ಮಂಜೇಶ್ವರ:(ಅ.10) ಮಂಜೇಶ್ವರದಲ್ಲಿ ನಡೆದ ಶಾಲಾ ಶಿಕ್ಷಕಿ ಶ್ವೇತಾ ಮತ್ತು ಅವರ ಪತಿ ಅಜಿತ್ (30) ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.


ಇದನ್ನೂ ಓದಿ: ಮೈಸೂರು: ದಸರಾ ಹಬ್ಬದ ವೇಳೆ ಬಲೂನ್ ಮಾರಲು ಬಂದಿದ್ದ ಬಾಲಕಿ ಅತ್ಯಾಚಾರ ಎಸಗಿ, ಕೊಲೆ

ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕಿಗೆ ಇಬ್ಬರು ಹಲ್ಲೆ ಮಾಡುತ್ತಿರುವ ಸಿಸಿಟಿವಿ ದೃಶ್ಯಗಳು ಅವರ ಸಾವಿನ ಬಳಿಕ ಬೆಳಕಿಗೆ ಬಂದಿದೆ.
ದಂಪತಿಗಳ ಆತ್ಮಹತ್ಯೆಗೂ ಈ ಹಲ್ಲೆಗೂ ಏನಾದರೂ ಸಂಬಂಧವಿದೆಯೇ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಮಂಜೇಶ್ವರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಶಿಕ್ಷಕಿಗೆ ಹಲ್ಲೆ ಮಾಡುತ್ತಿರುವ ಇಬ್ಬರು ಮಹಿಳೆಯರನ್ನು ಗುರುತಿಸಲು ತೀವ ಪ್ರಯತ್ನ ನಡೆಸುತ್ತಿದ್ದಾರೆ.
ಸಿಸಿಟಿವಿ ವಿಡಿಯೋದಲ್ಲಿ, ಹಸಿರು ಹಳದಿ ಸೀರೆಯುಟ್ಟಿದ್ದ ಶ್ವೇತಾ ಇಬ್ಬರು ಅಪರಿಚಿತ ಮಹಿಳೆಯರೊಂದಿಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ಇಬ್ಬರು ಮಹಿಳೆಯರಲ್ಲಿ ಒಬ್ಬರು ಸ್ಕೂಟರ್ ಮೇಲೆ ಕುಳಿತಿದ್ದರೆ, ಇನ್ನೊಬ್ಬರು ನೀಲಿ ಟಾಪ್ ಮತ್ತು ಸಲ್ವಾರ್ ಧರಿಸಿದ್ದರು. ವಿಡಿಯೋದಲ್ಲಿ. ನೀಲಿ ಟಾಪ್ ಧರಿಸಿದ್ದ ಮಹಿಳೆ ಶ್ವೇತಾರಿಗೆ ತಳ್ಳುವುದು. ಕಪಾಳಮೋಕ್ಷ ಮಾಡುವುದು ಮತ್ತು ಹಲ್ಲೆ ನಡೆಸುವುದು ದಾಖಲಾಗಿದೆ.

ಅರಿಮಳ ವಾರ್ಡ್ ಸದಸ್ಯೆ ಜಯಂತಿ ಯತೀಶ್ ಅವರು ವಿಡಿಯೋವನ್ನು ವೀಕ್ಷಿಸಿದ್ದು, ದಂಪತಿಯ ಮನೆಯ ಬಳಿಯೇ ಈ ಹಲ್ಲೆ ನಡೆದಿದೆ ಎಂದು ಖಚಿತಪಡಿಸಿದ್ದಾರೆ. “ಮಹಿಳೆ ಹೊಡೆಯುವಾಗ ಶ್ವೇತಾ ಯಾವುದೇ ಪ್ರತಿರೋಧ ತೋರದೆ ಶಿಕ್ಷೆಯನ್ನು ಸ್ವೀಕರಿಸಿದಂತೆ ತೋರುತ್ತಿತ್ತು. ಇದು ನನಗೆ ಆಶ್ಚರ್ಯ ತಂದಿದೆ.” ಎಂದು ಜಯಂತಿ ಹೇಳಿದ್ದಾರೆ. ವಿಡಿಯೋವನ್ನು ಗಮನಿಸುವಾಗ ಶ್ವೇತಾಳಿಗೆ ಆ ಇಬ್ಬರು ಮಹಿಳೆಯರ ಬಗ್ಗೆ ಮೊದಲೇ ಪರಿಚಯವಿರುಂತೆ ಕಂಡು ಬರುತ್ತಿದೆ. ಜಯಂತಿ ಅವರಿಗೆ ಆ ಮಹಿಳೆಯರನ್ನು ಗುರುತಿಸಲು ಸಾಧ್ಯವಾಗಿಲ್ಲ. “ಅವರು ನಮ್ಮ ನೆರೆಹೊರೆಯವರಂತೆ ಕಾಣಿಸುತ್ತಿಲ್ಲ.”
ಎಂದು ಆಕೆ ತಿಳಿಸಿದ್ದಾರೆ. ಅಜಿತ್ ಅವರ ಭಾವ ಸತೀಶ್ ಕೂಡ ವಿಡಿಯೋದಲ್ಲಿನ ಹಲ್ಲೆಕೋರರ ಮುಖಗಳು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.ಆರ್ಥಿಕ ತೊಂದರೆಗಳ ಬಗ್ಗೆ ಅನುಮಾನ
ನೆರೆಹೊರೆಯವರು ದಂಪತಿ ಆರ್ಥಿಕ ತೊಂದರೆಗಳಿದ್ದವು ಎಂದು ತಿಳಿಸಿದ್ದರೂ, ಕುಟುಂಬ ಸದಸ್ಯರು ಅಥವಾ ಪೊಲೀಸರು ಈ ಹೇಳಿಕೆಯನ್ನು ದೃಢಪಡಿಸಿಲ್ಲ. ಸದ್ಯಕ್ಕೆ, ಹಲ್ಲೆಗೊಳಗಾದ ವಿಡಿಯೋದಿಂದಾಗಿ ಪ್ರಕರಣವು ಹೆಚ್ಚು ಸಂಕೀರ್ಣಗೊಂಡಿದೆ. ಪೊಲೀಸರು ಹಲ್ಲೆಕೋರರನ್ನು ಪತ್ತೆಹಚ್ಚುವ ಮೂಲಕ ಆತ್ಮಹತ್ಯೆಯ ಹಿಂದಿನ ನೈಜ ಕಾರಣವನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಮಹತ್ವದ ಸಾಕ್ಷ್ಯವಾಗಿ ಹೊರಹೊಮ್ಮಿವೆ. ಇದು ಕೇವಲ ಆತ್ಮಹತ್ಯೆ ಪ್ರಕರಣವೋ ಅಥವಾ ಬೇರೆ ಯಾವುದೇ ದುಷ್ಕೃತ್ಯದ ಭಾಗವೋ ಎಂಬುದನ್ನು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಹಲ್ಲೆಕೋರರನ್ನು ಪತ್ತೆ ಹಚ್ಚಿದ ನಂತರವೇ ಈ ದಂಪತಿಯ ಸಾವಿಗೆ ನಿಖರ ಕಾರಣ ಏನೆಂದು ತಿಳಿದುಬರಲಿದೆ. ಘಟನೆಯ ತನಿಖೆ ಮುಂದುವರೆದಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಶೀಘ್ರದಲ್ಲೇ ಹಲ್ಲೆ ಕೋರರನ್ನು ಬಂಧಿಸುವ ನಿರೀಕ್ಷೆಯಿದೆ.


