Tue. Oct 14th, 2025

Robbery: ವೇಣೂರು ಠಾಣಾ ವ್ಯಾಪ್ತಿ: ಮನೆಗೆ ನುಗ್ಗಿದ ಕಳ್ಳರಿಂದ 149 ಗ್ರಾಂ ಚಿನ್ನ ದೋಚಿದ ಕೃತ್ಯ

(ಅ.07) ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಲೂರು ಗ್ರಾಮದ ಮಂಜುಶ್ರೀನಗರದ ಶ್ರೀ ಅನಘ ನಿವಾಸಿ ಅವಿನಾಶ್‌ ಎಂಬುವವರ ಮನೆಯಲ್ಲಿ ಬೀಗ ಒಡೆದು ನುಗ್ಗಿದ ಕಳ್ಳರು ₹9.5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ನಡೆದಿದ್ದು, ಮನೆಯವರು ಅಕ್ಟೋಬರ್ 2 ರಂದು ಬೀಗ ಹಾಕಿ ಹೋಗಿದ್ದರು. ಅಕ್ಟೋಬರ್ 6 ರಂದು ಮನೆಗೆ ಹಿಂತಿರುಗಿ ಬಂದಾಗ ಮನೆಯ ಬೀಗ ಒಡೆದಿರುವುದು ಮತ್ತು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಕಳ್ಳತನವು ಈ ನಾಲ್ಕು ದಿನಗಳ ಅವಧಿಯಲ್ಲಿ ನಡೆದಿರುವ ಸಾಧ್ಯತೆ ಇದೆ.

ಕಳ್ಳರು ಮನೆಗೆ ಪ್ರವೇಶಿಸಿ ನೇರವಾಗಿ ಮಲಗುವ ಕೋಣೆಯಲ್ಲಿದ್ದ ಕಪಾಟನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ಕಪಾಟಿನ ಬೀಗವನ್ನು ಮುರಿದು, ಅದರೊಳಗೆ ಇಟ್ಟಿದ್ದ ಸುಮಾರು 149 ಗ್ರಾಂ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳತನವಾದ ವಸ್ತುಗಳಲ್ಲಿ ಎರಡೆಳೆಯ ಚಿನ್ನದ ಕರಿಮಣಿ ಸರ, ಮುತ್ತಿನ ಸರ, ಚಿನ್ನದ ಬ್ರಾಸ್ ಲೈಟ್, ಮಕ್ಕಳ ಎರಡು ಸರಗಳು, ಉಂಗುರಗಳು, ಮತ್ತು ಒಂದು ಬಡೋಲೆ ಸೇರಿವೆ. ಕಳುವಾದ ಒಟ್ಟು ಚಿನ್ನಾಭರಣಗಳ ಮೌಲ್ಯವನ್ನು ಸುಮಾರು ₹9,50,000 ಎಂದು ಅಂದಾಜಿಸಲಾಗಿದೆ.

ಈ ಕಳ್ಳತನದ ಘಟನೆಗೆ ಸಂಬಂಧಿಸಿದಂತೆ ಅಕ್ಟೋಬರ್ 6 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಭಾರೀ ಮೌಲ್ಯದ ಕಳ್ಳತನ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *