಲೆ ಮಾಡಬೇಕು, ಇಲ್ಲದಿದ್ದರೆ ನಮ್ಮನ್ನೆ ಕೊಲೆ ಮಾಡಿಬಿಡುತ್ತಾನೆ ಎಂದು ಪ್ಲಾನ್ ಮಾಡಿತ್ತಂತೆ. ಅದ್ರೆ ಈ ನಡುವೆ ಶರತ್ ಬೇರೊಂದು ಪ್ರಕರಣದಲ್ಲಿ ಜೈಲು ಸೇರಿದ್ದ. ಜೈಲಿಗೆ ಹೋಗುವ ವೇಳೆಯು ತನ್ನ ಗ್ಯಾಂಗ್ ಗೆ ಸೂರ್ಯನ ಬಗ್ಗೆ ಹೇಳಿಕೊಂಡಿದ್ದಾನೆ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಗ್ಯಾಂಗ್ ಸ್ಕೆಚ್ ಹಾಕಿ ಸೂರ್ಯನನ್ನು ಮುಗಿಸಿದ್ದಾರೆ ಎನ್ನುವುದು ಪೊಲೀಸ್ ತನಿಖೆ ವೇಳೆ ಬಯಲಿಗೆ ಬಂದಿದೆ.

ಮಾರ್ಚ್ 12 ರಂದು ಬೆಳಿಗ್ಗೆ ಡ್ರಾಗರ್ ಗಳನ್ನು ಖರೀದಿ ಮಾಡಿದ್ದಾರೆ. ಅದೇ ರಾತ್ರಿ ಸೂರ್ಯ ಅನುಗನಹಳ್ಳಿಯ ಮನೆಯಲ್ಲಿ ಶ್ವೇತಾಳ ಜೊತೆ ಇರುವುದನ್ನು ಕನ್ಪರ್ಮ್ ಮಾಡಿಕೊಂಡ ಶರತ್ ಸ್ನೇಹಿತರಾದ ರಾಜು.ಎಸ್, ಕಿರಣ್ ಅಲಿಯಾಸ್ ಚಡ್ಡಿ, ಮನು.ಬಿ, ಚಂದು, ಶೇಖರ ಅಲಿಯಾಸ್ ಮೊಂಗು, ಸುನೀಲ್ ಕುಮಾರ್ ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ಅನುಗನಹಳ್ಳಿಯ ಸೂರ್ಯ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಶ್ವೇತಾಳ ಜೊತೆ ಎಣ್ಣೆ ಹೊಡೆದುಕೊಂಡ ನಶೆಯಲ್ಲಿದ್ದ ಸೂರ್ಯನನ್ನು ಡ್ರಾಗರ್ ನಿಂದ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಚುಚ್ವಿ ಕೊಂದಿದ್ದಾರಂತೆ. ಬಳಿಕ ಶ್ವೇತಾಳು ತಾನು ಸೂರ್ಯನ ಹೆಂಡತಿಯಲ್ಲ, ನಾನು ಆಗಾಗ್ಗೆ ಮನೆಗೆ ಬಂದು ಹೋಗುತ್ತೇನೆ. ನನ್ನನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಳಂತೆ. ಇದರಿಂದ ಆಕೆಯನ್ನು ಅವರೇ ಮೈಸೂರಿನ ಬೋಗಾದಿ ಬಳಿ ಡ್ರಾಪ್ ನೀಡಿರುವುದಾಗಿ ಕೊಲೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇಷ್ಟೆಲ್ಲ ಘಟನೆಯಾದ್ರೂ ಶ್ವೇತಾ ಯಾಕೆ ತಲೆ ಮರೆಸಿಕೊಂಡಿದ್ದಾಳೆ. ತಾನು ಕೊಲೆಗೆ ಸಹಕಾರ ನೀಡದಿದ್ದರು ಫೋನ್ ಸ್ವಿಚ್ ಮಾಡಿದ್ದು ಏಕೆ.? ಪೊಲೀಸರಿಗೆ ಮಾಹಿತಿ ನೀಡದ್ದು ಏಕೆ ಎಂಬ ಹಲವು ಅನುಮಾನಗಳು ಇನ್ನು ಕಾಡತೊಡಗಿವೆ. ಇದರಿಂದ ಪೊಲೀಸರು ಶ್ವೇತಾಳಿಗೂ ಕೂಡ ಬಲೆ ಬೀಸಿದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕವಷ್ಟೆ ಮತ್ತಷ್ಟು ವಿಚಾರ ಬಯಲಾಗಬೇಕಿದೆ.
