Mysore :(ಮೇ.28) ಮಗಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋದಳೆಂದು ಮನನೊಂದು ಒಂದೇ ಕುಟುಂಬದ ಮೂವರು ಸಾಮೂಹಿಕವಾಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ : 🟣ವೇಣೂರು: ವೇಣೂರಿನಲ್ಲಿ ಕುಣಿತ ಭಜನಾ ತರಬೇತಿ ಉದ್ಘಾಟನೆ
ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ದುರಂತ ನಡೆದಿದ್ದು, ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶನಿವಾರ ಮುಂಜಾನೆ ಜಲಾಶಯಕ್ಕೆ ಆಗಮಿಸಿದ ಮೂವರೂ ಡೆತ್ ನೋಟ್ ಬರೆದು, ದಡದಲ್ಲಿ ಬೈಕ್ ನಿಲ್ಲಿಸಿ, ನೀರಿಗೆ ಹಾರಿದ್ದಾರೆ. ಮೃತ ಮಹದೇವಸ್ವಾಮಿಯ ಹಿರಿಯ ಪುತ್ರಿ ಅರ್ಪಿತಾ ಮನೆಬಿಟ್ಟು ಹೋಗಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದೀಗಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ಸಾವಿನ ಸತ್ಯ ಬಯಲಾಗಿದೆ.

ಅಂದಹಾಗೆ ಮಹದೇವಸ್ವಾಮಿ ಎಂಬಾತ ತನ್ನ ಕಿರಿಯ ಮಗಳಿಂದ ಆತ್ಮಹತ್ಯೆಗೆ ಮುನ್ನ ಈ ಡೆತ್ನೋಟ್ ಬರೆಸಿದ್ದಾನೆ, ಇದರಲ್ಲಿ ಕುಟುಂಬದ ಅವಮಾನ ಮತ್ತು ಖಿನ್ನತೆಯ ಕಥೆಯನ್ನು ವಿವರಿಸಲಾಗಿದೆ. ಎರಡು ವರ್ಷಗಳ ಹಿಂದೆ, ಮಹದೇವಸ್ವಾಮಿಯ ತಮ್ಮನ ಹೆಂಡತಿ ಕೇರಳದ ಕೂಲಿ ಕೆಲಸಗಾರನೊಂದಿಗೆ ಓಡಿಹೋಗಿದ್ದಳು. ಈ ಘಟನೆಯಿಂದ ಕುಟುಂಬಕ್ಕೆ ಭಾರೀ ಅವಮಾನವಾಯಿತು. ಈ ಅವಮಾನವನ್ನು ಭರಿಸಲಾಗದೆ ಕುಟುಂಬವು ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿತ್ತು. ಆದರೆ, ವಯಸ್ಸಾದ ತಂದೆ-ತಾಯಿಯ ಜೀವನಾವಧಿಯವರೆಗೆ ಕಾಯಬೇಕೆಂದು ತೀರ್ಮಾನಿಸಿದ್ದರು. ತಂದೆ-ತಾಯಿಯ ಅಂತ್ಯಕ್ರಿಯೆಯ ನಂತರವೇ ಆತ್ಮಹತ್ಯೆ ಮಾಡಿಕೊಳ್ಳುವ ಯೋಜನೆಯನ್ನು ಮಹದೇವಸ್ವಾಮಿ ರೂಪಿಸಿದ್ದರು.
ಡೆತ್ನೋಟ್ನಲ್ಲಿ ಮಹದೇವಸ್ವಾಮಿ ತಮ್ಮನ ಮಕ್ಕಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. ತಮ್ಮನ ಮಕ್ಕಳು ಚಿಕ್ಕವರಾಗಿರುವುದರಿಂದ ಅವರನ್ನು ಕೊಲ್ಲುವ ಅಧಿಕಾರ ತಮಗಿಲ್ಲ ಎಂದು ಬರೆದಿದ್ದಾರೆ. ಬದಲಿಗೆ, ಅವರಿಗೆ ಉತ್ತಮ ಭವಿಷ್ಯವನ್ನು ಒಡ್ಡಲು ತೀರ್ಮಾನಿಸಿದ್ದರು. ಆದರೆ, ತಮ್ಮ ಹಿರಿಯ ಮಗಳ ವಿಷಯದಲ್ಲಿ ಮತ್ತೊಂದು ಆಘಾತ ಎದುರಾಗಿತ್ತು. ಹಿರಿಯ ಮಗಳು ಭರತ್ ಎಂಬ ಹುಡುಗನೊಂದಿಗೆ ಪ್ರೀತಿಯಲ್ಲಿದ್ದಳು. ಆತನಿಗೆ ಈ ಹಿಂದೆ ಲವ್ ಬ್ರೇಕ್ಅಪ್ ಆಗಿತ್ತು ಎಂದು ಕುಟುಂಬಕ್ಕೆ ತಿಳಿದಿತ್ತು. ಈ ಬಗ್ಗೆ ಮಗಳಿಗೆ ಎಷ್ಟೇ ಸಲಹೆ ನೀಡಿದರೂ, ಆಕೆ ರಿಜಿಸ್ಟರ್ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಳು. ಈ ಘಟನೆಯಿಂದ ಮತ್ತಷ್ಟು ಖಿನ್ನತೆಗೆ ಒಳಗಾದ ಕುಟುಂಬ, ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಮುಂದಾಯಿತು.

ಡೆತ್ನೋಟ್ನಲ್ಲಿ ಮಹದೇವಸ್ವಾಮಿ ತಮ್ಮ ಆಸ್ತಿಯ ಬಗ್ಗೆಯೂ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಬೂದನೂರು ಗ್ರಾಮದ ಮನೆ, ಎಚ್.ಡಿ.ಕೋಟೆಯ ಮನೆ ಮತ್ತು ಜಮೀನನ್ನು ತಮ್ಮನಿಗೆ ನೀಡಬೇಕು ಎಂದು ಬರೆದಿದ್ದಾರೆ. ಮನೆಯಲ್ಲಿದ್ದ 2.5 ಲಕ್ಷ ರೂಪಾಯಿಗಳನ್ನು ಸಹೋದರನಿಗೆ ಹಸ್ತಾಂತರಿಸಲು ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ತಮ್ಮ ಆಸ್ತಿಯನ್ನು ಮಗಳಿಗೆ ನೀಡಬಾರದು ಎಂದು ಒತ್ತಿಹೇಳಿದ್ದಾರೆ. ಜೊತೆಗೆ, ತಮ್ಮ ಶವವನ್ನು ಅಗ್ನಿಗೆ ಆಹುತಿಯಾಗಿ ಸಂಸ್ಕಾರ ಮಾಡಬೇಕು, ಹೂಳಬಾರದು ಎಂದು ತಿಳಿಸಿದ್ದಾರೆ. ಆತ್ಮಹತ್ಯೆಗೆ ಮುನ್ನ, ಮಹದೇವಸ್ವಾಮಿ ಗೂಗಲ್ ಪೇ ಮೂಲಕ ತಾವು ಕೊಡಬೇಕಿದ್ದ ಹಣವನ್ನು ಸಂಬಂಧಿಕರಿಗೆ ಪಾವತಿಸಿದ್ದಾರೆ.



