ಉಜಿರೆ:(ಜೂ.10) ಯುವಕರ ಆಸಕ್ತಿಗೆ ಅನುಗುಣವಾದ ಉದ್ಯೋಗಾವಕಾಶಗಳ ಲಭ್ಯತೆ ಮತ್ತು ಸದ್ಭಳಕೆಯಿಂದ ಭಾರತವು ವಿವಿಧ ರಂಗಗಳಲ್ಲಿ ವಿಶ್ವಮಟ್ಟದ ಸ್ಪರ್ಧೆಯನ್ನೊಡ್ಡಿ ಮುಂಚೂಣಿ ಸ್ಥಾನ ಗಳಿಸಬಹುದು ಎಂದು ಧರ್ಮಸ್ಥಳದ ಎಸ್ಕೆಡಿಆರ್ಡಿಪಿ ಬಿ.ಸಿ ಟ್ರಸ್ಟ್ ಸಿ.ಇ.ಒ ಅನಿಲ್ ಕುಮಾರ್ ಎಸ್.ಎಸ್ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಹಾಗೂ ರಿಲಯನ್ಸ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿತ ಮೂರು ದಿನಗಳ ವೃತ್ತಿಪರ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮಆಸಕ್ತಿಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರೆ ಹೆಚ್ಚು ಸೃಜನಶೀಲತೆಯೊಂದಿಗೆ ತೊಡಗಿಸಿಕೊಳ್ಳಬಲ್ಲರು. ಸಮರ್ಪಣೆ ಭಾವದೊಂದಿಗೆ ಕಾರ್ಯನಿರ್ವಹಿಸಬಲ್ಲರು. ಇದರಿಂದ ನವೀನ ಆವಿಷ್ಕಾರ ಸಾಧ್ಯವಾಗುತ್ತದೆ. ಗುಣಮಟ್ಟದ ಉದ್ಯಮಶೀಲತೆ ರೂಢಿಯಾಗುತ್ತದೆ. ಈ ಮೂಲಕ ಜಾಗತಿಕ ಸ್ಪರ್ಧೆಗೆ ಬೇಕಾದ ಸಾಮರ್ಥ್ಯ ರೂಢಿಯಾಗುತ್ತದೆ ಎಂದರು.
ಯುವಕರು ತಮ್ಮ ಹಂಬಲ ಮತ್ತು ಕೌಶಲ್ಯಕ್ಕೆ ಹೊಂದುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡರೆ, ಹೊಸ ಕಲ್ಪನೆಗಳಿಗೆ ಉತ್ತೇಜನ ಸಿಗುತ್ತದೆ. ಆಸಕ್ತಿಯಿಂದ ಮಾಡಿದ ಕೆಲಸ ಹೆಚ್ಚು ನಿಷ್ಠೆಯಿಂದ ನಡೆಯುತ್ತದೆ. ವ್ಯಕ್ತಿಗತ ತೃಪ್ತಿಯ ಜೊತೆಗೆ ರಾಷ್ಟ್ರದ ಆರ್ಥಿಕ, ತಾಂತ್ರಿಕ ಪ್ರಗತಿಗೂ ಸಹಾಯಕವಾಗುತ್ತದೆ. ಇದರಿಂದ ನವೀನ ತಂತ್ರಜ್ಞಾನಗಳ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜಾಗತಿಕ ಸ್ಪರ್ಧೆಯಲ್ಲಿ ಭಾರತದ ಸ್ಥಾನ ಬಲಪಡಿಸುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಯುವಜನತೆ ಪೂರಕ ಕೌಶಲ್ಯವಿಲ್ಲದೆ ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟರೆ ವೃತ್ತಿಪರ ತೃಪ್ತಿ ಸಾಧ್ಯವಾಗುವುದಿಲ್ಲ. ಕೌಶಲ್ಯದ ಅಭಾವವು ವ್ಯಕ್ತಿಯ ವಿಕಾಸವನ್ನುತಡೆಯುವುದಷ್ಟೇ ಅಲ್ಲ, ದೇಶದ ಉತ್ಪಾದಕತೆ ಮತ್ತು ನಾವೀನ್ಯತೆಯ ಮೇಲೆಯೂ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲ ಕಾರ್ಪೊರೇಟ್ ಸಂಸ್ಥೆಗಳು ವಿದ್ಯಾರ್ಥಿಗಳನ್ನು ವಿವಿಧ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿವೆ. ಕಡಿಮೆ ವೇತನ, ಉಚಿತ ಇಂಟರ್ನ್ಷಿಪ್ ಹೆಸರಲ್ಲಿ ಮೂಲಭೂತ ಅಗತ್ಯಗಳನ್ನು ಪೂರೈಸದೇ ಅಗತ್ಯ ಅವಧಿಗಿಂತ ಹೆಚ್ಚಾಗಿ ದುಡಿಸಿಕೊಳ್ಳಲಾಗುತ್ತಿದೆ. ಸ್ಪಷ್ಟ ವೃತ್ತಿಪರ ಮಾರ್ಗದರ್ಶನವಿಲ್ಲದ್ದರಿಂದ ಈ ರೀತಿಯ ಶೋಷಣೆಗಳಾಗುತ್ತವೆ. ಈ ಬಗೆಯ ಶೋಷಣೆಯು ಭವಿಷ್ಯದಲ್ಲಿ ಸಮರ್ಥ ಯುವಕರ ಹಿನ್ನಡೆಗೆ ಕಾರಣವಾಗುತ್ತದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಮ್ಯಾಜಿಕ್ ಬಸ್ ಫೌಂಡೇಶನ್ ಎಂಸಿಎಸ್ಆರ್ ಪ್ರಾಜೆಕ್ಟ್ ಮ್ಯಾನೇಜರ್ ಧವನ್ಗೌಡ ಮಾತನಾಡಿದರು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಅವರಲ್ಲಿನ ವ್ಯಾವಹಾರಿಕ ಕೌಶಲ್ಯ ಹಾಗೂ ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿಗೆಒತ್ತು ನೀಡುವುದು ಬಹಳ ಅಗತ್ಯವಾಗಿದೆ. ಸಮಾಜಕಾರ್ಯ ವೃತ್ತಿಯು ನೇರವಾಗಿ ಜನರಜೊತೆ ಸಂಪರ್ಕ ಹೊಂದಿರುವ ಕ್ಷೇತ್ರ. ವಿದ್ಯಾರ್ಥಿಗಳು ಉತ್ತಮ ಗ್ರಹಿಸುವಿಕೆ, ಸಂವೇದನೆ, ಸ್ಪಷ್ಟ
ಸಂವಹನ ಕೌಶಲ್ಯ, ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯ ನಿರ್ವಹಣೆ, ಸಮಸ್ಯೆ ಪರಿಹಾರಗುಣ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುವುದು ಬಹುಅಗತ್ಯವಾಗಿದೆ ಎಂದರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಪುಸ್ತಕ ಜ್ಞಾನವಷ್ಟೇ ಮುಖ್ಯವಲ್ಲ. ಆತ್ಮವಿಶ್ವಾಸ ಹಾಗೂ ನಿರ್ಧಾರ ತೆಗೆದುಕೊಳ್ಳುವ ಧೈರ್ಯವು ವ್ಯಕ್ತಿತ್ವದ ಅವಿಭಾಜ್ಯ ಅಂಶಗಳು. ವೃತ್ತಿಪರಕೌಶಲ್ಯತರಬೇತಿ ಕಾರ್ಯಾಗಾರಗಳಿಂದ ಈ ಆತ್ಮವಿಶ್ವಾಸ, ಧೈರ್ಯ ಸಾಧ್ಯವಾಗುತ್ತದೆ ಎಂದರು.ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಲು ತರಬೇತಿ ಕಾರ್ಯಾಗಾರಗಳು, ಪ್ರಾಯೋಗಿಕ ಚಟುವಟಿಕೆಗಳು ಹಾಗೂ ಕ್ಷೇತ್ರಕಾರ್ಯದ ಅನುಭವಗಳು ಸಹಾಯಕವಾಗುತ್ತವೆ. ವೃತ್ತಿಜೀವನದ ಸಾಮರ್ಥ್ಯವನ್ನು ರೂಢಿಸುತ್ತವೆ. ಸಮಾಜಕಾರ್ಯ ವಿಭಾಗದ ಮುಖ್ಯಸ್ಥಡಾ.ರವಿಶಂಕರ್ಕೆ.ಆರ್ ಉಪಸ್ಥಿತರಿದ್ದರು. ಡಾ.ಅತುಲ್.ಎಸ್.ಸೆಮಿತ್ ಸ್ವಾಗತಿಸಿದರು. ಸ್ವಾತಿ ಬಿ . ಸ್ವಾಗತಿಸಿದರು, ಡಾ. ದಾನೇಶ್ವರಿ ವಂದಿಸಿದರು.




