Sat. Jul 26th, 2025

ಬಂಟ್ವಾಳ: ವಕೀಲೆ, ಸಾಹಿತ್ಯ ಮತ್ತು ಇತರೆ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ರಾಜಶ್ರೀ ಜಯರಾಜ್ ಪೂಜಾರಿ ನಿಧನ

ಬಂಟ್ವಾಳ:(ಜು.25) ಅನಾರೋಗ್ಯದಿಂದ ಬಳಲುತ್ತಿದ್ದ ರಾಜಶ್ರೀ ಜಯರಾಜ್ ಪೂಜಾರಿ (ವ.25)ಯವರು ಇಂದು ಕೊನೆಯುಸಿರೆಳೆದಿದ್ದಾರೆ.

ಇವರು ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಇಂದು ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲೇ ಪ್ರಾಣಬಿಟ್ಟಿದ್ದಾರೆ.

ಸಾಧಕನಾಗಬೇಕಾದರೆ ಕೇವಲ ಕಠಿಣ ಪರಿಶ್ರಮವಿದ್ದರೆ ಸಾಲದು, ಅದರ ಜೊತೆಗೆ ತಾನು ಎಷ್ಟೇ ಎತ್ತರ ಬೆಳೆದರೂ ನಾನು, ನನ್ನದು ಎಂಬ ಅಹಂಭಾವ ಬಂದರೆ ಆತ ಎಂದಿಗೂ ಸಾಧಕನಾಗಲಾರ ಎಂಬ ಮಾತನ್ನು ತನ್ನ ಕಿರಿಯ ಪ್ರಾಯದಲ್ಲಿಯೇ ಜೀವನಕ್ಕೆ ಅಳವಡಿಸಿಕೊಂಡು, ತಾನು ಬೆಳೆಯುವುದಲ್ಲದೇ ಇತರ ಪ್ರತಿಭೆಗಳಿಗೂ ತನಗೆ ತಿಳಿದ ಕಡೆಯೆಲ್ಲಾ ಅವಕಾಶ ನೀಡಿಸುತ್ತಾ, ತಾನೆಷ್ಟೇ ಸಾಧನೆಯನ್ನು ಮಾಡಿದ್ದರೂ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು, ನಗುಮೊಗದಿಂದ ಎಲ್ಲರಿಗೂ ಚಿರಪರಿಚಿತರಾಗಿರುವ, ಹವ್ಯಾಸದಲ್ಲಿ ಕವಯಿತ್ರಿ, ಬರಹಗಾರ್ತಿ, ಲೇಖಕಿ, ಯುವಸಾಹಿತಿ, ವಾಗ್ಮಿ, ನಿರೂಪಕಿ, ಕಥಾವಾಚಕಿ, ಹಿನ್ನೆಲೆ ಧ್ವನಿ ಕಲಾವಿದೆ, ಯೋಗಪಟು, ರಂಗಭೂಮಿ ಕಲಾವಿದೆ, ಹವ್ಯಾಸಿ ಪ್ರವಾಸಿ, ಪುಸ್ತಕ ಪ್ರೇಮಿಯಾಗಿ ಹೀಗೆ ಹತ್ತು ಹಲವು ವಿಭಿನ್ನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವೃತ್ತಿಯಲ್ಲಿ ವಕೀಲೆಯಾಗಿರುವ ಸಾಹಿತ್ಯ ಮತ್ತು ಇತರೆ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿಕೊಂಡು ಬರುತ್ತಿರುವವರು ರಾಜಶ್ರೀ ಜಯರಾಜ್ ಪೂಜಾರಿ.

ಇದನ್ನೂ ಓದಿ; 🟣ಕನ್ಯಾಡಿ: ಸೇವಾಭಾರತಿಯಿಂದ ಬ್ಯಾಂಕ್ ನೋಟ್ ಪೇಪರ್ ಮಿಲ್ ಪ್ರೈವೇಟ್ ಲಿಮಿಟೆಡ್ ಗೆ ಭೇಟಿ

ಶ್ರೀಮತಿ ಸರೋಜಿನಿ ಮತ್ತು ಶ್ರೀ ಜಯರಾಜ್ ದಂಪತಿಗಳಿಗೆ ಜನವರಿ 16, 2000 ದಲ್ಲಿ ಬಂಟ್ವಾಳದಲ್ಲಿ ಜನಿಸಿ, ಅಲ್ಲಿಯೇ ತನ್ನ ಪ್ರಾಥಮಿಕ 4 ನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದು, ಮುಂದೆ ಮಂಗಳೂರಿನ ಎಕ್ಕಾರಿನ ಸಮೀಪದ ಪೆರ್ಮುದೆಯಲ್ಲಿ ವಾಸವಿರುವ ಇವರು ನಂತರ ಪ್ರೌಢಶಾಲಾ ಶಿಕ್ಷಣದವರೆಗೆ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಪಡೆದುಕೊಂಡು, ಪದವಿಪೂರ್ವ ಶಿಕ್ಷಣವನ್ನು 2017 ರಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜು, ಕಟೀಲು ಇಲ್ಲಿ ಪಡೆದುಕೊಂಡು, ನಂತರ ತಮ್ಮ ಐದು ವರ್ಷದ ( 2017 – 2022 ) ಕಾನೂನು ಶಿಕ್ಷಣವನ್ನು ಮಂಗಳೂರಿನ ಪ್ರತಿಷ್ಠಿತ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ಇದೀಗ ಎರಡು ವರ್ಷದಿಂದ ಮಂಗಳೂರಿನಲ್ಲಿ ವಕೀಲೆಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಇವರ ಕಿರಿಯ ಸಹೋದರ ಮನೋಜ್ ರವರು ಬೆಂಗಳೂರಿನಲ್ಲಿ ಎಸ್ – ವ್ಯಾಸ ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿ ಕ್ಲಿನಿಕಲ್ ಮನೋವಿಜ್ಞಾನದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ.

ಬಾಲ್ಯದಿಂದಲೂ ಇವರು ಓದಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ದಿನಪತ್ರಿಕೆ, ಮಾಸಪತ್ರಿಕೆ, ತುಂತುರು, ಬಾಲಮಂಗಳ, ಗಿಳಿವಿಂಡು, ಮಂಗಳ, ತುಷಾರ, ಸುಧಾ ಮತ್ತು ಕಥೆ, ಕಾದಂಬರಿ ಪುಸ್ತಕ ಇತ್ಯಾದಿ ಪುಸ್ತಕಗಳನ್ನು ಓದುವ ವಿಪರೀತ ಅಭ್ಯಾಸ ಇವರದಾಗಿತ್ತು. ಅದೇ ಅಭ್ಯಾಸ ಇವರನ್ನು ಇಂದು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದರೆ ತಪ್ಪಾಗಲಾರದು. ಕತೆ, ಪ್ರಬಂಧ, ಭಾಷಣ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಹುಮಾನ ಪಡೆಯುವುದರಲ್ಲಿ ಶಾಲಾ ದಿನಗಳಿಂದಲೇ ಇವರು ಮುಂಚೂಣಿಯಲ್ಲಿದ್ದ ವಿದ್ಯಾರ್ಥಿನಿ.

ಪ್ರೌಢಶಾಲಾ ವಿದ್ಯಾರ್ಥಿನಿ ಯಾಗಿದ್ದಾಗಲೇ ಇವರು ಶಾಲೆಯ ಇಂಟರಾಕ್ಟ್ ಘಟಕದ ನಾಯಕಿಯಾಗಿದ್ದರು. ಪ್ರಬಂಧ, ರಸಪ್ರಶ್ನೆಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದರು. 10ನೇ ತರಗತಿಯಲ್ಲಿ NTSE ರಾಷ್ಟೀಯ ಪ್ರತಿಭಾ ಪರೀಕ್ಷೆಯಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ 15 ದಿನಗಳ ವಿಶೇಷ ಸನಿವಾಸ ತರಬೇತಿಯಲ್ಲಿ ಶಾಲೆಯಿಂದ ಆಯ್ಕೆಗೊಂಡು ಶ್ಲಾಘನೆ ಪಡೆದುಕೊಂಡಿದ್ದರು. ತಾನು ಅತ್ಯಂತ ಕಷ್ಟದಿಂದ ಬೆಳೆದು ಬಂದರೂ ಕೂಡ ಓದಿನಲ್ಲಿ ಸದಾ ಮುಂದಿದ್ದ ವಿದ್ಯಾರ್ಥಿನಿ ಆಗಿದ್ದರು.

ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಪುತ್ತೂರು ಇವರು ನೀಡುವ ಕನ್ನಡ ಕುವರಿ ಪ್ರಶಸ್ತಿ – 2015 ಮತ್ತು ಗಡಿನಾಡ ಧ್ವನಿ ಕನ್ನಡ ಮಾಸಪತ್ರಿಕೆ ಆರ್ಲಪದವು ಇವರು ನೀಡುವ ಕನ್ನಡ ಧ್ವನಿ ಪ್ರಶಸ್ತಿ – 2016 ಯನ್ನು ಕೂಡ ಪಡೆದಿದ್ದಾರೆ.

ಮುಂದೆ ಪದವಿಪೂರ್ವ ಶಿಕ್ಷಣಕ್ಕೆ ಶ್ರೀ ದುರ್ಗಾಪರಮೇಶ್ವರಿ ಕಾಲೇಜು ಇಲ್ಲಿ ಕಲಾ ವಿಭಾಗಕ್ಕೆ ಸೇರಿದ ಇವರು ತರಗತಿಯಲ್ಲಿ ಓದಿನಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದ ವಿದ್ಯಾರ್ಥಿನಿ ಆಗಿದ್ದರು. ತನ್ನ ಕಲಿಕೆ ಮತ್ತು ಇತರೆ ಸಾಹಿತ್ಯಿಕ ಹವ್ಯಾಸಗಳಿಂದ ಕಾಲೇಜಿನ ಶಿಕ್ಷಕರಿಗೂ ಪರಿಚಿತರಾಗಿದ್ದರು. ಕಾಲೇಜಿನಲ್ಲಿ ಕತೆ, ಪ್ರಬಂಧ, ಲೇಖನ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಸದಾ ಮುಂದಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಇವರು. ಪದವಿಪೂರ್ವ ಶಿಕ್ಷಣ ಇಲಾಖೆ , ಕರ್ನಾಟಕ ಸರ್ಕಾರ ನಡೆಸುವ ಪಿಯುಸಿ ಯ ಎರಡು ವರ್ಷಗಳಲ್ಲೂ ಪ್ರಬಂಧ ಸ್ಪರ್ಧೆಯಲ್ಲಿ ಕಾಲೇಜನ್ನು ಜಿಲ್ಲಾಮಟ್ಟದಲ್ಲಿ ಪ್ರತಿನಿಧಿಸಿದ ಹೆಗ್ಗಳಿಗೆ ಇವರದಾಗಿದೆ. ಸತ್ಯಸಾಯಿ ಸೇವಾ ಸಂಸ್ಥೆ ನಡೆಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿಯೂ ಬಹುಮಾನ ಪಡೆದಿದ್ದಾರೆ. ಪಿಯುಸಿಯಲ್ಲಿ ಬೆಸ್ಟ್ ಸ್ಟೋರಿ ರೈಟರ್ ಆಫ್ ಡಿ ಇನ್ಸ್ಟಿಟ್ಯೂಷನ್ ಎಂಬ ಪ್ರಶಸ್ತಿ ಕೂಡಾ ಇವರಿಗೆ ಕಾಲೇಜಿನಲ್ಲಿ ಲಭಿಸಿದೆ. ಅಂತೆಯೇ 2016 ನೇ ಸಾಲಿನಲ್ಲಿ ಚಿಗುರು ಪತ್ರಿಕೆಯ ಕಾಲೇಜಿನ ಪ್ರತಿನಿಧಿಯೂ ಆಗಿದ್ದರು. ಓದಿನಲ್ಲಿಯೂ ಮುಂದಿದ್ದ ಇವರಿಗೆ ಹಲವಾರು ನಗದು ಬಹುಮಾನಗಳು ದೊರಕಿರುವುದು ಕೂಡ ಉಲ್ಲೇಖನಾರ್ಹ.
ದ್ವಿತೀಯ ಪಿಯುಸಿ ವರೆಗೂ ತಾನು ಎರಡು ಕೋಣೆಯಿದ್ದ ಪುಟ್ಟ ಮನೆಯಲ್ಲಿ ಚಿಮಿಣಿ ದೀಪದಲ್ಲೇ ಓದಿದರೂ ಕೂಡ ಎಲ್ಲಾ ಸೌಕರ್ಯಗಳಿದ್ದ ಇತರರಿಗಿಂತ ಒಂದು ಕೈ ಹೆಚ್ಚೇ ಎಂದು ತೋರಿಸಿಕೊಟ್ಟ ಜಾಣೆ. ಆಕೆಯದು ಸಣ್ಣ ಮನೆ, ಆ ಮನೆಯಲ್ಲಿ ವಿದ್ಯುತ್ ದೀಪದ ಸೌಕರ್ಯವಿಲ್ಲ, ಟಿವಿ, ಫ್ರಿಡ್ಜ್, ಫ್ಯಾನ್, ಯಾವುದೂ ಇಲ್ಲ ಎಂದು ಮಾತು ಮಾತಿಗೂ ಇತರೆ ವಿದ್ಯಾರ್ಥಿಗಳೆದುರು ಚುಚ್ಚು ಮಾತುಗಳಿಂದ ಎಷ್ಟೇ ಕುಗ್ಗಿಸಿದರೂ ಕೂಡ ಹಾಗೆ ಹೇಳುತ್ತಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಇವರನ್ನು ಯಾವುದೇ ಕ್ಷೇತ್ರದಲ್ಲಿ ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಅವರೆಲ್ಲರಿಗಿಂತ ಈಕೆ ಓದಿನಲ್ಲಿ ಮತ್ತು ಇತರೆ ಕ್ಷೇತ್ರದಲ್ಲಿ ಮುಂದಿದ್ದು ಕಾಲೇಜಿನಲ್ಲಿ ಟಾಪರ್ ಆಗಿದ್ದರು. ಸದಾ ಕಾಲೆಳೆಯುತ್ತಲೇ, ತಮಾಷೆ ಮಾಡಿಕೊಂಡಿದ್ದ ಅವರನ್ನು ಮತ್ತು ಅವರ ಆ ಮಾತುಗಳನ್ನು ಪ್ರೀತಿಯಿಂದಲೇ ಸ್ವೀಕರಿಸಿ, ಅದನ್ನು ಛಲದಿಂದಲೇ ಸಾಧಿಸಿದ ಛಲಗಾತಿ ಈಕೆ.

2017 ರಲ್ಲಿ ತನ್ನ ಪಿಯುಸಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾನೂನು ವಿದ್ಯಾಭ್ಯಾಸಕ್ಕೆ ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜನ್ನು ಸೇರಿದರು. ಅಲ್ಲಿಯೂ ಕೂಡ ತನ್ನ ಓದಿನೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರಿದರು. ಕಾನೂನು ಪದವಿ ವಿದ್ಯಾರ್ಥಿನಿಯಾಗಿದ್ದಾಗ್ಗಲೂ ಹಲವಾರು ಕಡೆ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆ ಮತ್ತು ವಿಚಾರ ಮಂಡನೆಯಲ್ಲಿ ಎಸ್ ಡಿ ಎಂ ಕಾನೂನು ಕಾಲೇಜನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದರೊಂದಿಗೆ ಕಾಲೇಜಿನ ಮತ್ತು ಇತರೆ ಅನೇಕ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಗಳಲ್ಲಿ ನಿರೂಪಣೆಯನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ. ಎಸ್ ಡಿ ಎಂ ಕಾನೂನು ಕಾಲೇಜನ್ನು
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ದಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಪ್ರತಿನಿಧಿಸಿ ಮೆಚ್ಚುಗೆ ಗಳಿಸಿದ್ದಾರೆ.

ತುಳು ಪರಿಷತ್ ನ ಆಶ್ರಯದಲ್ಲಿ 2020 ರಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭದ ನಿರೂಪಣೆಯನ್ನು ಮಾಡಿದ ಹಿರಿಮೆ ಇವರದು. ಕಾನೂನು ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಇಲ್ಲಿ ನಡೆದ ಎನ್ಎಸ್ಎಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಎಸ್ ಡಿ ಎಂ ಕಾನೂನು ಕಾಲೇಜಿನಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ. ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಅಂಬೇಡ್ಕರ್ ಅವರ ಪುಸ್ತಕದ ಕುರಿತು ಏರ್ಪಟ್ಟ ಪುಸ್ತಕ ವಿಮರ್ಶೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಎನ್ ಎಸ್ ಎಸ್ ನಾಯಕಿಯೂ ಆಗಿದ್ದ ಇವರು ಅನೇಕ ಕಡೆಗಳಲ್ಲಿ ರಕ್ತದಾನ ಶಿಬಿರ ಮತ್ತು ಇತರೆ ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ.

ಶಾಲಾ ಕಾಲೇಜುಗಳಲ್ಲಿ ಕಲಿಕೆ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾತ್ರ ಮುಂದಿದ್ದುದಲ್ಲದೆ ಇತರೆ ಅನೇಕ ಕಡೆ ಸ್ಪರ್ಧೆ ಹಾಗೂ ವಿಚಾರ ಕಮ್ಮಟ, ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿದ್ದರು. ಯುವವಾಹಿನಿ (ರಿ) ಕೇಂದ್ರ ಮಂಗಳೂರು ಮತ್ತು ಯುವವಾಹಿನಿ (ರಿ) ಕೂಳೂರು ಘಟಕದ ಆಶ್ರಯದಲ್ಲಿ ನಡೆದ ಯೂತ್ ಫೆಸ್ಟ್ ನಲ್ಲಿ ಅಮರ್ ಬೊಳ್ಳಿಲು ವಿಶೇಷ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಥಮ ಬಹುಮಾನ ಪಡೆದು ಅಮರ್ ಬೊಳ್ಳಿಲು ಪ್ರಶಸ್ತಿ ಪಡೆದುಕೊಂಡಿದ್ದಾರೆ.

2023  ರ ಫೆಬ್ರವರಿಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಜರಗುವ ಕನ್ನಡದ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಥಟ್ ಅಂತ ಹೇಳಿ ಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದು ಜನಮನ್ನಣೆ ಗಳಿಸಿದ್ದಾರೆ. ಮಂಗಳೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕದ ಹಲವಾರು ಕಡೆ ಸಾಹಿತ್ಯ ಸಮ್ಮೇಳನ, ಪುಸ್ತಕ ಮೇಳ ಕವಿಗೋಷ್ಠಿ, ವಿಚಾರಗೋಷ್ಠಿಯಲ್ಲಿ ಭಾಗವಹಿಸಿ, ಕರ್ನಾಟಕದ ಖ್ಯಾತ ಸಾಹಿತಿಗಳಿಂದ ವಿಚಾರವನ್ನು ಸಂಪಾದಿಸಿ, ಆತ್ಮೀಯ ಸಂಪರ್ಕವನ್ನು ಹೊಂದಿದ್ದಾರೆ.

ಜನವರಿ 2, 2020 ರಂದು ಕರಾವಳಿಯ ಪ್ರತಿಷ್ಠಿತ ಡೈಜಿವರ್ಲ್ಡ್ ಸುದ್ದಿ ಮಾಧ್ಯಮದಲ್ಲಿ ಕಂಬಳ ಕ್ಷೇತ್ರದ ಖ್ಯಾತ ಉದ್ಘೋಷಕರಾದ ಕಂಗಿನಮನೆ ವಿಜಯಕುಮಾರ್ ಅವರೊಂದಿಗೆ ಕಂಬಳ ಕಹಳೆ ವಿಶೇಷ ಕಾರ್ಯಕ್ರಮದಲ್ಲಿ ವಿಷಯ ಮಂಡನೆಯಲ್ಲಿ ಪಾಲ್ಗೊಂಡಿದ್ದ ವಿಶೇಷ ಸಾಧನೆ ಇವರದ್ದು. 

ಉರ್ವಾ ದ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದೊಂದಿಗೆ ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರ, ಕಲೆ ಗೆ ಸಂಬಂಧಿಸಿದ ರಸಪ್ರಶ್ನೆಯನ್ನು ನೆರವೇರಿಸುವಲ್ಲಿ ಜೊತೆ ಕ್ವಿಜ್ ಮಾಸ್ಟರ್ ಆಗಿ ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆ ಮಾಡಿದ್ದಾರೆ.

ಕರ್ನಾಟಕದ ಪ್ರಸಿದ್ಧ ಸಾಹಿತ್ಯಿಕ ಸುದ್ದಿ ಮಾಧ್ಯಮ ಬುಕ್ ಬ್ರಹ್ಮ ನಡೆಸಿದ್ದ ಜನ ಮೆಚ್ಚಿದ ಕತೆಯಲ್ಲಿ  ಪ್ರಥಮ ಬಹುಮಾನ ವನ್ನು ಗಳಿಸಿದ್ದು ಮಾತ್ರವಲ್ಲದೇ, ಬುಕ್ ಬ್ರಹ್ಮ ಸಾಹಿತ್ಯಿಕ ಮಾಧ್ಯಮದಲ್ಲಿ "ಕತೆ ಕೇಳು ಕಂದ" ಮಕ್ಕಳ ಕತೆ ವಾಚನ ಸರಣಿ ಕಾರ್ಯಕ್ರಮದಲ್ಲಿ ಕಥಾವಾಚಕಿಯಾಗಿ ಭಾಗವಹಿಸಿ, ಆ ಕತೆಯು "ಬೆಸ್ಟ್ ಆಫ್ ಬುಕ್ ಬ್ರಹ್ಮ" ಸಂಚಿಕೆಯಲ್ಲಿ ಮೂಡಿಬಂದಿದೆ. 

 ಮಂಗಳೂರು ಆಕಾಶವಾಣಿಯಲ್ಲಿ ಸ್ವರಚಿತ ಕತೆ, ಕವನ ವಾಚನ  ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ತುಳು ಪರಿಷತ್ ಮಂಗಳೂರು ಇಲ್ಲಿ 2019 ರಿಂದ ಸಕ್ರಿಯ ಸದಸ್ಯರಾಗಿದ್ದಾರೆ. ತಮ್ಮಸಾಮಾಜಿಕ ಜಾಲತಾಣದಲ್ಲಿ ಪ್ರತಿ ಶನಿವಾರ  ಸಂಜೆ 5 ಗಂಟೆಗೆ ಕತೆತ ಕದಿಕೆ ಎಂಬ ಚೆಂದದ ಶೀರ್ಷಿಕೆಯಡಿಯಲ್ಲಿ ತುಳು ಕತೆ ವಾಚನವನ್ನು ನೀಡುತ್ತಾ ಬಂದಿದ್ದರು. 

ಅದರೊಂದಿಗೆ ತುಳು ನಾಡಿನ ಸಂಸ್ಕೃತಿ, ಆಚಾರ – ವಿಚಾರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿಯನ್ನು ಹಿರಿಯ ಸಾಹಿತಿಗಳ ಜೊತೆಗೂಡಿ ವಿಚಾರವನ್ನು ಒಂದುಗೂಡಿಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸಾಕ್ಷ್ಯಚಿತ್ರದ ಮೂಲಕ ಹಿನ್ನೆಲೆ ಧ್ವನಿ ನೀಡುತ್ತಾ ಆ ಮಾಹಿತಿಯನ್ನು ಲೋಕಕ್ಕೆ ತಿಳಿಸುವ ಪ್ರಯತ್ನ ಇಂದಿಗೂ ಮಾಡುತ್ತಾ ಬಂದಿದ್ದಾರೆ.

ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಸಮಯ ವ್ಯರ್ಥ ಆಗಬಾರದು ಮತ್ತು ತನ್ನಲ್ಲಿರುವ ಜ್ಞಾನವನ್ನು ಇತರರಿಗೂ ಹಂಚಬೇಕು ಎಂಬ ಉದ್ದೇಶ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯ ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರತಿದಿನ ನಡೆಸಿಕೊಂಡು ಬಂದಿದ್ದಾರೆ. 2020 ರಲ್ಲಿ ಮೊದಲ ಆವೃತ್ತಿಯ ಸಾಮಾನ್ಯ ರಸಪ್ರಶ್ನೆಯಲ್ಲಿ ಕನ್ನಡ ಮತ್ತು ತುಳು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ರಸಪ್ರಶ್ನೆಯನ್ನು ನಡೆಸಿದ್ದರು. ಮುಂದಕ್ಕೆ 2021 ರಲ್ಲಿ ಎರಡನೇ ಆವೃತ್ತಿಯ ರಸಪ್ರಶ್ನೆಯಲ್ಲಿ ಪುರಾಣ, ಸಾಹಿತ್ಯ, ಕ್ರೀಡೆ, ತುಳುನಾಡು ಮತ್ತು ತುಳು ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಗಳ ರಸಪ್ರಶ್ನೆಯನ್ನು ನಡೆಸಿದ್ದರು.
ಪ್ರತಿಯೊಂದು ಆವೃತ್ತಿಯಲ್ಲಿಯೂ ದಿನಕ್ಕೊಂದರಂತೆ 100 ದಿನದ ರಸಪ್ರಶ್ನೆಯನ್ನು ತುಂಬಾ ಯಶಸ್ವಿಯಾಗಿ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದ್ಯಕ್ಕೆ ಈಗ ಸಾಮಾನ್ಯ ರಸಪ್ರಶ್ನೆಯ ಮೂರನೇ ಆವೃತ್ತಿಯೂ ಯಶಸ್ವಿಯಾಗಿ ಮೂಡಿಬರುತ್ತಿದೆ.

ಸಾಹಿತ್ಯಿಕ ಕ್ಷೇತ್ರದಲ್ಲಿ ರಾಜಶ್ರೀಯವರ  ಈ ಒಂದು ವಿಶೇಷ ಯೋಚನೆಗೆ ಜಾಲತಾಣದ ತುಂಬೆಲ್ಲಾ ಇವರಿಗೆ ಅಭಿಮಾನಿಗಳಿದ್ದಾರೆ. ಸದಾ ಒಂದಲ್ಲ ಒಂದು ಹೊಸ ಯೋಚನೆಯನ್ನು ಇಟ್ಟುಕೊಂಡು, ಅದಕ್ಕೆ ಪೂರಕವಾದ ಯೋಜನೆಯನ್ನು ಹಾಕಿಕೊಂಡು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರಲ್ಲಿ ಇವರು ಎತ್ತಿದ ಕೈ. ನಮ್ಮ ಮುಂದೆ ಸಾಮಾಜಿಕ ಜಾಲತಾಣವನ್ನು ಅದೆಷ್ಟೋ ಕೆಟ್ಟ ರೀತಿಯಾಗಿ ಉಪಯೋಗಿಸಿ ಕಾಲ ಕಳೆಯುವವರ ಮಧ್ಯೆ ಇವರೊಬ್ಬರು ಈ ರೀತಿಯೂ ಸಮರ್ಪಕವಾಗಿ ಬಳಸಿಕೊಂಡು ಇರಬಹುದು ಎಂದು ತೋರಿಸುತ್ತಾ ವಿಶೇಷವಾಗಿದ್ದಾರೆ. 

ರಾಜಶ್ರೀ ಅವರು ಬರೆದ ಅನೇಕ ಕತೆ, ಕವಿತೆ, ಲೇಖನ, ವ್ಯಕ್ತಿ ಪರಿಚಯ, ಪ್ರಬಂಧಗಳು ಇತ್ಯಾದಿ ಉದಯವಾಣಿ, ವಿಜಯವಾಣಿ, ಜಯಕಿರಣ, ವಿಶ್ವವಾಣಿ, ತುಳುನಾಡು ವಾರ್ತೆ, ಪ್ರಜಾವಾಣಿ ಹೀಗೆ ನಾಡಿನ ಅನೇಕ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ಸಾಹಿತ್ಯ ಹಬ್ಬ – 2019 ರಲ್ಲಿ ವಿದ್ಯಾರ್ಥಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ಆಗಸ್ಟ್ 2024 ರಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಬುಕ್ ಬ್ರಹ್ಮ ಸಾಹಿತ್ಯ ಉತ್ಸವದಲ್ಲಿಯೂ ಪ್ರತಿನಿಧಿಯಾಗಿ ಭಾಗವಹಿಸಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ.
ಸುಮಾರು 40 ಕ್ಕೂ ಅಧಿಕ ಸಾಹಿತ್ಯ ಮತ್ತು ಸಭಾ ಕಾರ್ಯಕ್ರಮಗಳ ವೇದಿಕೆಗಳಲ್ಲಿ ನಿರೂಪಣೆಯನ್ನು ಮಾಡಿದ್ದಾರೆ. ಇಲ್ಲಿಯವರೆಗೆ ಇವರು ಸುಮಾರು 62 ಕ್ಕೂ ಹೆಚ್ಚಿನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಮತ್ತು ಹಲವೆಡೆ ಬಹುಮಾನ ಪಡೆದಿದ್ದಾರೆ. ಇವರ ಕನ್ನಡ ಕಥೆಗಳ ಸಂಗ್ರಹಣೆಯ ಹಸ್ತಪ್ರತಿಯಯು ಬಿಡುಗಡೆಗೆ ತಯಾರಿಯಲ್ಲಿದೆ ಮತ್ತು ತುಳು ಕತೆಗಳ ಸಂಕಲನದ ಹಸ್ತಪ್ರತಿಯ ಪುರಾವೆ ಓದುವಿಕೆಯ ಹಂತದಲ್ಲಿದೆ.

ತನ್ನ ಹಸ್ತವನ್ನು ಬರಹದ ಗೂಡುಗಳಿಗೆ ಪರಿಚಯಿಸೋ ಅದ್ಭುತ ಲೇಖಕಿ ರಾಜಶ್ರೀ. ನಿಜಕ್ಕೂ ಇವರ ಬರಹಕ್ಕೆ ರಾಜನಂತಿರೋ ಶಕ್ತಿಯಿದೆ. ಹಲವಾರು ಬರಹಗಳು ಇವರ ಕೈಯಿಂದ ಮೂಡಿ ಬಂದಿದೆ .ಅವರು ಬರೆದಂತಹ ಅದೆಷ್ಟೋ ವಿಚಾರಗಳು ಹಲವಾರು ವಿಷಯಕ್ಕೆ ಸ್ಫೂರ್ತಿ. ಅಕ್ಷರಗಳನ್ನ ಜೋಡಣೆ ಮಾಡಿ ಒಂದು ವಿಷಯದ ಬಗ್ಗೆ ಬರೆಯೋದು ಅಷ್ಟೊಂದು ಸುಲಭದ ಮಾತಲ್ಲ. ಆದರೆ ಅರ್ಥಕ್ಕೆ ಹೊಸ ಅಕ್ಷರ ನೀಡೋ ಅದ್ಭುತ ಕಲೆ ನಮ್ಮ ರಾಜಶ್ರೀ ಅವರ ಬಳಿಯಿದೆ.

ತೊಡಗಿಸಿಕೊಂಡಿರುವ ವೃಂದಗಳು:-
1) ತುಳು ಪರಿಷತ್ ಮಂಗಳೂರು
2) ಮಕ್ಕಿಮನೆ ಕಲಾವೃಂದ ಮಂಗಳೂರು
4) ಸಾಹಿತ್ಯಾಸಕ್ತರ ಬಳಗ ಮೈಸೂರು
5) ಸಾಹಿತ್ಯ ಸಿಂಚನ ಬರಹಗಾರರ ಬಳಗ
3) ಇಂಚರ ಕಲಾವಿದರು, ಸುಂಕದಕಟ್ಟೆ ಬಜ್ಪೆ
ಇತ್ಯಾದಿ

ಪ್ರಶಸ್ತಿಗಳು :-
1) ಕನ್ನಡ ಕುವರಿ ಪ್ರಶಸ್ತಿ
2) ಕನ್ನಡ ಧ್ವನಿ ಪ್ರಶಸ್ತಿ
3) ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ ಪ್ರಶಸ್ತಿ
ಇತ್ಯಾದಿ

ಪ್ರಸ್ತುತ ಇವರು ಮಂಗಳೂರಿನ ಖ್ಯಾತ ವಕೀಲರಾದ ಜಗದೀಶ್ ಕೆ ಆರ್ ಮತ್ತು ಪ್ರಸಾದ್ ಅವರೊಂದಿಗೆ ವಕೀಲೆಯಾಗಿ ವೃತ್ತಿ ನಡೆಸುತ್ತಿದ್ದಾರೆ.

ರಾಜಶ್ರೀಯವರ ಸಾಹಿತ್ಯಪ್ರೀತಿಗೆ ಅವರು ಚಿಕ್ಕಂದಿನಿಂದ ಓದಿಕೊಂಡು ಬಂದ ತುಂತುರು, ಬಾಲಮಂಗಳ, ತುಷಾರ, ಸುಧಾ, ಮಂಗಳ, ಪುರಾಣ ಪುಸ್ತಕಗಳು, ಕನ್ನಡ ಮತ್ತು ತುಳು ಭಾಷೆಯ ಕತೆ, ಕವನ, ಕಾದಂಬರಿ, ನಾಟಕ, ಜಾನಪದ ಪುಸ್ತಕಗಳೆಲ್ಲದರ ಬಗೆಗಿನ ಅಪಾರ ಜ್ಞಾನ ಮತ್ತು ಆ ಜ್ಞಾನವನ್ನು ಇತರರಿಗೂ ಪಸರಿಸುತ್ತಾ , ಅವರಿಗೂ ಪುಸ್ತಕ ಓದಲು ಪ್ರೇರೇಪಿರುತ್ತಾ ಮುಂದುವರೆಯುತ್ತಿರುವುದೇ ಸಾಕ್ಷಿ. 

ಪುಸ್ತಕ ಓದಲು ಪ್ರಾರಂಭ ಮಾಡಿದಾಗಿನಿಂದ ಇಂದಿನವರೆಗೂ ತಾನು ಓದಿದ ಎಲ್ಲಾ ಪುಸ್ತಕಗಳ ಒಟ್ಟು ಅಂದಾಜು 1000 ಕ್ಕಿಂತಲೂ ಮೀರಿದ ಪುಸ್ತಕಗಳ ಸಂಗ್ರಹಣೆ ಮಾಡಿ ಅದನ್ನು ಇತರರಿಗೂ ಓದಲು ನೀಡುತ್ತಾ ಸದಾ ಸ್ಪೂರ್ತಿದಾಯಕ ವ್ಯಕ್ತಿತ್ವ ಆಗಿರುವ ಇವರು ನಮ್ಮ ಸಮಾಜದ ಹೆಮ್ಮೆಯ ಕುವರಿಯಾಗಿದ್ದಾರೆ. ಹೀಗೆ ಇವರ ಸಾಹಿತ್ಯ ಮತ್ತು ಕಲಾ ಕ್ಷೇತ್ರದ ಸಾಧನೆಯನ್ನು ವಿವರಿಸುತ್ತಾ ಹೋದರೆ ಹೀಗೆಯೇ ಮುಂದುವರೆಯುತ್ತಾ ಸಾಗುತ್ತದೆ.
ಕಠಿಣ ಶ್ರಮ ಮತ್ತು ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ನಂಬಿಕೆ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಇವರು ಸ್ಪಷ್ಟ ಉದಾಹರಣೆಯೆಂದೇ ಹೇಳಬಹುದು.

Leave a Reply

Your email address will not be published. Required fields are marked *