ನವದೆಹಲಿ: ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಕಾರು ಸ್ಫೋಟದ ಬಗ್ಗೆ ದೆಹಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಕಾರಿನ ಮಾಲೀಕನನ್ನು ಬಂಧಿಸಿದ್ದಾರೆ. ಸ್ಫೋಟಕ್ಕೂ ಕೆಲ ಗಂಟೆಗಳಿಗೆ ಮೊದಲು ಶಂಕಿತ ಕಾರಿನ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲವು ಮಹತ್ವದ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: 🛑ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ವತಿಯಿಂದ ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸುವಂತೆ
ಸ್ಫೋಟಕ್ಕೆ ಮುನ್ನ 3 ಗಂಟೆ ಪಾರ್ಕ್ ಮಾಡಿದ್ದ ಹುಂಡೈ i20 ಕಾರು:
ಬಿಳಿ ಬಣ್ಣದ ಐ20 ಕಾರು ಕೆಂಪು ಕೋಟೆ ಪಾರ್ಕಿಂಗ್ ಪ್ರದೇಶದ ಬಳಿ ಮಧ್ಯಾಹ್ನ 3:19ರ ಸುಮಾರಿಗೆ ನಿಂತಿತ್ತು. ಮೂರು ಗಂಟೆಗಳ ಕಾಲ ಅಲ್ಲೇ ಇದ್ದು, ಸಂಜೆ 6:48ರ ವೇಳೆಗೆ ಪಾರ್ಕಿಂಗ್ ಪ್ರದೇಶದಿಂದ ನಿರ್ಗಮಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಜನಸಂದಣಿ ವೇಳೆ ಕಾರು ಪಾರ್ಕಿಂಗ್ ಪ್ರದೇಶದಿಂದ ಹೊರಹೋಗುತ್ತಿರುವುದು ಕಂಡುಬಂದಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ವಾಹನವನ್ನು ಪಾರ್ಕಿಂಗ್ ಪ್ರದೇಶಕ್ಕೆ ಯಾರು ತಂದರು, ನಂತರ ಅದನ್ನು ಯಾರು ಓಡಿಸಿದರು ಎಂಬುದನ್ನು ನಿರ್ಧರಿಸಲು ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ತನಿಖಾಧಿಕಾರಿಗಳು ವಾಹನದ ಪೂರ್ಣ ಮಾರ್ಗ, ಅದು ಎಲ್ಲಿಂದ ಬಂತು, ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಹೇಗೆ ತಲುಪಿತು ಮತ್ತು ನಂತರ ಅದು ಸ್ಮಾರಕದ ಮುಂಭಾಗದಲ್ಲಿರುವ ಟ್ರಾಫಿಕ್ ಸಿಗ್ನಲ್ ಕಡೆಗೆ ಹೇಗೆ ಚಲಿಸಿತು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

ಕಾರಿನ ಚಲನವಲನ ಮತ್ತು ಶಂಕಿತನನ್ನು ಗುರುತಿಸಲು ಹತ್ತಿರದ ರಸ್ತೆಗಳು, ಪಾರ್ಕಿಂಗ್ ಟೋಲ್ ಪ್ಲಾಜಾಗಳ ದೃಶ್ಯಾವಳಿಗಳನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಸಿಸಿಟಿವಿ ಕ್ಲಿಪ್ಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. “ಈ ದೃಶ್ಯಗಳಲ್ಲಿ ಶಂಕಿತ ವ್ಯಕ್ತಿ ಒಬ್ಬಂಟಿಯಾಗಿರುವಂತೆ ಕಾಣುತ್ತಿದೆ” ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಕಾರಿನ ಮಾಲೀಕ ಅರೆಸ್ಟ್:
ಹರಿಯಾಣದ ಗುರುಗ್ರಾಮ್ನಲ್ಲಿ ಕಾರಿನ ಮಾಲೀಕ ಎಂಡಿ ಸಲ್ಮಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸಲ್ಮಾನ್ ತನ್ನ ಕಾರನ್ನು ಒಂದೂವರೆ ವರ್ಷದ ಬಳಿಕ ಓಖ್ಲಾದಲ್ಲಿರುವ ದೇವೇಂದ್ರ ಎಂಬಾತನಿಗೆ ಮಾರಾಟ ಮಾಡಿದ್ದರು. ಬಳಿಕ ಈತ ಅಂಬಾಲಾದ ವ್ಯಕ್ತಿ ಮಾರಿದ್ದರು. ನಂತರ ಪುಲ್ವಾಮಾದ ತಾರೀಕ್ಗೆ ಕಾರು ಮಾರಾಟ ಆಗಿದೆ. ಆದರೆ ಸಲ್ಮಾನ್ ಹೆಸರಲ್ಲೇ ಕಾರು ನೋಂದಾಯಿಸಲ್ಪಟ್ಟಿದೆ ಮತ್ತು ಹರಿಯಾಣ ನೋಂದಣಿ ಸಂಖ್ಯೆ ಫಲಕ ಹೊಂದಿದೆ ಎಂದು ಅಧಿಕಾರಿ ಹೇಳಿದ್ದಾರೆ.

“ದೆಹಲಿ, ಗುರುಗ್ರಾಮ್ ಪೊಲೀಸರು ಸೋಮವಾರ ಮುಹಮ್ಮದ್ ಸಲ್ಮಾನ್ ಎಂಬಾತನನ್ನು ಬಂಧಿಸಿ, ಕಾರಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಅವರು ಅದನ್ನು ಓಖ್ಲಾದಲ್ಲಿರುವ ದೇವೇಂದ್ರ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದರು. ನಂತರ, ಮತ್ತೆ ಕಾರು ಅಂಬಾಲಾದಲ್ಲಿರುವ ಯಾರಿಗೋ ಮಾರಾಟವಾಗಿದೆ. ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮೂವರು ಕುಳಿತಿದ್ದ ಹುಂಡೈ ಐ 20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಗಾಯಗೊಂಡವರ ದೇಹದಲ್ಲಿ ಯಾವುದೇ ಪೆಲೆಟ್ ಅಥವಾ ಪಂಕ್ಚರ್ ಕಂಡುಬಂದಿಲ್ಲ, ಇದು ಬಾಂಬ್ ಸ್ಫೋಟದಲ್ಲಿ ಅಸಾಮಾನ್ಯವಾಗಿದೆ. ನಾವು ಎಲ್ಲ ರೀತಿಯಿಂದಲೂ ತನಿಖೆ ನಡೆಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದರು.

ಸೋಮವಾರ ಸಂಜೆ ಕೆಂಪು ಕೋಟೆಯ ಬಳಿ ನಿಧಾನವಾಗಿ ಚಲಿಸುತ್ತಿದ್ದ ಕಾರು ಏಕಾಏಕಿ ಸ್ಫೋಟಗೊಂಡು, ಒಂಬತ್ತು ಜನರು ಸಾವನ್ನಪ್ಪಿದ್ದಾರೆ. 20 ಜನರು ಗಾಯಗೊಂಡಿದ್ದಾರೆ. ಆ ಬಳಿಕ ದೆಹಲಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.


