Sat. May 31st, 2025

Belthangady: ಆಕಾಶವಾಣಿ ಕೇಂದ್ರದ ಸೂರ್ಯನಾರಾಯಣ ಭಟ್ಟರಿಗೆ ಸನ್ಮಾನ

ಬೆಳ್ತಂಗಡಿ: (ಮೇ.29) ಮೇ ತಿಂಗಳ ಅಂತ್ಯದಲ್ಲಿ ನಿವೃತ್ತರಾಗಲಿರುವ ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಪಿ. ಎಸ್ ಸೂರ್ಯನಾರಾಯಣ ಭಟ್ ಇವರನ್ನು ಶ್ರೀಮದವೂರ ವಿಘ್ನೇಶ ಕಲಾ ಸಂಘ ಗೇರುಕಟ್ಟೆ ವತಿಯಿಂದ ಆಕಾಶವಾಣಿ ಕೇಂದ್ರದಲ್ಲಿ ಸನ್ಮಾನಿಸಲಾಯಿತು.

ಇದನ್ನೂ ಓದಿ: 🟣ಉಜಿರೆ: ಜಾಗತಿಕ ಯುವ ಶೃಂಗಸಭೆಗೆ ಆದಿತ್ಯ ಹೆಚ್.ಎಸ್ ಆಯ್ಕೆ

ಕ್ರಿಯಾಶೀಲ ವ್ಯಕ್ತಿತ್ವದ ಸೂರ್ಯನಾರಾಯಣ ಭಟ್ಟರು ಕಾವ್ಯಯಾನ, ಕಥಾಮೃತ, ಕೃಷಿರಂಗ, ತುಳು- ಕನ್ನಡ ಸಂದರ್ಶನ, ಯಕ್ಷ ಸಿರಿ, ಯಕ್ಷಗಾನ ತಾಳಮದ್ದಳೆ ಸಂಯೋಜನೆಯ ಮೂಲಕ ಬಾನುಲಿ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ವಿಘ್ನೇಶ ಕಲಾ ಸಂಘದ ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಸಿದ್ಧ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ,ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಸುಂದರ ಕೃಷ್ಣ ಮಧೂರು, ಉಪನ್ಯಾಸಕಿ ಸುವರ್ಣ ಕುಮಾರಿ ಕಲ್ಲೂರಾಯ, ಸುರೇಶ ಕಲ್ಲೂರಾಯ ಮಧೂರು, ದಿನೇಶ್ ಭಟ್ ಬಳಂಜ, ರಾಮಪ್ರಕಾಶ್ ಕಲ್ಲೂರಾಯ, ಉದಯ ಶಂಕರ ಭಟ್ ಮಜಲು, ಯೋಗೀಶ್ ಆಚಾರ್ಯ ಉಳೆಪ್ಪಾಡಿ, ಆಕಾಶವಾಣಿ ತಾಂತ್ರಿಕ ವಿಭಾಗದ ಚಂದ್ರಶೇಖರ ಶೆಟ್ಟಿ, ಚೈತನ್ಯ ಪ್ರಶಾಂತ್ ಉಪಸ್ಥಿತರಿದ್ದರು.

ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಸೂರ್ಯನಾರಾಯಣ ಭಟ್ಟರು ಆಕಾಶವಾಣಿ ಮಾಧ್ಯಮದ ಮೂಲಕ ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರದ ಸಾಮಾನ್ಯರಿಂದ ತೊಡಗಿ ವಿದ್ವಾಂಸರವರೆಗೆ ಹಾಗೂ ಆಕಾಶವಾಣಿ ಅಪಾರ ಕೇಳುಗರ ನಿಕಟ ಸಂಪರ್ಕ ಸಾಧ್ಯವಾಗಿದೆ ಎಂದರು.

ಸುವರ್ಣ ಕುಮಾರಿ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಘ್ನೇಶ ಕಲಾಸಂಘದ ಸದಸ್ಯರಿಂದ ಕಾರ್ತವೀರ್ಯಾರ್ಜುನ -ಭಾರ್ಗವ ವಿಜಯ ತಾಳಮದ್ದಳೆಯ ಧ್ವನಿಮುದ್ರಣ ನಡೆಯಿತು.

Leave a Reply

Your email address will not be published. Required fields are marked *