Akshata Pai: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಮೂಲ್ಕಿ ಮೂಲದ ಮಾನಂಪಾಡಿ ಬಳಿಯ ಯುವತಿಯೊಬ್ಬಳು ಪತಿ ಎದುರಿನಲ್ಲಿಯೇ ಮೃತಪಟ್ಟಿದ್ದಾರೆ.
ಅಕ್ಷತಾ ಪೈ ಮೃತ ಮಹಿಳೆ. ಸಿಎ ಪದವೀಧರೆಯಾಗಿದ್ದ ಅಕ್ಷತಾ ಪೈ ಒಂದೂವರೆ ವರ್ಷದ ಹಿಂದೆ ಉತ್ತರ ಕನ್ನಡ ಸಿದ್ದಾಪುರ ಮೂಲತಃ ಸಾಫ್ಟ್ವೇರ್ ಇಂಜಿನಿಯರ್ ಆಶಯ್ ಜೊತೆ ಮದುವೆಯಾಗಿದ್ದು, ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿ ಉದ್ಯೋಗದಲ್ಲಿದ್ದರು.

ಮೃತ ಅಕ್ಷತಾ ಅವರ ಪತಿ ಆಶಯ ಅಂಬಳ್ಳಿ ಅವರು ಘಟನೆಯನ್ನು ನೆನೆದು ಕಣ್ಣೀರಿಟ್ಟರು. “ನಾನು ಮತ್ತು ನನ್ನ ಪತ್ನಿ ಅಕ್ಷತಾ, ಆರ್ಸಿಬಿ ತಂಡದ ದೊಡ್ಡ ಅಭಿಮಾನಿಗಳು. ತಂಡದ ವಿಜಯೋತ್ಸವವನ್ನು ಕಣ್ತುಂಬಿಕೊಳ್ಳಲು ಅರ್ಧ ದಿನ ರಜೆ ಹಾಕಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದೆವು. ಆದರೆ, ಅಲ್ಲಿ ಸೇರಿದ್ದ ಅಪಾರ ಜನಸಮೂಹ ಗೇಟಿಂದ ಒಳನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ಕೈಮೀರಿತು. ಕಾಲ್ತುಳಿತ ಉಂಟಾದಾಗ ನಾನು ಬ್ಯಾರಿಕೇಡ್ ನ ಸಹಾಯದಿಂದ ನಿಂತಿದ್ದೆ, ಅಕ್ಷತಾಳ ಕೈಯನ್ನೂ ಗಟ್ಟಿಯಾಗಿ ಹಿಡಿದಿದ್ದೆ. ಆದರೆ, ಜನರ ತಳ್ಳಾಟದ ರಭಸಕ್ಕೆ ನಾವಿಬ್ಬರೂ ಕೆಳಗೆ ಬಿದ್ದೆವು. ಯಾರೋ ನನ್ನನ್ನು ಮೇಲಕ್ಕೆಳೆದರು. ಆದರೆ ಅಕ್ಷತಾಳ ಸುಳಿವೇ ಇರಲಿಲ್ಲ,” ಎಂದು ಆಶಯ ತಮ್ಮ ದುಃಖವನ್ನು ತೋಡಿಕೊಂಡರು.



ತಕ್ಷಣವೇ ಪತ್ನಿಯನ್ನು ಹುಡುಕಲು ಪ್ರಾರಂಭಿಸಿದ ಆಶಯ, ಪೊಲೀಸರನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. “ಹತಾಶನಾಗಿ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ವಿಚಾರಿಸುತ್ತಾ ಹೋದೆ. ಕೊನೆಗೆ, ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ನನ್ನ ಅಕ್ಷತಾಳ ಪಾರ್ಥಿವ ಶರೀರ ಪತ್ತೆಯಾಯಿತು,” ಎಂದು ಹೇಳಿ ಅತ್ತರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರಾದ ಅಕ್ಷತಾ, ವೃತ್ತಿಯಲ್ಲಿ ಪ್ರತಿಭಾವಂತ ಚಾರ್ಟಡ್ ಅಕೌಂಟೆಂಟ್ ಆಗಿದ್ದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು, ಕೇವಲ ಒಂದೂವರೆ ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸಾಫ್ಟವೇರ್ ಇಂಜಿನಿಯರ್ ಆಶಯ ಅಂಬಳ್ಳಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಕ್ರಿಕೆಟ್. ಅದರಲ್ಲೂ ಆರ್ಸಿಬಿ ತಂಡದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಅಕ್ಷತಾ, ವಿಜಯೋತ್ಸವದ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಕನಸಿನೊಂದಿಗೆ ತೆರಳಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.
