ಕಡಬ:(ಜು.13) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಡಬ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆಯಿತು.

ಇದನ್ನೂ ಓದಿ: 🟠ಮಂಗಳೂರು: ಶಾರೂಖ್ ಖಾನ್ ರೋಹನ್ ಕಾರ್ಪೊರೇಷನ್ ಬ್ರಾಂಡ್ ಅಂಬಾಸಿಡರ್ ಆಗಿ ಅಧಿಕೃತವಾಗಿ ಘೋಷಣೆ
ಮಂಗಳೂರು ವೃತ್ತ ಪರೀಕ್ಷಾರ್ಥಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಿಕೆ, ಮಾಧ್ಯಮಗಳು ನಮ್ಮ ಸುತ್ತ-ಮುತ್ತ ನಡೆಯುವ ಆಗು-ಹೋಗುಗಳನ್ನು ತಿಳಿಸುವ ಜೊತೆಗೆ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಭರಪೂರ ಮಾಹಿತಿಗಳನ್ನು ಒದಗಿಸುತ್ತದೆ. ಪತ್ರಿಕೆಗಳನ್ನು ಮೊಬೈಲ್ ನಲ್ಲಿ ಪತ್ರಿಕೆಗಳನ್ನು ಓದುವ ಬದಲು, ಪತ್ರಿಕೆಗಳನ್ನು ಕೊಂಡು ಓದಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಮಾಹಿತಿಗಿಂತ , ಪತ್ರಿಕೆ, ಪುಸ್ತಕಗಳ ಓದುವ ಮಾಹಿತಿ ಹೆಚ್ಚಿನ ಜ್ಞಾನವನ್ನು ನೀಡುತ್ತದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗುರುತಿನಿ ನವೀಕರಣ ಚೀಟಿ ವಿತರಿಸಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ಹಲವಾರು ಅವಕಾಶಗಳಿದೆ. ಮೊಬೈಲ್ ಬಂದ ಬಳಿಕ ವಿದ್ಯಾರ್ಥಿಗಳಿಗೆ ಕಲಿಕೆಯ ಮನಸ್ಸು ಕಡಿಮೆ ಆಗಿದೆ ಎಂದು ಶಿಕ್ಷಕರು ಹೇಳುತ್ತಾರೆ. ಆಗಾಗಿ ಮೊಬೈಲ್ ನಿಂದ ಆದಷ್ಟು ದೂರ ಇದ್ದು ಶಿಕ್ಷಣ, ಕಠಿಣ ಪರಿಶ್ರಮಕ್ಕೆ ಆದ್ಯತೆ ನೀಡಿ. ಉದ್ಯೋಗ ಪಡೆಯಲು ಶ್ರಮ ವಹಿಸಿ ಎಂದರು. ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗಳು ಕಡಿಮೆಯಾಗಿದ್ದು, ವಿದ್ಯಾರ್ಥಿಗಳ ಬಗ್ಗೆ ಹೆತ್ತವರು ಗಮನ ಹರಿಸಿ, ಕಲಿಕೆಗೆ ಪ್ರೇರಣೆ ನೀಡಬೇಕು ಎಂದ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಮಾಹಿತಿ, ತರಬೇತಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದರು. ಪತ್ರಿಕಾ ವಿತರಕರು ಮಾಡುವ ಕೆಲಸವನ್ನು ಗುರುತಿಸುವ ಕೆಲಸ ಇನ್ನಷ್ಟು ಆಗಬೇಕು ಎಂದರು.

ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಅಧ್ಯಕ್ಷತೆ ವಹಿಸಿದ್ದರು. ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ನಿರ್ದೇಶನ ವಂ.ಆ್ಯಂಟನಿ ಒವೈಸಿ, ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಾರ್ಜ್ ಟಿ.ಎಸ್., ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣ ಗೌಡ, ಪ್ರೌಢಶಾಲಾ ಮುಖ್ಯಗುರು ತೋಮಸ್ ಎ.ಕೆ., ಸಂಘದ ಕಾರ್ಯದರ್ಶಿ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯಿಲ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಗುರು ತೋಮಸ್ ಎ.ಕೆ. ವಂದಿಸಿದರು. ನಾಗರಾಜ್ ಎನ್.ಕೆ. ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಪಿ.ಪಿ.ವರ್ಗೀಸ್, ಅಭಿಲಾಷ್ ಪಿ.ಕೆ., ಕೃಷ್ಣ ಶೆಟ್ಟಿ ಕಡಬ, ಭಾಸ್ಕರ ರೈ ಕಟ್ಟ, ಪುಷ್ಪರಾಜ್ ಬಿ.ಎನ್., ಸಿದ್ದಿಕ್ ನೀರಾಜೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂಜಿಬಾಳ್ತಿಲದ ಹಿರಿಯ ಪತ್ರಿಕಾ ವಿತರಕಾ ಜಯಕುಮಾರ್ ಜೈನ್ ಕಲ್ಲುಗುಡ್ಡೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪತ್ನಿ ಸುರಭಿ ಜತೆಗಿದ್ದರು. ಪ್ರಶಾಂತ್ ಸನ್ಮಾನ ಪತ್ರ ವಾಚಿಸಿದರು.
