ಸುರತ್ಕಲ್, (ಎ.16) : ಸುರತ್ಕಲ್ ಎನ್ಐಟಿಕೆ ಬಳಿ ಬೀಚ್ ನಲ್ಲಿ ಸಮುದ್ರದಲ್ಲಿ ಆಡಲು ತೆರಳಿದ್ದ ಸಂದರ್ಭ ಅಲೆಗಳ ಅಬ್ಬರಕ್ಕೆ ಇಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದ್ದು, ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ಯುವಕ ನಾಪತ್ತೆಯಾಗಿದ್ದಾನೆ.


ಇದನ್ನೂ ಓದಿ: ⭕ಸುಳ್ಯ: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ
ಧ್ಯಾನ್ ಬಂಜನ್ (18) ಮತ್ತು ಹನೀಶ್ ಕುಲಾಲ್ (15) ನೀರುಪಾಲಾದವರು. ಹತ್ತು ಮಂದಿಯ ಕುಟುಂಬ ಸುರತ್ಕಲ್ ಸಮೀಪ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಬಂದಿತ್ತು. ಮಂಗಳವಾರ ಸಂಜೆ 5.30ರ ವೇಳೆಗೆ ಎನ್ಐಟಿಕೆ ಬೀಚ್ ಬಳಿಗೆ ಬಂದಿದ್ದು ಸಮುದ್ರದಲ್ಲಿ ನೀರಾಟಕ್ಕಿಳಿದಿದ್ದರು.



ನೀರಿನಲ್ಲಿ ಆಡುತ್ತಿದ್ದಾಗಲೇ ಧ್ಯಾನ್ ಮತ್ತು ಹನೀಶ್ ಕುಲಾಲ್ ನೀರಿನ ಅಲೆಯಲ್ಲಿ ಸಿಲುಕಿದ್ದು ಈ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ಪ್ರದೀಪ್ ಆಚಾರ್ಯ ಅಲೆಗಳ ಎಡೆಯಿಂದ ಧ್ಯಾನ್ ನನ್ನು ಎಳೆದು ಮೇಲಕ್ಕೆ ತಂದಿದ್ದಾರೆ.


ಆದರೆ ಹನೀಶ್ ಕುಲಾಲ್ ಜೀವರಕ್ಷಕ ಸಿಬ್ಬಂದಿ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ. ಧ್ಯಾನ್ ನನ್ನು ಕೂಡಲೇ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಹನೀಶ್ ಪತ್ತೆಗಾಗಿ ಲೈಫ್ ಗಾರ್ಡ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
