ಉಜಿರೆ : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಸ್ಕೂಲ್ ಒಲಿಂಪಿಕ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್.ಡಿ.ಎಂ ಕ್ರೀಡಾ ಸಂಘದ ವಿದ್ಯಾರ್ಥಿನಿ ಅನೀಶ ಆರೋಲ್ ಡಿಸೋಜಾ ಗುಂಡೆಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಅನೀಶ ಇವರು ಇತ್ತೀಚೆಗೆ ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲೂ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದರು. ಈ ಮೊದಲು ಸುಳ್ಯ ತಾಲೂಕಿನ ಪಂಜ ದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಅತ್ಲೇಟಿಕ್ಸ್ ನಲ್ಲಿ 17 ವಯೋಮಾನದ ಬಾಲಕಿಯರ ಗುಂಡು ಎಸೆತದಲ್ಲಿ ಬೆಳ್ತಂಗಡಿ ತಾಲೂಕಿನ್ನು ಪ್ರತಿನಿಧಿಸಿ ಸುಮಾರು 11.43 ಮೀ ದೂರಕ್ಕೆ ಎಸೆದು ಕೂಟದಲ್ಲೇ ವಿನೂತನ ದಾಖಲೆಯನ್ನು ನಿರ್ಮಿಸಿದ್ದರು.


ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟೆಯ ಕ್ಲೆಮೆಂಟ್ ಡಿಸೋಜಾ ಮತ್ತು ಆಶಾ ಡಿಸೋಜಾ ದಂಪತಿಗಳ ಮಗಳಾದ ಕುಮಾರಿ ಅನೀಶ ಡಿಸೋಜಾ ಕಳೆದ ಎರಡು ವರ್ಷ ಸತತ ವಾಗಿ ಜಾರ್ಖಂಡ್ ಹಾಗೂ ಲಕ್ನೋ ದಲ್ಲಿ ನಡೆದ ಅಂಡರ್ 14 ವಿಭಾಗದ ರಾಷ್ಟ್ರ ಮಟ್ಟದ ಗುಂಡು ಎಸೆತದಲ್ಲಿ ಭಾಗವಹಿಸಿ 4ನೇ ಸ್ಥಾನವನ್ನು ಪಡೆದಿರುತ್ತಾಳೆ. ಜೊತೆಗೆ ಎರಡು ಭಾರಿ ರಾಜ್ಯ ಮಟ್ಟದ ಚಕ್ರ ಎಸೆತದಲ್ಲಿ ಭಾಗವಹಿಸಿರುತ್ತಾರೆ.

ಪ್ರಶಸ್ತಿ ವಿಜೇತ ಕುಮಾರಿ ಅನೀಶರವರಿಗೆ ಉಜಿರೆಯ ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಬಿ ಪೂಂಜ ನೀಡಿರುತ್ತಾರೆ. ವಿದ್ಯಾರ್ಥಿನಿಗೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಲಕ್ಷ್ಮಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.


