ಉಜಿರೆ: ನಮ್ಮ ದೇಶದ ಜನರಲ್ಲಿ ನಾಗರೀಕತೆ, ಸಂಸ್ಕೃತಿ – ಸಂಪ್ರದಾಯ ಉಳಿದಿದೆ ಎಂದರೆ ಅದಕ್ಕೆ ಕಾರಣ ಸಾಹಿತ್ಯ ಮಾತ್ರ. ಅಂತಹ ಸಾಹಿತ್ಯ ರಚನಾಕಾರರಲ್ಲಿ ಡಾ. ಎಸ್. ಎಲ್. ಭೈರಪ್ಪ ಸಹ ಒಬ್ಬರು. ಅವರು ಆಲೋಚಿಸಿದ ವಿಚಾರಗಳು ಬಹಳ ವಿಶಿಷ್ಟವಾದದ್ದು. ಅದರಿಂದಲೇ ಅವರು ಇಂದು ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಭಿಪ್ರಾಯಪಟ್ಟರು.

ಇದನ್ನೂ ಓದಿ: ⭕ಪುತ್ತೂರಿನ ಯುವಕ ಬೆಂಗಳೂರಿನ ಲಾಡ್ಜ್ನಲ್ಲಿ ಶವವಾಗಿ ಪತ್ತೆ
ಕಾಲೇಜಿನಲ್ಲಿ ಅ.16 ರಂದು ಕನ್ನಡ ವಿಭಾಗ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಕಸಾಪ ಹಾಗೂ ಹೋಬಳಿ ಕಸಾಪ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಎಸ್.ಎಲ್. ಭೈರಪ್ಪ ನುಡಿನಮನ ಮತ್ತು ವಿದ್ಯಾರ್ಥಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೈರಪ್ಪ ಅವರು ತಮ್ಮ ಹದಿಮೂರನೆಯ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದವರು. ಅವರ ಜೀವನದಲ್ಲಿ ಅವರು ಬಹಳ ಕಷ್ಟಪಟ್ಟಿದ್ದಾರೆ. ಕಷ್ಟಪಟ್ಟರೆ ಮಾತ್ರ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಭೈರಪ್ಪ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿಗಳು ಕೂಡ ಅವರಂತೆಯೇ ಉನ್ನತ ಸ್ಥಾನಕ್ಕೇರಲು ಪ್ರಯತ್ನ ಪಡಬೇಕು. ಶ್ರೀಗಂಧವನ್ನು ತೇಯ್ದಾಗ ಮಾತ್ರ ಅದರ ಘಮ ಹೊರಬರುತ್ತದೆ. ಹಾಗೆಯೇ ಪ್ರಯತ್ನ ಪಟ್ಟಾಗ ಮಾತ್ರ ಜೀವನದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಹೇಳಿದರು.

ಬರಹಗಾರ, ಬ್ಯಾಂಕ್ ಆಫ್ ಬರೋಡ ನೂಜಿಬಾಳ್ತಿಲ ಶಾಖಾ ಪ್ರಬಂಧಕ ಶಿವಪ್ರಸಾದ್ ಸುರ್ಯ ನುಡಿನಮನ ಸಲ್ಲಿಸಿದರು. ಭೈರಪ್ಪ ಅವರ ಬರವಣಿಗೆಗಳು ಎಂಥವರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತವೆ. ಅವರ ಬರವಣಿಗೆಯೇ ಹಾಗೆ ಎಲ್ಲಿಯೂ ಸ್ವಾರಸ್ಯವನ್ನು ಬಿಟ್ಟುಕೊಡುವುದಿಲ್ಲ. ನಾವು ಸಹ ಅವರ ಪುಸ್ತಕಗಳನ್ನು ಓದಿ ಅವರಂತೆಯೇ ಉತ್ತುಂಗಕ್ಕೆ ಏರಬೇಕು ಎಂದು ಹೇಳಿದರು.
ಮುಖ್ಯ ಅತಿಥಿ, ಎಸ್.ಡಿ.ಎಂ. ಕಾಲೇಜಿನ ಕಲಾ ನಿಕಾಯದ ಡೀನ್ ಡಾ. ಭಾಸ್ಕರ ಹೆಗಡೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಈ ನುಡಿನಮನ ಕಾರ್ಯಕ್ರಮ ನಮ್ಮಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶ, ರಾಜ್ಯಗಳಲ್ಲಿ ನಡೆಯುತ್ತಿದೆ. ಏಕೆಂದರೆ ಭೈರಪ್ಪ ಅವರು ಅಷ್ಟರ ಮಟ್ಟಿಗೆ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ವಿದ್ಯಾರ್ಥಿಗಳ ಮೇಲೆ ಅಪಾರವಾದ ಪ್ರೀತಿ ಅವರಿಗಿತ್ತು. ಮೊಬೈಲ್ ಇಲ್ಲದೆ ಜೀವನವೇ ಇಲ್ಲದ ಈ ಕಾಲಘಟ್ಟದಲ್ಲಿ ಭೈರಪ್ಪ ಅವರು ಮೊಬೈಲ್ ಬಳಸದೆ ಇದ್ದರು. ಅಂತಹ ಮಹಾನ್ ತಪಸ್ವಿ ಅವರು. ಒಂದು ಸಾಹಿತ್ಯ ಒಂದು ದೇಶದ ಚಿತ್ರಣವನ್ನೇ ಬದಲಾಯಿಸುತ್ತದೆ ಹಾಗೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಅಮೃತಾ, ಸಂಕೇತ್, ಪವನ್, ಕವನ, ರಂಗಸ್ವಾಮಿ, ಚೈತನ್ಯ, ಸ್ವಪ್ನ, ರಚನಾ ಅವರು ಕ್ರಮವಾಗಿ ಭೈರಪ್ಪ ಅವರ ‘ಧರ್ಮಶ್ರೀ’, ‘ಜಲಪಾತ’, ‘ತಬ್ಬಲಿಯು ನೀನಾದೆ ಮಗನೆ’, ‘ನಿರಾಕರಣ’, ‘ಆವರಣ’, ‘ವಂಶವೃಕ್ಷ’, ‘ಗೃಹಭಂಗ’ ಕಾದಂಬರಿಗಳ ಕುರಿತು ವಿಚಾರ ಮಂಡಿಸಿದರು.

ಬೆಳ್ತಂಗಡಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ದಿವಾಕರ ಕೊಕ್ಕಡ, ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಉಪಸ್ಥಿತರಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಡಿ. ಯದುಪತಿ ಗೌಡ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಪ್ರಣಮ್ಯ ವಂದಿಸಿ, ಅಮೃತಾ ಕಾರ್ಯಕ್ರಮ ನಿರೂಪಿಸಿದರು.
