ಬೊಳ್ಳಜ್ಜ ದೈವದ ಮೂಲಸ್ಥಾನದಲ್ಲಿ ಸಾರ್ವಜನಿಕರಿಂದ ಅಗೇಲು ಸೇವೆ

ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಭಕ್ತರಿಂದ ಬೊಳ್ಳಜ್ಜನಿಗೆ ಅಗೇಲು ಸಮರ್ಪಣೆ

ಬಳಂಜ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೇತೃತ್ವದಲ್ಲಿ ಕಾರಣೀಕ ಕ್ಷೇತ್ರ ಬೊಳ್ಳಜ್ಜ ದೈವದ ಮೂಲಸ್ಥಾನ ಬೊಳ್ಳಾಜೆಯಲ್ಲಿ ಬೊಳ್ಳಜ್ಜನಿಗೆ ಸಾರ್ವಜನಿಕ ಅಗೇಲು ಸೇವೆಯು ಫೆ ೨೨ರಂದು ಅತ್ಯಂತ ಶ್ರದ್ದಾ ಭಕ್ತಿಯಿಂದ ನಡೆಯಿತು.

ಅನಾದಿ ಕಾಲದಿಂದಲೂ ಭಕ್ತರು ಬೊಳ್ಳಜ್ಜ ದೈವದ ಮೂಲಸ್ಥಾನದಲ್ಲಿ ಬಂದು ಅನಾರೋಗ್ಯ, ಸಂಕಷ್ಟಗಳಿಂದ ಮುಕ್ತಿ ಪಡೆಯಲು,ಮಕ್ಕಳ ಶೈಕ್ಷಣಿಕ ಸಾಧನೆ, ಬೋರುವೆಲ್, ವಿವಾಹ, ಸಂತಾನ ಭಾಗ್ಯ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದು, ಭಕ್ತರ ಇಷ್ಟಾರ್ಥಗಳು ಈಡೇರುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಇಲ್ಲಿ ಭಕ್ತರಿಂದ ಅಗೇಲು ಹೆಚ್ಚುತ್ತಿದೆ.

ಇದೇ ಸಂದರ್ಭದಲ್ಲಿ ದೀಪ ಪ್ರಜ್ವಲನೆಯನ್ನು ಬೆಂಗಳೂರು ಉದ್ಯಮಿ ಮಹೇಶ್ ಸುವರ್ಣ ಬಳಂಜ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಬೊಳ್ಳಜ್ಜನ ದೈವದ ಕಾರಣೀಕ ಇಲ್ಲಿ ಸೇರಿರುವ ಭಕ್ತಸಮೂಹವನ್ನು ನೋಡಿದಾಗ ತಿಳಿಯುತ್ತದೆ. ಈ ಭಾಗದ ಹೆಚ್ಚಿನ ಮನೆಯಲ್ಲಿ ಬೊಳ್ಳಜ್ಜನ ಆರಾಧನೆ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ವಾರ್ಷಿಕ ಸಾರ್ವಜನಿಕ ಅಗೇಲು ಸೇವೆ ಭಕ್ತಿ ಭಾವದಿಂದ ಕೂಡಿದೆ ಎಂದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಮಾತನಾಡಿ ನಮ್ಮ ಹಿರಿಯರು ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದ ಬೊಳ್ಳಜ್ಜ ದೈವದ ಶಕ್ತಿ ನಂಬಿದವರಿಗೆ ಗೊತ್ತಿದೆ. ಹಾಗಾಗಿ ಪ್ರತಿವರ್ಷ ವ್ಯವಸ್ಥಿತವಾಗಿ ಸಾರ್ವಜನಿಕ ಅಗೇಲು ಸೇವೆಯನ್ನು ನೂರಾರು ಭಕ್ತರು ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಹೆಚ್. ಧರ್ಣಪ್ಪ ಪೂಜಾರಿ, ಅಳದಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ಕಂಚಿನಡ್ಕ ಕ್ಷೇತ್ರದ ಅಧ್ಯಕ್ಷ ವಿನಯ್ ಶೆಟ್ಟಿ, ದೈವಪಾತ್ರಿ ವಸಂತ ಪೂಜಾರಿ,ಬಳಂಜ ಗ್ರಾ.ಪಂ ಮಾಜಿ ಅಧ್ಯಕ್ಷೆ ಶೋಭಾ ಕುಲಾಲ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.