ಉಜಿರೆ (ಎ.15) : ಕೋವಿಡ್ ನಂತರದ ವರ್ಷಗಳಲ್ಲಿ ಮಾನಸಿಕ ಮತ್ತು ದೈಹಿಕಆರೋಗ್ಯದ ನಡುವಿನ ಸಮತೋಲನ ಕಾಯ್ದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದಕ್ಕನುಗುಣವಾಗಿಆರೋಗ್ಯ ವಿಮೆಯ ಕುರಿತ ಜಾಗೃತ ಪ್ರಜ್ಞೆ ಕ್ರಮೇಣ ವ್ಯಾಪಕವಾಗುತ್ತಿದೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯಅಧ್ಯಯನ ಮತ್ತು ಸಂಶೋಧನಾ ವಿಭಾಗವು ಆರೋಗ್ಯಪೂರ್ಣ ನಾಳೆಗಳಿಗಾಗಿ ಸದ್ಯದ ಹೂಡಿಕೆ ಆರೋಗ್ಯಕರ ಆರಂಭ, ಆಶಾದಾಯಕ ಭವಿಷ್ಯ ಕುರಿತು ಆಯೋಜಿಸಿದ ಎರಡು ದಿನಗಳ ವಿಚಾರ ಸಂಕಿರಣ ಮತ್ತು ಸ್ಪರ್ಧಾಕಾರ್ಯಕ್ರಮ ಸಂಭ್ರಮ ೨೦೨೫ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಾಂದರ್ಭಿಕ ಸಮಸ್ಯೆ ಹುಟ್ಟುಹಾಕಿತ್ತು. ಸಮಾಜಕಾರ್ಯದಂತಹ ಶೈಕ್ಷಣಿಕ ಜ್ಞಾನಶಿಸ್ತನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ಇಂತಹ ಸಾಂದರ್ಭಿಕ ಬಿಕ್ಕಟ್ಟುಗಳಿಗೆ ಸಾಮಾಜಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಮ್ಮ ಜ್ಞಾನವನ್ನು ವಿನಿಯೋಗಿಸಿದಾಗ ಬಹಳ ಜನರಿಗೆ ಪ್ರಯೋಜನ ದೊರಕುತ್ತದೆ.
ಆರೋಗ್ಯ ವಿಮೆಯ ಕುರಿತು ಜಾಗೃತ ಪ್ರಜ್ಞೆ ಮೂಡುವುದಕ್ಕೆ ಈ ಬಗೆಯ ಜ್ಞಾನಾನ್ವಯದ ಪ್ರಯತ್ನಗಳು ಪ್ರಮುಖ ಪಾತ್ರವಹಿಸಿವೆ. ಬರೀ ಜ್ಞಾನಾರ್ಜನೆಯಿಂದ ಪ್ರಯೋಜನವಿಲ್ಲ. ಪಡೆದ ಜ್ಞಾನವನ್ನು ಅನ್ವಯಿಸಿ ಸಾಮಾಜಿಕವಾಗಿ ಅದನ್ನು ಉಪಯುಕ್ತಗೊಳಿಸುವ ಕ್ರಮ ಪ್ರಧಾನ ಪಾತ್ರವಹಿಸುತ್ತದೆ ಎಂದರು.


ಇದೀಗ ಜಗತ್ತಿನಲ್ಲಿ ಜ್ಞಾನದ ಲಭ್ಯತೆ ವ್ಯಾಪಕವಾಗಿದೆ. ತಾಂತ್ರಿಕ ಮಾಧ್ಯಮಗಳ ನೆರವಿನೊಂದಿಗೆ ಜ್ಞಾನವನ್ನು ಪಡೆಯುವ ದಾರಿಗಳು ತೆರೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಪ್ರಕ್ರಿಯೆಯನ್ನು ವಿನೂತನವಾಗಿ ಗ್ರಹಿಸಬೇಕು. ಪಡೆದ ಜ್ಞಾನ ಹೊಸ ಕಾಲದ ಅಗತ್ಯಗಳಿಗೆ ಹೇಗೆ ಅನ್ವಯಿಸಬೇಕು ಎಂಬ ಕೌಶಲ್ಯವನ್ನು ರೂಢಿಸಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಆಗ ಮಾತ್ರ ಉದ್ಯೋಗಾವಕಾಶಗಳ ಹೊಸ ದಿಕ್ಕು ತೋಚುತ್ತದೆ ಎಂದು ಹೇಳಿದರು.


ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ, ಸಂಭ್ರಮ ಸ್ಪರ್ಧಾ ಉತ್ಸವದ ಸಂಚಾಲಕಿ ಸ್ವಾತಿ.ಬಿ ಉಪಸ್ಥಿತರಿದ್ದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ರವಿಶಂಕರ್ ಕೆ.ಆರ್. ಮಾತನಾಡಿ, ಸಮಾಜಕಾರ್ಯ ವಿಭಾಗದ ಪ್ರಯೋಗಶೀಲ ಹೆಜ್ಜೆಗಳ ವಿವರ ನೀಡಿದರು. ಮುಂಬರುವ ವರ್ಷದಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ಳಲಿರುವ ವಿಭಾಗದ ವಿಶೇಷತೆಯನ್ನು ಪರಿಚಯಿಸಿದರು.
ಸಂಭ್ರಮ 2025 ರ ವಿದ್ಯಾರ್ಥಿ ಪ್ರತಿನಿಧಿಗಳಾದ ಶರಣ್ ಶೆಟ್ಟಿ ಮತ್ತು ತೇಜಸ್ವಿನಿ ಕೋಟ್ಯಾನ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಗಳಾದ ಪ್ರಿಯ, ಕೇಝಿಯಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಶರಣ್ ಶೆಟ್ಟಿ ವಂದಿಸಿದರು.
