Sat. Jun 28th, 2025

Kudyadi: 44ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸದ್ಧರ್ಮ ಸಭಾಭವನ ಉದ್ಘಾಟನೆ

ಕುದ್ಯಾಡಿ: (ಜೂ.28)ಕುದ್ಯಾಡಿ ಗ್ರಾಮಸ್ಥರೆಲ್ಲ ಸೇರಿ ಸುಸಜ್ಜಿತ ರೀತಿಯಲ್ಲಿ ಸಭಾಂಗಣ ನಿರ್ಮಿಸಿದ್ದು ಸಂತಸ ನೀಡಿದೆ, ಶಾಸಕರ ನಿಧಿಯಿಂದ ಸಭಾಭವನಕ್ಕೆ ಅನುದಾನ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಇದನ್ನೂ ಓದಿ: ⭕Puttur: ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು.!

ಕುದ್ಯಾಡಿ ಗ್ರಾಮದ ಸದ್ಧರ್ಮ ಯುವಕ ಮಂಡಲ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಒಕ್ಕೂಟದ ಸಹಯೋಗದಲ್ಲಿ ನಡೆದ ನೂತನ ಸದ್ಧರ್ಮ ಸಭಾಭವನದ ಉದ್ಘಾಟನೆ ಹಾಗೂ 44ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇನ್ನೋರ್ವ ಅತಿಥಿ, ಕೊಕ್ಕಡ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ತುಷಾರ ಮಾತನಾಡಿ, ಸದ್ಧರ್ಮ ಯುವಕ ಮಂಡಲ ಹಲವಾರು ವರ್ಷಗಳಿಂದ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಇನ್ನಷ್ಟು ಸತ್ಕಾರ್ಯಗಳು ನೆರವೇರಲಿ. ನನ್ನ ಊರು ನನ್ನ ಹೆಮ್ಮೆ ಎಂದರು.

ಶ್ರೀ ಕ್ಷೇತ್ರ ಧ.ಗ್ರಾ. ಯೋಜನಾಧಿಕಾರಿ ಅಶೋಕ್ ಮಾತನಾಡಿ, ಸತ್ಕಾರ್ಯ ಮಾಡಿದರೆ ಸತ್ಫಲ ಖಚಿತ. 44 ವರ್ಷಗಳ ಕಠಿಣ ಪರಿಶ್ರಮ, ಸೇವೆಗೆ ಫಲ‌ ಸಿಕ್ಕಿದೆ. ಸಭಾಂಗಣ ನಿರ್ಮಾಣ ಆಗಿದೆ. ಸಮುದಾಯಕ್ಕೆ ಕಾರ್ಯಕ್ರಮ ನಡೆಸಲು ಅನುಕೂಲವಾಗಲಿದೆ. ಸಭಾಂಗಣಕ್ಕೆ ಯೋಜನೆಯಿಂದ ಪೂರ್ಣ ಸಹಕಾರ ಇರಲಿದೆ ಎಂದರು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಮಾತನಾಡಿ, ಸಂಘಟನೆ ಬೆಳೆಯಲಿ, ಇನ್ನಷ್ಟು ಹೆಸರು ಬರಲಿ, ಸಹಕಾರ ಸಂಘದ ವತಿಯಿಂದ ಯುವಕ‌ ಮಂಡಲಕ್ಕೆ ನೆರವು ನೀಡಲು ಪ್ರಯತ್ನಿಸುತ್ತೇವೆ ಎಂದರು.

ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲ್ ಮಾತನಾಡಿ, ಚಿಕ್ಕ ಗ್ರಾಮವಾದರೂ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸೆಸೆಲ್ಸಿ ಸಾಧಕರನ್ನು ಗೌರವಿಸಲಾಯಿತು.

ಪ್ರಗತಿ ಬಂಧು ಒಕ್ಕೂಟದ ವತಿಯಿಂದ ಕುರ್ಚಿ ಹಸ್ತಾಂತರ ನಡೆಯಿತು.

ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅನ್ನದಾನ ಸೇವಾಕರ್ತರಾದ ಅನಂತರಾಜ್ ಪೂವಣಿ ಅಂತರಗುತ್ತು, ಶಶಿಕಾಂತ್ ಜೈನ್ ಮುಂಡಾಜೆಗುತ್ತು, ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು, ಅಚ್ಯುತ ಪೂಜಾರಿ ಕೊಡಿಬಾಳೆ, ಚಂದಪ್ಪ ಪೂಜಾರಿ ಕುದ್ಯಾಡಿ, ಸಮಿತಾ ರವಿ ಪೂಜಾರಿ ಕುದ್ಯಾಡಿ, ಸುಂದರ ಆಚಾರ್ಯ (ಯಜ್ಞೇಶ್) ಅಂತರೊತ್ತು ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿಗಳಾದ ಜಯಾನಂದ ಪೂಜಾರಿ ಕೊರಲ್ಲ, ಉಮಾನಾಥ ಸುವರ್ಣ, ಸುಲ್ಕೇರಿ ಗ್ರಾ.ಪಂ. ಉಪಾಧ್ಯಕ್ಷ ಶುಭಕರ ಪೂಜಾರಿ, ಸದಸ್ಯೆ ಯಶೋದಾ ಎಲ್. ಬಂಗೇರ, ಕುದ್ಯಾಡಿ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ರತ್ನಾಕರ ಎಚ್ ಹಿಮರಡ್ಡ, ಕುದ್ಯಾಡಿ ಸ.ಕಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವಕ ಮಂಡಲದ ಅಧ್ಯಕ್ಷ ಸದಾನಂದ ಬಿ. ಬಾಕ್ಯರಡ್ಡ ಪ್ರಸ್ತಾವಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಪ್ರಸಾದ್ ಬಿರ್ಮಜಿರಿ ವರದಿ ವಾಚಿಸಿದರು. ಸಜಿತ್ ಪಿಜತ್ಯರಡ್ಡ ವಂದನಾರ್ಪಣೆಗೈದರು.ಪ್ರಶಾಂತ್ ಎಚ್. ಹಿಮರಡ್ಡ ನಿರೂಪಿಸಿದರು.

ಸತ್ಯನಾರಾಯಣ ಪೂಜೆ ನಡೆದು, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಸಭಾಭವನ ಉದ್ಘಾಟನೆ:

ಇದಕ್ಕೂ ಮೊದಲು, ಬೆಳಗ್ಗೆ, ಸದ್ಧರ್ಮ ಯುವಕ ಮಂಡಲದ ನೂತನ ‘ಸದ್ಧರ್ಮ’ ಸಭಾಭವನದ ಉದ್ಘಾಟನೆಯನ್ನು ಅಳದಂಗಡಿಯ ಹಿರಿಯ ವೈದ್ಯ ಡಾ. ಎನ್.ಎಂ. ತುಳುಪುಳೆ ಅವರು ನೆರವೇರಿಸಿದರು.

ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, ಕುದ್ಯಾಡಿಯ ಯುವಕರಲ್ಲಿ ಕರ್ತೃತ್ವ ಶಕ್ತಿ, ಧೀಶಕ್ತಿ ಇದೆ. ಸದ್ಭಾವದೊಂದಿಗೆ ಮುನ್ನಡೆಯುವ ಮನಸ್ಸು ಇದೆ. ರಚನಾತ್ಮಕವಾಗಿ ಕೆಲಸ ಮಾಡುವ ಗುಣದಿಂದಾಗಿ ಯುವಕ ಮಂಡಲಕ್ಕೆ ಸುಂದರವಾದ ಸಭಾಂಗಣ ನಿರ್ಮಾಣ ಆಗಿದೆ. ಹೆಸರಿಗೆ ತಕ್ಕಂತೆ ಇಲ್ಲಿನ ಯುವಜನತೆ ಸದ್ಧರ್ಮದ ಹಾದಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಭಾಂಗಣವು ಗ್ರಾಮದ ಶುಭ ಕಾರ್ಯಗಳಿಗೆ ಬಳಕೆಯಾಗುವುದರೊಂದಿಗೆ ಸಮಾಜಮುಖಿ ಕಾರ್ಯಗಳಿಗೆ ಉಪಯೋಗ ಆಗಲಿ, ಆರೋಗ್ಯ ಮಾಹಿತಿ ಇತ್ಯಾದಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

“ನಿಮ್ಮ ಮೇಲೆ ನನಗೆ ಅತೀವ ಪ್ರೀತಿ ಇದೆ. ಈ ಸಭಾಂಗಣ ಕಟ್ಟಡದ ವಿಸ್ತರಣೆ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆದಲ್ಲಿ ಅದಕ್ಕೆ ನನ್ನ ಸಹಕಾರ ಇರಲಿದೆ” ಎಂದರು.

ಗ್ರಾಮದ ಹಿರಿಯರಾದ ಸಂಜೀವ ಪೂಜಾರಿ ಬಿರ್ಮಜಿರಿ, ಪ್ರಗತಿಪರ ಕೃಷಿಕ ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು, ಸುಲ್ಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭಕರ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳದಂಗಡಿ ವಲಯ ಮೇಲ್ವಿಚಾರಕಿ ಯಶೋದಾ, ಸದ್ಧರ್ಮ ಯುವಕ ಮಂಡಲದ ಅಧ್ಯಕ್ಷ ಸದಾನಂದ ಬಿ. ಬಾಕ್ಯರಡ್ಡ, ಕಾರ್ಯದರ್ಶಿ ಪ್ರಸಾದ್ ಬಿರ್ಮಜಿರಿ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ರತ್ನಾಕರ ಎಚ್. ಹಿಮರಡ್ಡ, ಕುದ್ಯಾಡಿ ಗರಡಿ ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ವಸಂತ ಪೂಜಾರಿ ಕುಲೆಚ್ಚಾವು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *