ಮಿಯ್ಯಾರು:(ಮೇ.28) ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ವೈದ್ಯಕೀಯ ಸೇವೆ ನೀಡುವುದರ ಜೊತೆಯಲ್ಲಿ ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಜನರಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಮಾಹಿತಿ ಶಿಬಿರಗಳನ್ನು ಆಯೋಜಿಸುತ್ತಿದ್ದು, ಕಾಯರ್ತಡ್ಕದ ಮಿಯ್ಯಾರು ಇಲ್ಲಿ ಡೆಂಗ್ಯೂ ಜಾಗೃತಿ ಶಿಬಿರ ಆಯೋಜಿಸಿ ಇಲ್ಲಿನ ಜನರಿಗೆ ಡೆಂಗ್ಯೂ ಮಾಹಿತಿಯನ್ನು ನೀಡಲಾಯಿತು.

ಕಾಯರ್ತಡ್ಕ ಮಿಯ್ಯಾರು ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಇಲ್ಲಿನ ಜನರ ಬೇಡಿಕೆಯ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ದನ್ ಮತ್ತು ಇಲ್ಲಿನ ವೈದ್ಯರ ನೆರವಿನೊಂದಿಗೆ ಡೆಂಗ್ಯೂ ಜಾಗೃತಿ ಶಿಬಿರ ನಡೆಸಲಾಯಿತು.



ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಎಂ.ಡಿ ಫಿಸಿಶಿಯನ್ ಆಗಿರುವ ಡಾ| ಸಾತ್ವಿಕ್ ಜೈನ್ ಡೆಂಗ್ಯೂ ಬಗ್ಗೆ ಮಾಹಿತಿ ನೀಡಿದರು. ಡೆಂಗ್ಯೂ ಲಕ್ಷಣಗಳು, ರೋಗ ಬಾರದಂತೆ ವಹಿಸಬೇಕಾದ ಸುರಕ್ಷತಾ ಮತ್ತು ಮುಂಜಾಗೃತ ಕ್ರಮ, ಚಿಕಿತ್ಸೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆ ಲಭ್ಯವಿದ್ದು, ಪ್ಲೆಟ್ಲೆಟ್ ಕೊರತೆ ಉಂಟಾದ ರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗ್ಯೂ ಬಾಧಿತ ರೋಗಿಗಳು ಭಯ ಪಡುವ ಅಗತ್ಯವಿಲ್ಲ ಎಂದರು.
ಮಿಯ್ಯಾರು ಒಕ್ಕೂಟದ ಅಧ್ಯಕ್ಷೆ ಅಪೂರ್ವ, ಹಾಗೂ ಉಪಾಧ್ಯಕ್ಷರಾದ ಸಂಜೀವ, ಕೆಮ್ಮಟೆ ಒಕ್ಕೂಟದ ಅಧ್ಯಕ್ಷ ಗಣೇಶ್ ಸಾಲ್ಯಾನ್ ಇವರು ಉಪಸ್ಥಿತರಿದ್ದರು.


