ಕಾಸರಗೋಡು:(ಜೂ.14) ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳದ ನರ್ಸ್ ಮಹಿಳೆಯೊಬ್ಬರ ಬಗ್ಗೆ ಅವಾಚ್ಯ ನಿಂದಿಸಿ ಪೋಸ್ಟ್ ಮಾಡಿದ್ದ ಕಾಸರಗೋಡು ಜಿಲ್ಲೆಯ ಡೆಪ್ಯುಟಿ ತಹಶೀಲ್ದಾರ್ ಪವಿತ್ರನ್ ಅವರನ್ನು ಕಾಸರಗೋಡು ಜಿಲ್ಲಾಧಿಕಾರಿ ಇಂಬಾಸೇಕರ್ ಅಮಾನತು ಮಾಡಿದ್ದಾರೆ.

ಪತ್ತನಂತಿಟ್ಟ ಜಿಲ್ಲೆ ಮೂಲದ ರಂಜಿತಾ ನಾಯರ್ ಲಂಡನ್ ನಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದು, ಅಹ್ಮದಾಬಾದ್ ನಿಂದ ನೇರ ಲಂಡನ್ ತೆರಳುತ್ತಿದ್ದ ಬೋಯಿಂಗ್ ವಿಮಾನ ಹತ್ತಿದ್ದರು. ಆದರೆ ವಿಮಾನ ದುರಂತದಲ್ಲಿ ರಂಜಿತಾ ದುರಂತ ಸಾವನ್ನಪ್ಪಿದ್ದರು. ಈ ವಿಚಾರವನ್ನು ಸರಕಾರಿ ಅಧಿಕಾರಿಯಾಗಿರುವ ಪವಿತ್ರನ್ ಅಣಕಿಸಿ ಪೋಸ್ಟ್ ಮಾಡಿದ್ದರು. ಅಲ್ಲದೇ, ಆಕೆಯ ಜಾತಿಯನ್ನು ನಿಂದಿಸಿ ಪೋಸ್ಟ್ ಗಳನ್ನು ಹಾಕಿದ್ದರು. ಈ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಭಾರೀ ಆಕ್ರೋಶ ವ್ಯಕ್ತವಾಗಿತ್ತು.


ಇಷ್ಟಾಗುತ್ತಲೇ ವೆಳ್ಳರಿಕುಂಡು ತಾಲೂಕಿನ ಡೆಪ್ಯುಟಿ ತಹಸೀಲ್ದಾರ್ ಪವಿತ್ರನ್ ಅವರನ್ನು ಹೊಸದುರ್ಗ ಪೊಲೀಸರು ವಶಕ್ಕೆ ಪಡೆದಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೇಳಿಕೆಯನ್ನೂ ದಾಖಲಿಸಿದ್ದರು. ಇದೇ ವೇಳೆ, ಕಂದಾಯ ಸಚಿವ ಕೆ.ರಾಜನ್, ಆರೋಪಿತ ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಆದೇಶ ಮಾಡಿದ್ದಾರೆ. ಇದೇ ಪವಿತ್ರನ್ ಈ ಹಿಂದೆಯೂ ಶಾಸಕ ಇ.ಚಂದ್ರಶೇಖರನ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿ ಅಮಾನತು ಆಗಿದ್ದರು.


