ಮೈಸೂರು:(ಜೂ.11) ಫೇಸ್ಬುಕ್ ಮೂಲಕ ಪರಿಚಯವಾಗಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ರಿಜಿಸ್ಟರ್ಡ್ ವಿವಾಹವಾದ ನಂತರ ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಪಂಜ ಮೂಲದ ವೈದ್ಯರೊಬ್ಬರ ವಿರುದ್ಧ ಮೈಸೂರಿನ ಯುವತಿಯೊಬ್ಬಳು ದೂರು ದಾಖಲಿಸಿದ್ದಾರೆ. ಈ ಸಂಬಂಧ ವೈದ್ಯ ಹಾಗೂ ಅವರ ಕುಟುಂಬದ ಸದಸ್ಯರ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಏನಿದು ಪ್ರಕರಣ:
ಪಂಜದ ವೆಂಕಟ್ರಮಣ ಭಟ್ಟರ ಪುತ್ರ ಡಾ. ಆದರ್ಶ್ ಅವರು ಫೇಸ್ಟುಕ್ ಮೂಲಕ ತಮ್ಮನ್ನು ಪರಿಚಯಿಸಿಕೊಂಡು, ವಿವಾಹದ ಭರವಸೆ ನೀಡಿದ್ದರು. ಈ ಭರವಸೆಯ ಮೇಲೆ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿ, ನಂತರ ರಿಜಿಸ್ಟರ್ಡ್ ವಿವಾಹವಾಗಿದ್ದರು. ಆದರೆ, ಇದೀಗ ತಮ್ಮ ತಂದೆ ತಾಯಿಯ ವಿರೋಧವಿದೆ ಎಂಬ ಕಾರಣ ನೀಡಿ, ತಮ್ಮನ್ನು ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿ ವಂಚಿಸುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ಅನೂಹ್ಯ ಅವರು ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ದೂರಿನಲ್ಲಿ ಡಾ. ಆದರ್ಶ್ ಮಾತ್ರವಲ್ಲದೆ, ಅವರ ತಂದೆ ವೆಂಕಟ್ರಮಣ ಭಟ್, ತಾಯಿ ಶಶಿಕಲಾ, ಮತ್ತು ಸಹೋದರರಾದ ಆದಿತ್ಯ ಭಟ್ ಹಾಗೂ ರಜಿತ್ ಭಟ್ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಕೋರಿದ್ದಾರೆ.


ಪ್ರಕರಣವು ಮೊದಲು ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ನಂತರ ತನಿಖೆಗಾಗಿ ಸುಬ್ರಹ್ಮಣ್ಯ ಠಾಣೆಗೆ ಹಸ್ತಾಂತರಗೊಂಡಿತ್ತು. ಆದರೆ, ಹೈಕೋರ್ಟ್ನ ಆದೇಶದ ಅನ್ವಯ, ಪ್ರಕರಣವನ್ನು ಮರಳಿ ಮೈಸೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಮೈಸೂರು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ನಡುವೆ, ತಮ್ಮ ಬಂಧನವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಡಾ. ಆದರ್ಶ್ ಮತ್ತು ಅವರ ತಂದೆ ವೆಂಕಟರಮಣ ಭಟ್ ಅವರು ನಿರೀಕ್ಷಣಾ ಜಾಮೀನು ಹಾಗೂ ಪ್ರಕರಣಕ್ಕೆ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಈವರೆಗೆ ಯಾವುದೇ ಕಾನೂನಾತ್ಮಕ ಪರಿಹಾರ ದೊರೆತಿಲ್ಲ ಎಂದು ತಿಳಿದುಬಂದಿದೆ.

ವೈದ್ಯ ವೃತ್ತಿಯಲ್ಲಿರುವ ವ್ಯಕ್ತಿಯೊಬ್ಬರ ಮೇಲೆ ಗಂಭೀರ ಸ್ವರೂಪದ ಆರೋಪ ಕೇಳಿಬಂದಿರುವ ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪೊಲೀಸ್ ತನಿಖೆ ಪೂರ್ಣಗೊಂಡ ನಂತರವಷ್ಟೇ ಪ್ರಕರಣದ ಸತ್ಯಾಸತ್ಯತೆಗಳು ಬೆಳಕಿಗೆ ಬರಲಿವೆ.
