ಧರ್ಮಸ್ಥಳ: ನಾಡಿನ ಪವಿತ್ರ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಸಾಲಿನ ಉಚಿತ ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ. ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಬಾರಿ 54ನೇ ವರ್ಷದ ಸಾಮೂಹಿಕ ವಿವಾಹ ಸಂಭ್ರಮ ನಡೆಯಲಿದೆ.

ದಿನಾಂಕ: ಏಪ್ರಿಲ್ 29, 2026
ಸಮಯ: ಸಂಜೆ ಗಂಟೆ 6.40ಕ್ಕೆ (ಗೋಧೂಳಿ ಲಗ್ನ ಸುಮುಹೂರ್ತದಲ್ಲಿ)
ದುಂದುವೆಚ್ಚಕ್ಕೆ ಕಡಿವಾಣ – ಹೆಗ್ಗಡೆಯವರ ಸಂಕಲ್ಪ
ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಮತ್ತು ಮದುವೆಯ ಹೆಸರಿನಲ್ಲಿ ಮಾಡುವ ಅನಗತ್ಯ ದುಂದುವೆಚ್ಚಗಳನ್ನು ತಡೆಯುವ ಉದ್ದೇಶದಿಂದ 1972ರಲ್ಲಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಈ ವಿಶಿಷ್ಟ ಯೋಜನೆಯನ್ನು ಆರಂಭಿಸಿದರು. ಕಳೆದ 53 ವರ್ಷಗಳಿಂದ ಈ ತನಕ ಸುಮಾರು 13,000ಕ್ಕೂ ಹೆಚ್ಚು ಜೋಡಿಗಳು ಇಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಸುಖ-ಶಾಂತಿಯ ಜೀವನ ನಡೆಸುತ್ತಿದ್ದಾರೆ.


ಕ್ಷೇತ್ರದಿಂದ ಸಿಗುವ ಸೌಲಭ್ಯಗಳು:
ವಿವಾಹವಾಗುವ ಪ್ರತಿಯೊಂದು ಜೋಡಿಗೆ ಮದುವೆಯ ಸಂಪೂರ್ಣ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಭರಿಸಲಾಗುವುದು.
ವರನಿಗೆ: ಧೋತಿ ಮತ್ತು ಶಾಲು.
ವಧುವಿಗೆ: ಸೀರೆ, ರವಿಕೆಕಣ ಹಾಗೂ ಮಂಗಳಸೂತ್ರ.
ಜೊತೆಗೆ ಹೂವಿನ ಹಾರ ಹಾಗೂ ವಿವಾಹದ ಉಳಿದ ವ್ಯವಸ್ಥೆಗಳನ್ನು ಮಾಡಲಾಗುವುದು.

ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲಿಚ್ಛಿಸುವವರು 2026ರ ಏಪ್ರಿಲ್ 25 ರೊಳಗೆ ಸವಿವರ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ದೂರವಾಣಿ 08256-266644,
ವಾಟ್ಸಾಪ್ ಸಂಖ್ಯೆ: 9663464648, 8147263422


