ಬೆಳ್ತಂಗಡಿ ರೋಟರಿ ಕ್ಲಬ್, ತಮ್ಮ ಸಹೋದರಿ ಸಂಸ್ಥೆಯಾದ ರೋಟರಿ ಬೆಂಗಳೂರು ಇಂದಿರಾನಗರ ಹಾಗೂ ಕೃಷ್ಣ ಪಡ್ವೆಟ್ನಾಯ ಪ್ರತಿಷ್ಠಾನ (ರಿ) ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕಿನ ಎಲ್ಲಾ ಸರಕಾರಿ ಪಿಯು ಕಾಲೇಜಿನ ಪ್ರತಿಭಾನ್ವಿತ 270 ವಿದ್ಯಾರ್ಥಿಗಳಿಗೆ ತಲಾ ರೂ. 4000/- ದಂತೆ ವಿದ್ಯಾರ್ಥಿ ವೇತನವನ್ನು ವಿತರಿಸಿದರು.

ಇದನ್ನೂ ಓದಿ: 🟣ಉಜಿರೆ: ರಮ್ಯಾ 1 ಗ್ರಾಂ ಗೋಲ್ಡ್, ಫ್ಯಾನ್ಸಿ ಮತ್ತು ಫೂಟ್ ವೇರ್ ನೂತನ ಶೋರೂಂ ನ ಉದ್ಘಾಟನೆ
ಕಾರ್ಯಕ್ರಮದ ಪ್ರಾರಂಭದಲ್ಲಿ ಆ್ಯನ್ ಗೀತಾ ಪ್ರಕಾಶ ಪ್ರಭು ಪ್ರಾರ್ಥನೆ ಮಾಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಪ್ರೊ. ಪ್ರಕಾಶ್ ಪ್ರಭುಗಳು ಎಲ್ಲರನ್ನೂ ಸ್ವಾಗತಿಸಿದರು. ವಿದ್ಯೆ ಸಾಧಕರ ಸ್ವತ್ತೇ ವಿನಹ ಸೋಮಾರಿಗಳ ಸ್ವತ್ತಲ್ಲ. ಸಿಕ್ಕಿದ ಸ್ಕಾಲರ್ ಶಿಪ್ ಅನ್ನು ಸದ್ಬಳಕೆ ಮಾಡಿ ಎಂದರು . ರೋಟರಿ ಬೆಂಗಳೂರು ಇಂದಿರಾನಗರದ ಮಾಜಿ ಅಧ್ಯಕ್ಷರಾದ ರೊ. ಜಗದೀಶ್ ಮುಗುಳಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ತಾವು ಹುಟ್ಟಿ ಬೆಳೆದ ಊರಿನ ಮಕ್ಕಳಿಗೆ, ತಮ್ಮ ಕ್ಲಬ್ ಮೂಲಕ ಸಹಾಯ ಮಾಡಲು ಅತೀವ ಸಂತಸವಾಗುವುದಾಗಿ ನುಡಿದರು.



ಮುಖ್ಯ ಅತಿಥಿ ಮುಂದಿನ ವರ್ಷದ ಜಿಲ್ಲಾ ಗವರ್ನರ್ ರೊ. ಸತೀಶ್ ಬೊಳಾರ್ ರವರು ವಿದ್ಯಾರ್ಥಿಗಳು ಎಂದಿಗೂ ತಮ್ಮನ್ನು ಕಷ್ಟ ಪಟ್ಟು ಕಲಿಸುವ ಮಾತಾ ಪಿತರನ್ನು ಮರೆಯಕೂಡದು ಎಂದರು. ಸಂಧ್ಯಾ ಟ್ರೇಡರ್ಸ ಮಾಲಕರಾದ ರಾಜೇಶ ಪೈಯವರು ಟಾಟಾ ಸುಮೊ ಹೆಸರಿನ ಹಿಂದಿರುವ ಸುಂದರ ಕತೆಯ ಮೂಲಕ ವಿದ್ಯಾರ್ಥಿಗಳಲ್ಲಿ ಕನಸೊಂದನ್ನು ಕಟ್ಟಿದರು. ಅಸಿಸ್ಟೆಂಟ್ ಗವರ್ನರ್ ಡಾ. ಎ ಜಯಕುಮಾರ್ ಶೆಟ್ಟಿಯವರು, ರೋಟರಿ ಬೆಂಗಳೂರು ಇಂದಿರಾನಗರದವರ ಬೆಂಬಲವನ್ನು ಬಹುವಾಗಿ ಪ್ರಶಂಸಿದರು. ರೋಟರಿ ಬೆಂಗಳೂರು ಇಂದಿರಾನಗರದ ಮತ್ತೊಬ್ಬ ಮಾಜಿ ಅಧ್ಯಕ್ಷ ರೊ. ರಾಜ ಕೌರ ರವರು ಶುಭ ಕೋರಿದರು, ಬೆಳ್ತಂಗಡಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಫಿಯವರು, ರೋಟರೀ ಸೇವಾ ಟ್ರಸ್ಟನ ಅಧ್ಯಕ್ಷ ರೊ. ಶ್ರೀಕಾಂತ ಕಾಮತರು ಉಪಸ್ಥಿತರಿದ್ದರು. ಸ್ಕಾಲರ್ ಶಿಪ್ ಸಮಿತಿಯ ಅಧ್ಯಕ್ಷ ರೊ. ಅಬೂಬಕ್ಕರ್ ಮತ್ತು ತಂಡದವರು, ತಲಾ ರೂ 4000/- ಚೆಕ್ ಅನ್ನು ಪ್ರತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು.
ಕಾರ್ಯದರ್ಶಿ ಡಾ ಎಂ ಎಂ ದಯಾಕರವರು ವಂದನಾರ್ಪಣೆಗೈದರು. ರೊ. ಮನೋರಮ ಭಟ್ ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.


