Fri. Jun 13th, 2025

Mundaje: ಮುಂಡಾಜೆಯಲ್ಲಿ ಜಯರಾಂ ಕೆ ಅವರಿಗೆ ‘ನುಡಿ’ನಮನ, ಗಾನ ನಮನ, ಭಜನಾ ನಮನ

ಮುಂಡಾಜೆ:(ಜೂ.11) ವಿದ್ಯೆ, ಕಲೆ, ಸಾಹಿತ್ಯ ಸಂಸ್ಕೃತಿ, ಜಾನಪದ, ತರಬೇತಿ, ನಾಟಕ, ಕ್ರೀಡೆ ಹೀಗೆ ಬಹುವಿಧ ಪ್ರಕಾರಗಳಲ್ಲಿ ಜಯರಾಂ ಕೆ ಅವರು ತೊಡಗಿಸಿಕೊಂಡಿದ್ದರು. ಹಲವರಿಗೆ ಬದುಕುವ ದಾರಿ ತೋರಿದ್ದ ಅವರ ಈ ಎಲ್ಲಾ ಪೌಢಿಮೆ ಅನುಕರಣೀಯವಾದುದು ಎಂದು ಮುಂಡಾಜೆ ಭಿಡೆ ಮನೆಯ ಹಿರಿಯ ಮುತ್ಸದ್ದಿ ಶ್ರೀಧರ ಜಿ ಭಿಡೆ ಹೇಳಿದರು.

ಇದನ್ನೂ ಓದಿ: 🟣ಉಜಿರೆ: ಉಜಿರೆ ಎಸ್ ಡಿ ಎಂ ಪ. ಪೂ. ಕಾಲೇಜಿನಲ್ಲಿ “ಸಿಂಧೂರ ವನ” ನಿರ್ಮಿಸಿ ವಿನೂತನವಾಗಿ  ಪರಿಸರ ದಿನ ಆಚರಣೆ


ಇತ್ತೀಚೆಗೆ ಅಗಲಿದ ಕಲಾರಾಧಕ, ಹವ್ಯಾಸಿ ಶಿಕ್ಷಕ, ತರಬೇತುದಾರ ಜಯರಾಂ ಕೆ ಅವರಿಗೆ ಮುಂಡಾಜೆ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಭಜನಾ ನಮನ, ಗಾನ ನಮನ, ‘ನುಡಿ’ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಒಳ್ಳೆಯ ಗುಣಗಳು ಅನುಸರಣೀಯ ಮತ್ತು ಅನುಕರಣೀಯ.‌ ವೈಫಲ್ಯಗಳು, ಸೋಲು ಎಲ್ಲರ ಬಾಳಲ್ಲೂ ಬಂದೆರಗಿದರೂ ಧಿಟ್ಟತನದಿಂದ ಎದುರಿಸು ಬಾಳುವುದು ಜಾಣ್ಮೆ ಎಂದರು.


ಆರಂಭಿಕ ಮಾತುಗಳನ್ನಾಡಿದ ಸಂಘಟಕ ಹಾಗೂ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು, ಜಯರಾಂ ಕೆ ಅವರ ಕುಟುಂಬದ ಹಿನ್ನಲೆ, ಬದುಕಿನ ಪಲ್ಲಟಗಳು, ವಿವಿಧ ಕ್ಷೇತ್ರಗಳಲ್ಲಿ ಅವರಿಗಿದ್ದ ಪರಿಣತಿ, ಅವರು ಅದರಲ್ಲಿ ಮಾಡಿರುವ ಸಾಧನೆಗಳನ್ನು ಪರಿಚಯಿಸಿ ‘ನುಡಿ’ ನಮನ ಸಲ್ಲಿಸಿದರು.


ಮಿಲ್ಕ್ ಸೊಸೈಟಿ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಗ್ರಾಮ ದೈವಸ್ಥಾನ ಸಮಿತಿಯಿಂದ ಬಾಬು ಪೂಜಾರಿ ಕೂಳೂರು, ಬದ್ರಿಯಾ‌ ಜುಮ್ಮಾ ಮಸ್ಜಿದ್ ಸಮಿತಿ ಸದಸ್ಯ‌ ಸಿದ್ದೀಕ್ ಸಾಗರ್, ಶಿವ ಪಾರ್ವತಿ ಭಜನಾ ಸಂಘ ಚಾರ್ಮಾಡಿಯಿಂದ ಶಿಕ್ಷಕಿ ಉಷಾ ಅಶೋಕ್, ವಿರಾಟ್ ಹಿಂದೂ ಸೇವಾ ಸಂಘದಿಂದ ಗಿರೀಶ್ ರೈ, ಅರೆಕ್ಕಲ್ ಫಾರ್ಮ್ಸ್‌ನ ರಾಮಚಂದ್ರ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ‌ ಯೋಜನೆಯಿಂದ ಮೇಲ್ವಿಚಾರಕ ಜನಾರ್ದನ ಮಾಚಾರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಮಚ್ಚೇಂದ್ರನಾಥ ನಾಯಕ್, ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ ಕೂಳೂರು, ವಿವೇಕಾನಂದ ಶಿಕ್ಷಣ ಸ್ಥಳಗಳ ಶಿಕ್ಷಕಿ ಚಂದ್ರಾವತಿ, ಚಿಂತಕ ಉಮಾನಾಥ ಮರಾಠೆ ಮೃತರ ಬಗ್ಗೆ ಸ್ಮರಿಸಿ ನುಡಿನಮನ ಸಲ್ಲಿಸಿದರು.


ಯಂಗ್ ಚಾಲೆಂಜರ್ಸ್ ಸಂಸ್ಥಾಪಕ ನಾಮದೇವ ರಾವ್ ಕಾರ್ಯಕ್ರಮ ನಿರ್ವಹಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಬ್ರಾಹ್ಮರೀ ಭಜನಾ ಸಂಘ ಮತ್ತು ಶಿವಪಾರ್ವತಿ ಭಜನಾ ಸಂಘದಿಂದ ಜಯರಾಂ ಕೆ ಅವರೇ ತರಬೇತುಗೊಳಿಸಿದ ಭಜನಾ ಪ್ರದರ್ಶನ ನಡೆಸಿ ‘ಭಜನಾ ನಮನ’ ಸಲ್ಲಿಸಲಾಯಿತು.


ಜಯರಾಂ‌ ಕೆ ಅವರು‌ ರಚಿಸಿದ ಹಾಡಿಗೆ ಪ್ರಸಾದ್ ಶೆಟ್ಟಿ ಮತ್ತು ಅಶ್ವೀರ್ ಸೋಮಂತಡ್ಕ ಅವರು ಸಗೀತ ನೀಡಿದ್ದು ಅದನ್ನು ಪ್ರಸ್ತುತಪಡಿಸಿ ‘ಗಾನ ನಮನ’ ಸಲ್ಲಿಸಲಾಯಿತು. ಸಭೆಯಲ್ಲಿ ಶೀನಪ್ಪ ಮಾಸ್ಟರ್, ಚೆನ್ನಕೇಶವ ಅರಸಮಜಲು, ಅಬ್ಬಾಸ್ ಸಿ, ಕೇಶವಪ್ರಸಾದ್, ಜಯಂತಿ ಶೆಟ್ಟಿ, ರಘುನಾಥ ಚಾರ್ಮಾಡಿ, ಸಚಿನ್, ಪ್ರವೀಣ್, ನವೀನ್, ದಾಮೋಧರ್, ನಾರಾಯಣ ಗೌಡ ದೇವಸ್ಯ, ಅಪ್ಪಿ ಅರಸಮಜಲು, ಪುಷ್ಪರಾಜ್ ಶೆಟ್ಟಿ, ಸದಾನಂದ ಬಿ ಮುಂಡಾಜೆ, ಬಾಲಚಂದ್ರ ನಾಯಕ್, ಸಚಿನ್ ಭಿಡೆ, ಬಿಜು ಜೋಸೆಫ್, ಠಾಗೋರ್‌ನಾಥ್‌, ದಿಶಾ ಜಿನೇಶ್, ಸರಿತಾ, ವಿಜಯ ಆರ್, ವಸಂತ ನಾಯ್ಕ್, ಶಶಿಧರ‌ ಠೋಸರ್ ಮೊದಲಾದವರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *