ಬೆಳ್ತಂಗಡಿ :(ಮೇ.8) ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶೇಷ ಚೇತನರಿಗೆ ವೀಲ್ ಚೇರ್ ಮತ್ತು ವಾಕರ್ ವಿತರಣೆ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: 🔴ಉಜಿರೆ : ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ
ಈ ಸಂದರ್ಭದಲ್ಲಿ ತೆಂಕಕಾರಂದೂರು ಗ್ರಾಮದ ಮೊಹಮ್ಮದ್ ರಾಜೀಕ್, ಬಳಂಜ ಗ್ರಾಮದ ಕೇಶವ ದೇವಾಡಿಗ ಮತ್ತು ರಾಜೀವಿ ಎಂಬ ಮೂರು ಜನ ಫಲಾನುಭವಿಗಳಿಗೆ ಎರಡು ವೀಲ್ ಚೇರ್ ಮತ್ತು ಒಂದು ವಾಕರ್ ಅನ್ನು ಹಸ್ತಾಂತರಿಸಲಾಯಿತು.
ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್, ಜನರಲ್ಲಿ ಸೇವಾ ಭಾವನೆಯನ್ನು ಮೂಡಿಸಲು ಮತ್ತು ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡಲು ರೋಟರಿ ಕ್ಲಬ್ ಬಹುದೊಡ್ಡ ವೇದಿಕೆಯಾಗಿದೆ. ದೈಹಿಕ ನ್ಯೂನತೆ ಇರುವವರು ಮಾನಸಿಕವಾಗಿ ಸದೃಡರಾಗಬೇಕು.ಅಶಕ್ತರನ್ನು ಸಶಕ್ತರನ್ನಾಗಿ ರೂಪಿಸುವುದೇ ರೋಟರಿಯ ಧ್ಯೇಯ ಎಂದರು.


ರೋಟರಿ ಕ್ಲಬ್ ಬೆಳ್ತಂಗಡಿ ಸದಸ್ಯ ರೋ.ರೋನಾಲ್ಡ್ ಲೋಬೋ ಮಾತನಾಡಿ, ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜಕ್ಕೆ ನೀಡುವುದರಲ್ಲಿ ದೇವರ ಅನುಗ್ರಹ ಮತ್ತು ಆರ್ಶಿವಾದ ಇದೆ. ಇದರಿಂದ ಸಮಾಜವು ಸುಧಾರಿಸುತ್ತದೆ, ಆತ್ಮ ಸಂತೃಪ್ತಿಯು ಹೆಚ್ಚುತ್ತದೆ. ಸಮಾಜ ಮುಖಿ ಕಾರ್ಯಗಳಿಂದ ಸಮಾಜದೊಂದಿಗಿನ ಒಡನಾಟ ಹೆಚ್ಚುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಳಂಜ ಗ್ರಾಮ ಪಂಚಾಯತ್ ನ ಪಿಡಿಒ ಗಣೇಶ್ ಶೆಟ್ಟಿ ಮಾತನಾಡಿ, ರಾಜಕೀಯ ಪಕ್ಷಗಳಿಗೆ, ಧಾರ್ಮಿಕ ಸಂಘಟನೆಗಳಿಗೆ ಮತ್ತು ಜಾತೀಯ ಗುಂಪುಗಳಿಗೆ ಸಾಮಾಜದೊಂದಿಗೆ ಬೆರೆತುಕೊಳ್ಳಲು ಇತಿಮಿತಿಗಳಿರುತ್ತವೆ. ಆದರೆ ರೋಟರಿಯಂತ ಸಂಸ್ಥೆ ಮಾತ್ರ ಜಾತಿ ಮಥ ಪಂಥಗಳನ್ನು ಮೀರಿ ಸಮಾಜದ ಅಶಕ್ತರಿಗೆ ಸೇವೆಯನ್ನು ಮಾಡುತ್ತದೆ. ರೋಟರಿಯು ಈಗಾಲೇ ಹತ್ತಾರು ಮೂಲಭೂತ ಸೌಕರ್ಯಗಳನ್ನು ಬೆಳ್ತಂಗಡಿ ಪರಿಸರಕ್ಕೆ ತಂದು ಕೊಟ್ಟಿದೆ. ಈ ಬೆಳವಣಿಗೆಯ ನಡುವೆ ಬಳಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಿವಾರ್ಯ ಇದ್ದ ವಿಶೇಷ ಚೇತನರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಬಂದಂತಹ ಅತಿಥಿಗಳಿಗೆ ಪಿಡಿಒ ಗಣೇಶ್ ಶೆಟ್ಟಿ, ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಬಟ್ಟೆಯ ಬ್ಯಾಗ್ ಗಳನ್ನು ಕೊಟ್ಟು ಪ್ಲಾಸ್ಟಿಕ್ ಮುಕ್ತ ಪಂಚಾಯತ್ ಮತ್ತು ಮಹಿಳಾ ಸಬಲೀಕರಣ ಯೋಜನೆಗೆ ಪ್ರೋತ್ಸಾಹ ನೀಡಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಶೋಭಾ ಮಾಧವ ಕುಲಾಲ್, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಸಿಬ್ಬಂದಿ ಆನಂದ್ ನಾಯ್ಕ್ ವಂದಿಸಿದರು.

