ಉಜಿರೆ:(ಮೇ.26) ಶಿಕ್ಷಣವು ಒಂದು ತಪಸ್ಸು. ಅದು ಸಿದ್ಧಿಸಲು ಕಠಿಣ ಪರಿಶ್ರಮ ಹಾಗೂ ನಿರಂತರ ಕಲಿಕೆ ಸಹಾಯಕಾರಿ. ಪ್ರಶ್ನಿಸುವ ಹವ್ಯಾಸ ಉತ್ತಮ. ಒಳ್ಳೆಯ ಸಂಗತಿಗಳನ್ನು ಉತ್ತಮ ರೀತಿಯಿಂದ ಸ್ವೀಕರಿಸಿ, ಅಹಂಕಾರವನ್ನು ತ್ಯಜಿಸಿದರೆ ಜೀವನ ಸಾರ್ಥಕ. ಕೇವಲ ಓದಿನಿಂದ ಕಲಿಕೆ ಸಾಧ್ಯ ಇಲ್ಲ. ಕಲಿಕೆಯು ಶಿಕ್ಷಣದ ಒಂದು ಭಾಗ. ಶಿಕ್ಷಣದೊಂದಿಗೆ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳು ನೀಡುತ್ತವೆ, ಎಂದು ಖ್ಯಾತ ವಾಗ್ಮಿ ಮುನಿರಾಜ ರೆಂಜಾಳ ತಿಳಿಸಿದರು.

ಇದನ್ನೂ ಓದಿ: ☘ಬೆಳ್ತಂಗಡಿ: ವಾಗೀಶ್ ವಿ 68 ಆಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ ಟೈಟಲ್ ಪೋಸ್ಟರ್ ಬಿಡುಗಡೆ
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮೇ 26 ರಂದು ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ಮಕ್ಕಳಿಗೆ ಆಯೋಜಿಸಿದ ಪ್ರಶಿಕ್ಷಣ ಕಾರ್ಯಕ್ರಮ ಪ್ರವೇಶಂ ನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವಿನಯದ ಜೊತೆಗೆ ವಿವೇಕವನ್ನು ಕಲಿಸುವುದೇ ನಿಜವಾದ ಶಿಕ್ಷಣ. ಕಾಲೇಜು ಶಿಕ್ಷಣ ಕೇವಲ ಅಂಕ ಗಳಿಸುವುದು ಮಾತ್ರವಲ್ಲದೆ, ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಜೀವನದಲ್ಲಿ ಸಾಧನೆ ಮುಖ್ಯ. ಶ್ರಮ ಪಡುವ ಸಂಕಲ್ಪದಿಂದ ಸಂಪಾದಿಸುವ ಶಿಕ್ಷಣ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಹೆತ್ತವರ ಶ್ರಮ ಪ್ರತಿ ವಿದ್ಯಾರ್ಥಿಗಳಿಗೂ ತಿಳಿದಿರಬೇಕು. ಜೀವನದಲ್ಲಿ ಉನ್ನತಿಗೆ ಮನುಷ್ಯನಲ್ಲಿ ಋಣ ಪ್ರಜ್ಞೆ ಇರಬೇಕು. ಆತ್ಮವಿಶ್ವಾಸದಿಂದ ಬದುಕಿದರೆ ಗೆಲುವು ಸಾಧ್ಯ. ಪುಸ್ತಕದ ಹುಳುವಾಗದೆ, ಆತ್ಮವಿಶ್ವಾಸದಿಂದ ಬದುಕಿದರೆ ಸರ್ವೋಚ್ಚ ಗುರಿ ತಲುಪಲು ಸಾಧ್ಯ,
ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಮಾರ್ಗದರ್ಶಕ ಪ್ರೊ ಎಸ್ ಎನ್ ಕಾಕತ್ಕಾರ್ ಮಾತನಾಡಿ, ಆಶಾವಾದಿಗಳಾಗಿ, ಸಕಾರಾತ್ಮಕ ಚಿಂತನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಿರ್ದಿಷ್ಟ, ಸಾಧನೆಗೆ ಪೂರಕ ಗುರಿ ಹೊಂದಿದರೆ ಶಕ್ಷಣಿಕ ಪ್ರಗತಿ ಸಾಧ್ಯ ಎಂದು ಶುಭ ಹಾರೈಸಿದರು.
ಹಿರಿಯರ ಮಾರ್ಗದರ್ಶನ ಪಾಲಿಸಿದರೆ ಜೀವನದಲ್ಲಿ ಯಶಸ್ಸು ಖಂಡಿತ ಸಾಧ್ಯ. ಹೆತ್ತವರ ತ್ಯಾಗಕ್ಕೆ ಬೆಲೆ ನೀಡಿದರೆ, ಪ್ರತಿಫಲ ನಮ್ಮದಾಗುತ್ತದೆ. ಜೀವನದಲ್ಲಿ ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಪಡೆಯಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ
ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ ಅಭಿಪ್ರಾಯಪಟ್ಟರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ರಾಜು ಎ ಎ ವಂದಿಸಿದರು. ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಮತ್ತು ಆಂಗ್ಲ ಭಾಷಾ ಉಪನ್ಯಾಸಕಿ ನಿಹರಿಕಾ ಜಿ ಎನ್ ಕಾರ್ಯಕ್ರಮ ನಿರೂಪಿಸಿದರು.




