Sat. Jun 14th, 2025

Plane Crash: ಹೆಂಡತಿಯ ಚಿತಾಭಸ್ಮ ಬಿಡಲು ಲಂಡನ್​ನಿಂದ ಬಂದಿದ್ದ ಗಂಡನೇ ವಿಮಾನ ಅಪಘಾತದಲ್ಲಿ ಬೂದಿಯಾದ..!

ಅಹಮದಾಬಾದ್ (ಜೂ.14): ಗುಜರಾತ್​​ನ ಅಹಮದಾಬಾದ್​ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಕೇವಲ ಓರ್ವ ವ್ಯಕ್ತಿಯನ್ನು ಬಿಟ್ಟು ಉಳಿದವರೆಲ್ಲರೂ ಸುಟ್ಟು ಕರಕಲಾಗಿದ್ದಾರೆ. ಈ ದುರಂತದಲ್ಲಿ ಸಾವನ್ನಪ್ಪಿದವರ ಒಂದೊಂದೇ ಕತೆಗಳು ಹೊರಬರುತ್ತಿವೆ. ಭವಿಷ್ಯದ ಬಗ್ಗೆ ಕನಸುಗಳನ್ನು ಇಟ್ಟುಕೊಂಡು ಲಂಡನ್​ಗೆ ಹೊರಟಿದ್ದ ಭಾರತೀಯರ ಕತೆ ಒಂದೆಡೆಯಾದರೆ ವಿದೇಶದಿಂದ ಭಾರತಕ್ಕೆ ಪ್ರವಾಸ ಬಂದಿದ್ದ ಪ್ರವಾಸಿಗರ ದುರಂತ ಕತೆ ಇನ್ನೊಂದೆಡೆ. ಇದರ ಜೊತೆಗೆ ಅಹಮದಾಬಾದ್​​ನ ವ್ಯಕ್ತಿಯೊಬ್ಬರು ತಮ್ಮ ಹೆಂಡತಿಯ ಕೊನೆ ಆಸೆ ಈಡೇರಿಸಲು ಆಕೆಯ ಚಿತಾಭಸ್ಮ ವಿಸರ್ಜನೆಗೆ ಅಹಮದಾಬಾದ್​​ಗೆ ಲಂಡನ್​​ನಿಂದ ಬಂದವರು ತಾವೇ ಸುಟ್ಟು ಬೂದಿಯಾಗಿದ್ದಾರೆ ಎಂಬ ಕತೆ ಎಂಥವರನ್ನೂ ಭಾವುಕರನ್ನಾಗಿಸದೇ ಇರದು.

ಇದನ್ನೂ ಓದಿ: ☘ಉಜಿರೆ : ಅನುಗ್ರಹ ವಿದ್ಯಾ ಸಂಸ್ಥೆಯಲ್ಲಿ ಪಾಲಕರ ಹಬ್ಬ ಆಚರಣೆ

ಅಹಮದಾಬಾದ್‌ನಲ್ಲಿ ಸಂಭವಿಸಿದ ಭಯಾನಕವಾದ ಏರ್ ಇಂಡಿಯಾ ವಿಮಾನ ಅಪಘಾತದ ನಂತರ, ಒಬ್ಬೊಬ್ಬರ ಮನಕಲಕುವ ಕಥೆಗಳು ಹೊರಬರುತ್ತಿವೆ. ಪ್ರತಿಯೊಂದೂ ಒಂದಕ್ಕಿಂತ ಒಂದು ಹೆಚ್ಚು ಹೃದಯವಿದ್ರಾವಕವಾಗಿದೆ. ಅವುಗಳಲ್ಲಿ ಒಂದು ದುರಂತ ಕತೆ ಇಲ್ಲಿದೆ. 7 ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದ ತನ್ನ ಪತ್ನಿಯ ಕೊನೆಯ ಆಸೆಯನ್ನು ಪೂರೈಸಲು ಲಂಡನ್‌ನಿಂದ ಅಹಮದಾಬಾದ್‌ಗೆ ಹಾರಿದ ವ್ಯಕ್ತಿ ಈಗ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಅವರ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಲಂಡನ್‌ನಲ್ಲಿ ಅನಾಥರಾಗಿದ್ದಾರೆ.

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ವಾಡಿಯಾ ಗ್ರಾಮದವರಾದ, ಇದೀಗ ಲಂಡನ್ ನಿವಾಸಿಯಾಗಿರುವ ಅರ್ಜುನ್‌ಭಾಯ್ ಮನುಭಾಯ್ ಪಟೋಲಿಯಾ ಕೆಲವೇ ದಿನಗಳ ಹಿಂದೆ ಅಹಮದಾಬಾದ್‌ಗೆ ಆಗಮಿಸಿದ್ದರು. ಅವರ ಪತ್ನಿ ಭಾರತಿಬೆನ್ ಕೇವಲ 1 ವಾರದ ಹಿಂದೆ ಲಂಡನ್‌ನಲ್ಲಿ ನಿಧನರಾಗಿದ್ದರು. ಅವರ ಪೂರ್ವಜರ ಗ್ರಾಮದ ನೀರಿನಲ್ಲಿಯೇ ಅವರ ಚಿತಾಭಸ್ಮವನ್ನು ವಿಸರ್ಜಿಸಬೇಕೆಂಬುದು ಅವರ ಅಂತಿಮ ಆಸೆಯಾಗಿತ್ತು. ಹೀಗಾಗಿ, 8 ಮತ್ತು 4 ವರ್ಷದ ಸಣ್ಣ ಹೆಣ್ಣುಮಕ್ಕಳನ್ನು ಲಂಡನ್​​ನಲ್ಲಿಯೇ ಬಿಟ್ಟು ಅರ್ಜುನ್ ಒಬ್ಬಂಟಿಯಾಗಿ ಭಾರತಕ್ಕೆ ಬಂದಿದ್ದರು. ಹೆಂಡತಿಯ ಅಂತಿಮ ವಿಧಿಯನ್ನು ಈಡೇರಿಸಿದ ನಂತರ ಗುರುವಾರ ಅವರು ಲಂಡನ್​ಗೆ ವಾಪಾಸ್ ಹೊರಟಿದ್ದರು. ಆಗಲೇ ವಿಮಾನ ಅಪಘಾತವಾಗಿ ಅವರು ಸುಟ್ಟು ಬೂದಿಯಾಗಿದ್ದಾರೆ. ಇದರಿಂದ ಅವರ ಮಕ್ಕಳು ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ವಿದೇಶದಲ್ಲಿ ಅನಾಥರಾಗಿದ್ದಾರೆ.

ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದ ಇಬ್ಬರು ಪುಟ್ಟ ಹುಡುಗಿಯರು ಲಂಡನ್‌ನಲ್ಲಿ ತಮ್ಮ ತಂದೆಗಾಗಿ ಕಾಯುತ್ತಿದ್ದರು. ಒಂದು ವಾರದೊಳಗೆ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದೇವೆಂದು ಅವರಿಗೆ ತಿಳಿದಿಲ್ಲ. ಅವರಿನ್ನೂ ಅಪ್ಪನಿಗಾಗಿ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *