ರಾಮನಗರ:(ಎ.19) ಮಾಜಿ ಡಾನ್ ದಿ.ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿರುವ ಘಟನೆ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿಯೇ ನಡೆದಿದೆ.

ಬಿಡದಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ರಿಕ್ಕಿ ರೈ, ಪ್ರತೀ ಬಾರಿ ಅವರೇ ಕಾರು ಚಲಾಯಿಸುತ್ತಿದ್ದರು. ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ಮನೆಯ ಕೂದಳತೆ ದೂರದಲ್ಲೇ ರಾತ್ರಿ ಸುಮಾರು 11.30ಕ್ಕೆ ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ. ಆದರೆ ಹಿಂಬದಿ ಸೀಟ್ ನಲ್ಲಿದ್ದ ರಿಕ್ಕಿ ರೈಗೆ ಮೂಗು, ಕೈಗೆ ಗುಂಡು ತಾಗಿದ್ದು, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಷ್ಯಾದಲ್ಲಿ ನೆಲೆಸಿರುವ ರಿಕ್ಕಿ ರೈ ಎರಡು ದಿನಗಳ ಹಿಂದಷ್ಟೇ ಭಾರತಕ್ಕೆ ಬಂದಿದ್ದ , ರಾಮನಗರ ತಾಲೂಕಿನ ಬಿಡದಿ ಮನೆಯಿಂದ ತಡರಾತ್ರಿ ತನ್ನ ಫಾರ್ಚೂನರ್ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಸುಮಾರು 11.30 ರ ಹೊತ್ತಿಗೆ ಮನೆಯಿಂದ ಹೊರಬರುತ್ತಿದ್ದಂತೆ ಗೇಟ್ ಬಳಿ ದುಷ್ಕರ್ಮಿ, ಎರಡು ಸುತ್ತಿನ ಫೈರಿಂಗ್ ಮಾಡಿದ್ದಾನೆ. 70 ಎಂಎಂ ಬುಲೆಟ್ನ ಶಾಟ್ಗನ್ ಬಳಸಿ ಫೈರಿಂಗ್ ಮಾಡಲಾಗಿದೆ.
ರಿಕ್ಕಿ ರೈ ಪ್ರತಿ ಬಾರಿ ತಾವೇ ಕಾರು ಡ್ರೈವ್ ಮಾಡುತ್ತಿದ್ದರು. ಹೀಗಾಗಿ ಡ್ರೈವರ್ ಸೀಟ್ ಗುರಿ ಮಾಡಿ ದಾಳಿ ಮಾಡಲಾಗಿತ್ತು. ಆದರೆ ತಡರಾತ್ರಿ ತನ್ನ ಬದಲು ಚಾಲಕನಿಗೆ ಕಾರು ಚಲಾಯಿಸಲು ಹೇಳಿದ್ದ ರಿಕ್ಕಿ ರೈ, ಹಿಂಬದಿ ಸೀಟ್ನಲ್ಲಿ ಗನ್ ಮ್ಯಾನ್ ಜತೆ ಕುಳಿತಿದ್ದರು. ಹೀಗಾಗಿ ಫೈರಿಂಗ್ ಆಗುತ್ತಿದ್ದಂತೆ ಕಾರು ಚಾಲಕ ರಾಜು ಮುಂದೆ ಬಗ್ಗಿದ್ದು, ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.

ಖಾಸಗಿಯವರಿಗೆ ಸೇರಿದ, ರಸ್ತೆ ಪಕ್ಕದ ಕಾಂಪೌಂಡ್ ಗ್ಯಾಪ್ ಮಧ್ಯೆ ಬಚ್ಚಿಟ್ಟುಕೊಂಡು ದುಷ್ಕರ್ಮಿ ದಾಳಿ ಮಾಡಿದ್ದಾನೆ. ಅಂದರೆ ಕಾರು ಬೆಂಗಳೂರಿಗೆ ಹೊರಡಬೇಕಾದರೆ ಬಲಗಡೆ ಭಾಗದಲ್ಲಿ ಒಂದು ಕಾಂಪೌಂಡ್ ಗ್ಯಾಪ್ ಮಧ್ಯೆ ಅವಿತು, ಅದರ ಒಂದು ರಂಧ್ರದಿಂದಲೇ ಫೈರಿಂಗ್ ಆಗಿದೆ. ಬಿಡದಿ ಮನೆಯಿಂದ ಕಾರಿನಲ್ಲಿ ಮೂವರು ತೆರಳುತ್ತಿದ್ದರು. ರಿಕ್ಕಿ ರೈ ಜತೆಗೆ ಗನ್ ಮ್ಯಾನ್, ಕಾರು ಚಾಲಕ, ಹಿಂಬದಿ ಆಸನದಲ್ಲಿ ರಿಕ್ಕಿ ರೈ ಕುಳಿತಿದ್ದರು.

ಪೊಲೀಸರ ಮಾಹಿತಿ ಪ್ರಕಾರ 70ಎಂಎಂ ಬುಲೆಟ್ನ ಶಾಟ್ಗನ್ ಬಳಸಿ ಫೈರಿಂಗ್ ನಡೆಸಲಾಗಿದೆ. ಒಂದು ಬಾರಿ ಮಾತ್ರ ಗುಂಡು ಹಾರಿಸಿದ್ದು, ಕಾರಿನ ಡೋರ್ ಸೀಳಿ ಬಂದ ಬುಲೆಟ್, ಡ್ರೈವರ್ ಸೀಟ್ ಕುಶನ್ ಒಳಗೆ ನುಗ್ಗಿದೆ. ನಂತರ ಕಾರಿನ ಹಿಂಬದಿ ಸೀಟ್ನ ಎಡಭಾಗದ ಡೋರ್ಗೆ ತಾಗಿದೆ. ಈ ವೇಳೆ ಡ್ರೈವರ್ ಬೆನ್ನಿಗೆ ಹಾಗೂ ರಿಕ್ಕಿ ರೈ ಮೂಗು ಹಾಗೂ ಕೈಗೆ ಗಾಯವಾಗಿದೆ.

