ಮಂಗಳೂರು:(ಮೇ.29) ಪಿಕಪ್ ವಾಹನದ ಚಾಲಕ ಅಬ್ದುಲ್ ರಹೀಂ ಹತ್ಯೆ ಸೂತ್ರಧಾರ ಭರತ್ ಕುಮ್ಡೇಲ್ನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ 24 ಗಂಟೆಯ ಒಳಗಡೆ ಬಂಧಿಸಬೇಕು. ಇಲ್ಲದಿದ್ದರೆ ಎಸ್ಪಿ ಕಚೇರಿ ಚಲೋ ಸಹಿತ ದ.ಕ. ಜಿಲ್ಲಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದೆಂದು ಎಸ್ಡಿಪಿಐ ದ.ಕ. ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷ ಮೂನಿಷ್ ಅಲಿ ಎಚ್ಚರಿಕೆ ನೀಡಿದ್ದಾರೆ.

ಗ್ಯಾಂಗ್ವಾರ್ನಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿಯ ಹತ್ಯೆಯ ನಂತರ ಜಿಲ್ಲೆಯ ಹಲವು ಭಾಗಗಳಲ್ಲಿ ಮುಸ್ಲಿಂ ಯುವಕರ ಹತ್ಯಾಯತ್ನ ನಡೆದಿತ್ತು. ಅಲ್ಲದೆ ಸಂಘಪರಿವಾರದ ನಾಯಕರಾದ ಭರತ್ ಕುಮ್ಡೇಲ್, ಶ್ರೀಕಾಂತ್ ಶೆಟ್ಟಿ, ಶಿವಾನಂದ ಮೆಂಡನ್ ಸಹಿತ ಹಲವು ಸಂಘ ಪರಿವಾರದ ನಾಯಕರು ಹತ್ಯೆಗೆ ಪ್ರತೀಕಾರ ನಡೆಸುತ್ತೇವೆ ಎಂದು ಬಹಿರಂಗವಾಗಿ ಭಾಷಣಗೈದು ಮುಸ್ಲಿಂ ಯುವಕರ ಹತ್ಯೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರೂ ಕೂಡ ಪೋಲಿಸ್ ಇಲಾಖೆ ಹಾಗೂ ಸರಕಾರ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿಲ್ಲ.


ಅದರ ಪರಿಣಾಮ ಕೊಳ್ತಮಜಲುವಿನಲ್ಲಿ ಅಬ್ದುಲ್ ರಹೀಂನ ಹತ್ಯೆಯಾಗಿದೆ. ಈ ಕೊಲೆಯಲ್ಲಿ ಭರತ್ ಕುಮ್ಡೇಲ್ನ ಕೈವಾಡ ಇರುವುದು ಪೊಲೀಸ್ ಇಲಾಖೆಗೆ ತಿಳಿದಿದ್ದರೂ ಕೂಡ ಈ ತನಕ ಈತನ ಮೇಲೆ ಕ್ರಮವಾಗಿಲ್ಲ. ಗುರುವಾರ ಸಂಜೆಯೊಳಗೆ ಈತನ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ಎಸ್ಪಿ ಕಚೇರಿ ಚಲೋ ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.


