Mon. Jun 30th, 2025

Ujire: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮ

ಉಜಿರೆ (ಜೂ.30): ಶಿಕ್ಷಣ ದೊಡ್ಡ ಶಕ್ತಿಯಾಗಿದ್ದು, ಜ್ಞಾನದ ಜೊತೆಗೆ ಕೌಶಲಗಳನ್ನು ಹೊಂದಿ ಸಮಾಜವನ್ನು ಎದುರಿಸುವ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು ಎಂದು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.

ಇದನ್ನೂ ಓದಿ: 🟣ಪುತ್ತೂರು: ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಶುಭ ಹಾರೈಕೆ

ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಎರಡು ದಿನದ ಪ್ರಶಿಕ್ಷಣ ಕಾರ್ಯಕ್ರಮವನ್ನು ಜೂ.30ರಂದು ಉದ್ಘಾಟಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರನ್ನುದ್ದೇಶಿಸಿ ಅವರು ಮಾತನಾಡಿದರು.

ಹಿಂದೆ ಆಸ್ತಿವಂತರು, ಹಣವಂತರು ಶಕ್ತಿಶಾಲಿ, ಶ್ರೀಮಂತರೆಂದು ಪರಿಗಣಿಸಲ್ಪಟ್ಟಿದ್ದರೆ, ಪ್ರಸ್ತುತ ಕಾಲದಲ್ಲಿ ಜ್ಞಾನವಂತರು ಭೌತಿಕ ಮತ್ತು ಬೌದ್ಧಿಕವಾಗಿ ಶಕ್ತಿಶಾಲಿಗಳು, ಶ್ರೀಮಂತರೆಂದು ಪರಿಗಣಿಸಲ್ಪಡುತ್ತಾರೆ. ಉನ್ನತ ಶಿಕ್ಷಣ ಪಡೆದುಕೊಳ್ಳುವ ಮೂಲಕ ಆ ಶಕ್ತಿಯನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಪದವಿ ಶಿಕ್ಷಣವು ಜವಾಬ್ದಾರಿಯುತ ಘಟ್ಟವಾಗಿದ್ದು, ಬೋಧಕರೇ ಎಲ್ಲವನ್ನೂ ಕಲಿಸಬೇಕಾಗಿಲ್ಲ. ವಿದ್ಯಾರ್ಥಿಗಳು ಲಭ್ಯ ವ್ಯವಸ್ಥೆಗಳನ್ನು ಸದುಪಯೋಗ ಪಡಿಸಿಕೊಂಡು ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಸಹಯೋಗ ಮತ್ತು ಸಂವಹನ ಕೌಶಲದ ಮೂಲಕ ನಿಜ ಜೀವನದ ಸಮಸ್ಯೆಗಳನ್ನು ಎದುರಿಸಲು ಶಕ್ತರಾಗಬೇಕು ಎಂದು ಅವರು ಸಲಹೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳವು ಶಿಕ್ಷಣ ಸಂಸ್ಥೆ (ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ) ಮೂಲಕ ಗುಣಮಟ್ಟದ ಶಿಕ್ಷಣ, ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡುತ್ತ ಶಿಕ್ಷಣ ಯಜ್ಞ ನಡೆಸುತ್ತಿದೆ. ದೇಶದ ಸುಮಾರು 1,350 ವಿವಿಗಳ ಅಧೀನದ 50-52 ಸಾವಿರ ಕಾಲೇಜುಗಳಲ್ಲಿ ಉನ್ನತ 100 ಕಾಲೇಜುಗಳ ಪೈಕಿ ಎಸ್.ಡಿ.ಎಂ. ಕಾಲೇಜು ಒಂದೆಂದು ಗುರುತಿಸಲ್ಪಟ್ಟಿದೆ. ಕಡಿಮೆ ಶುಲ್ಕ, ನುರಿತ ಬೋಧಕ ವರ್ಗ, ಪಠ್ಯೇತರ ಚಟುವಟಿಕೆಗೆ ಅವಕಾಶ ಇತ್ಯಾದಿ ವ್ಯವಸ್ಥೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನ, ಬೌದ್ಧಿಕ ವಿಕಸನಕ್ಕೆ ಒತ್ತು ನೀಡುತ್ತಿದೆ ಎಂದರು.

ಮುಖ್ಯ ಅತಿಥಿ, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜೋಸೆಫ್ ಎನ್.ಎಂ. ಮಾತನಾಡಿದರು. ಮಾಹಿತಿ ಪೂರಕ್ಕೆ ಸಿಲುಕಿರುವ ಯುವ ಪೀಳಿಗೆ ಅಗತ್ಯವಾದುದನ್ನು ಅರಗಿಸಿಕೊಂಡು ಕಲಿಕೆಯನ್ನು ಒರೆಹಚ್ಚಿ ನೋಡುವ ಪ್ರಯತ್ನ ಮಾಡಬೇಕು ಎಂದರು.

ಎಲ್ಲವೂ ತಿಳಿದಿದೆ ಎಂಬ ಅಹಂ ಬಿಟ್ಟು, ಕಲಿಕೆಯತ್ತ ಮನಸ್ಸು ಮಾಡಬೇಕು. ಅಂಧಾನುಕರಣೆ ಬಿಟ್ಟು ಜ್ಞಾನವಂತರನ್ನು ಹಿಂಬಾಲಿಸಬೇಕು. ಸಮಾಜಕ್ಕೆ ಪ್ರಯೋಜನಕಾರಿ ಜ್ಞಾನವಂತರಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ, ಸಂಸ್ಕೃತಿ, ಮೌಲ್ಯ ಕಲಿಕೆ ನಮ್ಮ ಆಶಯವಾಗಿದ್ದು, ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಪೂರಕವಾದ ವ್ಯವಸ್ಥೆಗಳು ನಮ್ಮಲ್ಲಿವೆ. ಆದರೆ ಅಂತಿಮವಾಗಿ ಪರಿಶ್ರಮವೆಂಬುದು ವಿದ್ಯಾರ್ಥಿಗಳದ್ದೇ ಆಗಿರುತ್ತದೆ. ಅವಕಾಶಗಳನ್ನು ವರವಾಗಿ ಪರಿವರ್ತಿಸಿಕೊಳ್ಳಬೇಕು. ಪೋಷಕರೂ ತಮ್ಮ ಮಕ್ಕಳ ಕಲಿಕಾ ಪ್ರಗತಿ ಬಗ್ಗೆ ಗಮನ ಇರಿಸಬೇಕು ಎಂದರು.

ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಶೈಕ್ಷಣಿಕ ಸಂಯೋಜಕ ಎಸ್.ಎನ್. ಕಾಕತ್ಕರ್, ಕಾಲೇಜಿನ ಉಪ ಪ್ರಾಂಶುಪಾಲೆ ನಂದಕುಮಾರಿ, ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಭಟ್, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಜಿ.ಆರ್. ಭಟ್ ಉಪಸ್ಥಿತರಿದ್ದರು.

ಸುಪ್ರೀತಾ ಪ್ರಾರ್ಥಿಸಿದರು. ವಿದ್ಯಾರ್ಥಿ ಶಿಸ್ತುಪಾಲನ ಸಮಿತಿ ಸಂಯೋಜಕ ನಟರಾಜ್ ಎಚ್.ಕೆ. ಸ್ವಾಗತಿಸಿ, ಮುಖ್ಯ ಸಂಯೋಜಕ ಶ್ರೇಯಸ್ ಬಿ. ವಂದಿಸಿದರು. ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *