ಕಡಬ:(ಜೂ.9) ಕಡಬದ ಕೋಡಿಂಬಾಳದ ಕೊರಿಯಾರ್ ಬಳಿ ಬೆಚ್ಚಿ ಬೀಳಿಸುವ ಘಟನೆಯೊಂದು ಜೂ.8 ರ ಸಂಜೆ ನಡೆದಿದೆ. ತಮ್ಮನೇ ಪೆಟ್ರೋಲ್ ಸುರಿದು ಅಣ್ಣನ ಕೊಲೆ ಯತ್ನಿಸಿದ್ದಾನೆ.

ಇದನ್ನೂ ಓದಿ: ⭕ಕಾರ್ಕಳ: ಮಗುವಿನ ಹುಟ್ಟು ಹಬ್ಬದ ದಿನವೇ ತಂದೆ ಸಾವು..!
ಗದಗ ಮೂಲದ ಅಣ್ಣ ತಮ್ಮಂದಿರು ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜೂ.8 ರ ಮಧ್ಯಾಹ್ನ ಮಂಗಳೂರು-ಬೆಂಗಳೂರು ರೈಲು ಮಾರ್ಗ ದಲ್ಲಿ ಸಂಚರಿಸುವ ಪ್ಯಾಸೆಂಜರ್ ರೈಲಿನಲ್ಲಿ ಪುತ್ತೂರಿನಲ್ಲಿ ಹತ್ತಿದ್ದರು. ಬಳಿಕ ಜೊತೆಯಾಗಿ ಬಂದು ಕಡಬ ಬಜಕೆರೆ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಇಳಿದಿದ್ದರು.

ರೈಲು ಹೋದ ಬಳಿಕ ಸುಮಾರು 500_ಮೀ ಮುಂದಕ್ಕೆ ಕರೆದುಕೊಂಡು ಬಂದು ತಮ್ಮ ನಿಂಗಪ್ಪ ಎಂಬಾತ ಅಣ್ಣ ಹನುಮಪ್ಪ (45)ನಿಗೆ ಏಕಾಏಕಿ ತನ್ನ ಕೈಯಲ್ಲಿದ್ದ ಪೆಟ್ರೋಲ್ ಅನ್ನು ಅಣ್ಣನ ಮೇಲೆ ಎರಚಿ ಬೆಂಕಿ ಹಚ್ಚಿದ್ದಾನೆ. ಹನುಮಪ್ಪನ ಕೂಗಾಟ ಕೇಳಿದ ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಕಡಬ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಮಂಗಳೂರಿಗೆ ಕರೆದುಕೊಂಡು ಹೋಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಮ್ಮ ನಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ನಿಂಗಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ” ವಿಪರೀತ ಕುಡಿತದ ಚಟವಿದೆ ಅಣ್ಣನಿಗೆ. ಈ ಚಟದಿಂದಲೇ ಬೇಸತ್ತು ಈತನ ಹೆಂಡತಿ 14 ವರ್ಷದ ಹಿಂದೆ ಬಿಟ್ಟು ಹೋಗಿದ್ದಳು. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದ. ನನ್ನ ಜೊತೆ ಕೂಡಾ ಗಲಾಟೆ ಮಾಡಿದ. ಈ ಎಲ್ಲಾ ಹಿಂಸೆಗಳಿಂದ ರೋಸಿ ಹೋಗಿ ಕೊಲೆ ಮಾಡಲು ನಿರ್ಧಾರ ಮಾಡಿದ್ದೆ” ಎಂದು ನಿಂಗಪ್ಪ ಪೊಲೀಸರಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ವರದಿ ಮಾಡಿದೆ.


ಕಡಬ ಪೊಲೀಸರು ಆರೋಪಿಯನ್ನು ಮತ್ತು ಪ್ರಕರಣದ ವಿವರಗಳನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
