ಮಂಡ್ಯ:(ಮಾ.14) ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಪುತ್ರಿ ಸಾವಿನ ಬೆನ್ನಲ್ಲೇ ತಾಯಿ ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: 🟠ಪೆರ್ನಾಜೆ: ವಿಟ್ಲ ಸ್ವರ ಸಿಂಚನ ಕಲಾ ತಂಡದಿಂದ ನಾದೋಪಾಸನ ಹಾಗೂ ತ್ಯಾಗರಾಜರ ಆರಾಧನೆ…..!
ಏನಿದು ಪ್ರಕರಣ..?
ಗ್ರಾಮದ ನಂಜುಂಡೇಗೌಡರಿಗೆ 21 ವರ್ಷದ ವಿಜಯಲಕ್ಷ್ಮಿ ಎಂಬ ಪುತ್ರಿ ಇದ್ದಳು. ಈಕೆ ಮಾರಸಿಂಗನಹಳ್ಳಿಯ ಹರಿಕೃಷ್ಣ ಎಂಬಾತನನ್ನು ಕಳೆದ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದಳು. ಪ್ರೀತಿ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕ ಆಗಿದೆ. ಇಷ್ಟೆಲ್ಲ ನಡೆದ ಮೇಲೆ ಹರಿಕೃಷ್ಣ ಇದ್ದಕ್ಕಿದ್ದಂತೆ ವಿಜಯಲಕ್ಷ್ಮಿಯನ್ನು ಏಕಾಏಕಿ ದೂರ ಮಾಡಿದ್ದ ಎನ್ನಲಾಗಿದೆ.

ಅಲ್ಲದೇ ಹರಿಕೃಷ್ಣ ಇತ್ತೀಚೆಗೆ ಬೇರೆ ಹುಡುಗಿಯ ಜೊತೆ ಸಂಪರ್ಕದಲ್ಲಿದ್ದನಂತೆ. ಇದರಿಂದ ಬೇಸರಗೊಂಡ ವಿಜಯಲಕ್ಷ್ಮಿ ಹರಿಕೃಷ್ಣನನ್ನು ಪ್ರಶ್ನೆ ಮಾಡಿದ್ದಾಳೆ. ಕೋಪಗೊಂಡ ಹರಿಕೃಷ್ಣ, ಆಕೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ. ನೊಂದ ವಿಜಯಲಕ್ಷ್ಮಿ ಕಳೆದ 20 ದಿನಗಳ ಹಿಂದೆ ರೈಲಿಗೆ ತಲೆ ಕೊಟ್ಟ ಸಾವಿಗೆ ಶರಣಾಗಿದ್ದಳು.

ಇತ್ತ ವಿಜಯಲಕ್ಷ್ಮಿ ಸಾವಿಗಾಗಿ ತಂದೆ ನಂಜುಂಡೇಗೌಡ ಮಂಡ್ಯ ಗ್ರಾಮಾಂತರ ಠಾಣೆಗೆ ಬಂದು ದೂರು ನೀಡಿದ್ದರು. ನ್ಯಾಯ ಕೇಳಲು ಹೋದಾಗ ನಂಜುಂಡೇ ಗೌಡ ಹಾಗೂ ಅವರ ಬೆಂಬಲಿಗರ ಮೇಲೆಯೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ. ಇತ್ತ ಮಗಳ ಸಾವಿಗೆ ನ್ಯಾಯವೂ ಇಲ್ಲ, ನಮ್ಮ ಪರ ಬಂದವರಿಗೆ ನೆಮ್ಮದಿಯೂ ಇಲ್ಲ ಎನ್ನುವಂತಾಗಿತ್ತು.

ಇದರಿಂದ ಮತ್ತಷ್ಟು ನೊಂದಿದ್ದ ವಿಜಯಲಕ್ಷ್ಮಿ ತಾಯಿ ನಿನ್ನೆ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾಳೆ. ಮೃತಳ ಶವ ಸಾಗಿಸಲು ಬಿಡದೆ ಕುಟುಂಬಸ್ಥರು, ಗ್ರಾಮಸ್ಥರು ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ. ಆರೋಪಿ ಹಾಗೂ ಆರೋಪಿಯ ಕುಟುಂಬಸ್ಥರನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ.
