Kantara Chapter 1 : ಅಕ್ಟೋಬರ್ 2ರಂದು ರಿಲೀಸ್ ಆಗಲಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಸಾಲು ಸಾಲು ಹಿನ್ನಡೆ ಆಗುತ್ತಿದೆ. ಈ ಮೊದಲು ಕಲಾವಿದರು ತೆರಳುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಯಿತು. ಆ ಬಳಿಕ ತಂಡದ ಇಬ್ಬರು ಆರ್ಟಿಸ್ಟ್ಗಳು ಸಾವನ್ನಪ್ಪಿದರು. ಈಗ ಚಿತ್ರದ ಜೂನಿಯರ್ ಆರ್ಟಿಸ್ಟ್ ವಿಜು ವಿಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ರೀತಿಯ ಕೆಟ್ಟ ಘಟನೆಗಳು ಸಾಲು ಸಾಲಾಗಿ ನಡೆಯುತ್ತಿರುವುದನ್ನು ನೋಡಿದರೆ ದೈವದ ಎಚ್ಚರಿಕೆ ನಿಜವಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ದೈವದ ಎಚ್ಚರಿಕೆ:
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿರುವ ಸೂಚನೆ ಸಿಕ್ಕ ಬೆನ್ನಲ್ಲೇ ಅವರು ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ ಮತ್ತು ಜಾರಂದಾಯ ದೈವದ ಉತ್ಸವದಲ್ಲಿ ಭಾಗಿ ಆಗಿದ್ದರು. ಆಗ ರಿಷಬ್ಗೆ ದೈವ ಎಚ್ಚರಿಕೆಯನ್ನು ನೀಡಿತ್ತು. ‘ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ’ ಎಂದು ಎಚ್ಚರಿಸಿತ್ತು. ಅಲ್ಲದೆ, ಜಾಗೃತವಾಗಿರಲು ದೈವ ಸೂಚನೆ ನೀಡಿತ್ತು. ಈಗ ಎಚ್ಚರಿಕೆ ನಿಜವಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ನಿರಂತರ ಸಾವು:
ಅದು 2024ರ ನವೆಂಬರ್ ತಿಂಗಳು. ಶೂಟಿಂಗ್ ಸಲುವಾಗಿ ಜೂನಿಯರ್ ಕಲಾವಿದರನ್ನು ಕರೆದುಕೊಂಡು ಹೋಗಿದ್ದ ಮಿನಿ ಬಸ್ ಪಲ್ಟಿ ಆಗಿತ್ತು. ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಈ ಘಟನೆ ನಡೆದಿತ್ತು. ಆರು ಮಂದಿ ಈ ಘಟನೆಯಲ್ಲಿ ಗಾಯಗೊಂಡರು.
ಮೇ ತಿಂಗಳಿಂದ ಈಚೆಗೆ ‘ಕಾಂತಾರ: ಚಾಪ್ಟರ್ 1’ ತಂಡದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಎಂಎಫ್ ಕಪಿಲ್ ಅವರು ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿ ನಿಧನ (ಮೇ) ಹೊಂದಿದ್ದರು. ‘ಆ ದಿನ ಯಾವುದೇ ಶೂಟಿಂಗ್ ಇರಲಿಲ್ಲ. ಹೀಗಾಗಿ, ಇದಕ್ಕೂ ಕಾಂತಾರ ಚಿತ್ರಕ್ಕೂ ಯಾವುದೇ ಲಿಂಕ್ ಮಾಡಬೇಡಿ’ ಎಂದು ತಂಡ ಕೇಳಿಕೊಂಡಿತ್ತು.


ಇದಾದ ಕೆಲವೇ ದಿನ ಅಂದರೆ ಮೇ 12ರಂದು ‘ಕಾಂತಾರ’ ಚಿತ್ರದ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟರು. ಇವರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಇವರು ಮೃತಪಟ್ಟಿದ್ದು ಅನೇಕರಿಗೆ ಅರಗಿಸಿಕೊಳ್ಳಲೂ ಸಾಧ್ಯವಾಗಿಲ್ಲ. ರಾಕೇಶ್ ಅಂತ್ಯಕ್ರಿಯೆಗೆ ರಿಷಬ್ ಶೆಟ್ಟಿ ಅವರು ತೆರಳಿಲ್ಲ ಎಂಬ ಬಗ್ಗೆ ಕೆಲವರು ತಕರಾರು ತೆಗೆದರು. ಆ ಬಳಿಕ ರಿಷಬ್ ಕುಟುಂಬವನ್ನು ಭೇಟಿ ಮಾಡಿದರು.

ಈಗ ಮತ್ತೊಂದು ಅವಘಡ ಸಂಭವಿಸಿದೆ. ಕೇರಳದ ತ್ರಿಶೂರ್ನ ವಿಜು ವಿಕೆ ಎಂಬುವವರು ‘ಕಾಂತಾರ’ ಸಿನಿಮಾ ಶೂಟ್ಗಾಗಿ ಕರ್ನಾಟಕಕ್ಕೆ ಬಂದಿದ್ದರು. ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು. ಜೂನ್ 11ರಂದು ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಹೃದಯಾಘಾತ ಆಗಿದೆ.

