ಬೆಳ್ತಂಗಡಿ:(ಜೂ.25) ಸಂಸತ್ತಿನಲ್ಲಿ ಸಂವಿಧಾನದ ಪುಸ್ತಕವನ್ನು ಹಿಡಿದು ತಾವೇ ಇದರ ಸಂರಕ್ಷಕರು ಎಂದು ಹೇಳುತ್ತಿರುವವರ ಕಾಂಗ್ರೆಸ್ ಪಕ್ಷವೇ ಐವತ್ತು ವರ್ಷಗಳ ಹಿಂದೆ ಸಂವಿಧಾನದ ಆಶಯವನ್ನೇ ಬುಡಮೇಲುಮಾಡಿದೆ ಎಂಬುದನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕಾದ ಸಂದರ್ಭವಿದು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ತಿಳಿಸಿದ್ದಾರೆ.

1975 ಜೂ.25 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ವಿಷಮ ಸ್ಥಿತಿಯನ್ನು ಹೇರಿದಾಗ ಅವರ ವಿರೋಧಿಗಳು ರಾತ್ರೋರಾತ್ರಿ ಜೈಲು ಪಾಲಾಗಬೇಕಾಯಿತು. ಬಳಿಕ ಸುಮಾರು 21 ತಿಂಗಳು ದೇಶದಲ್ಲಿ ತುರ್ತುಪರಿಸ್ಥಿತಿಯ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘ, ಜಯಪ್ರಕಾಶ್ ನಾರಾಯಣ, ಜಾರ್ಜ್ ಫೆರ್ನಾಂಡೀಸ್ ಮತ್ತಿತರ ನಾಯಕರು ದೊಡ್ಡ ಸಂಗ್ರಾಮವನ್ನೇ ನಡೆಸಬೇಕಾಯಿತು. ಅಂದಿನ ಹೋರಾಟವನ್ನು ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೇಳಲಾಗುತ್ತಿದೆ. ಈ ಸಂಗ್ರಾಮದ ಚಿತ್ರಣವನ್ನು ಈಗಿನ ಪೀಳಿಗೆ ಅರಿತುಕೊಂಡಾಗ ಕಾಂಗ್ರೆಸ್ ಎಂಬ ಪಕ್ಷದ ಧೋರಣೆಗಳೇನಿತ್ತು ಎಂಬುದನ್ನು ತಿಳಿಯಬಹುದಾಗಿದೆ.

ಜನರ ಸ್ವಾತಂತ್ರ್ಯ ವನ್ನು ಕಸಿದ, ಸಂವಿಧಾನ, ಪ್ರಜಾತಂತ್ರಕ್ಕೆ ಅಪಚಾರಗೈದ ಕಾಂಗ್ರೆಸ್ ಈಗಲೂ ಅಂತಹ ಧೋರಣೆಗಳಿಟ್ಟುಕೊಂಡಿರುವುದು ವಿಪರ್ಯಾಸ. ಐದು ದಶಕಗಳಾಗಿದ್ದರೂ ತನ್ನ ತಪ್ಪನ್ನು ತಿದ್ದಿಕೊಳ್ಳದ ಆ ಪಕ್ಷದ ಹಿಂದೆ ಹೋಗುವವರು ವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಇದು.

ಭಾರತೀಯ ಜನತಾ ಪಾರ್ಟಿಯು ಜೂ. 25 ನ್ನು ದೇಶವ್ಯಾಪಿ ಸಂವಿಧಾನ್ ಹತ್ಯಾ ದಿವಸ್ ಎಂದು ಆಚರಿಸಿಕೊಳ್ಳಲಿದೆ ಮತ್ತು ಇದನ್ನು ಒಂದು ವರ್ಷಗಳ ಕಾಲ ನಡೆಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.

