ಉಜಿರೆ:(ಜು.1) ನಮಗೆಲ್ಲ ತಿಳಿದಿರುವ ನಾಲ್ನುಡಿ ಆರೋಗ್ಯವೇ ಭಾಗ್ಯ ಆದರೆ ಅನಿರೀಕ್ಷಿತವಾಗಿ ನಮ್ಮ ಆರೋಗ್ಯದಲ್ಲಿ ಏರುಪೇರಾದಾಗ ನಾವು ಮೊದಲು ಸಂಪರ್ಕಿಸುವುದು ವೈದ್ಯರನ್ನು ಸದಾ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಎಲ್ಲ ವೈದ್ಯರನ್ನು ಸ್ಮರಿಸಿಕೊಳ್ಳಲು ಪ್ರತಿ ವರ್ಷ ಜುಲೈ 1 ನೇ ತಾರೀಖನ್ನು ದೇಶ ಕಂಡ ಅಪ್ರತಿಮ ವೈದ್ಯ ಡಾ. ಬಿ.ಸಿ.ರಾಯ್ ರವರ ನೆನಪಿಗಾಗಿ ವೈದ್ಯರ ದಿನವನ್ನಾಗಿ ಆಚರಿಸಿ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಆ ಕರ್ತವ್ಯವನ್ನು ಕಳೆದ ಹಲವಾರು ವರ್ಷಗಳಿಂದ ಉಜಿರೆಯ ಬೆನಕ ಹೆಲ್ತ್ ಸೆಂಟರ್ (NABH ಪುರಸ್ಕೃತ) ಆಚರಿಸುತ್ತಾ ಬಂದಿದ್ದು, ಪ್ರತಿ ವರ್ಷ ತಾಲೂಕಿನ ವೈದ್ಯರುಗಳನ್ನು ಬರಮಾಡಿಕೊಂಡು ಅವರನ್ನು ಗೌರವಿಸುವ ಸಂಪ್ರದಾಯದಂತೆ ಈ ವರ್ಷವೂ ಕೂಡ ಮುಂದುವರಿಸಲಾಯಿತು. ಈ ವರ್ಷ ವಿಶೇಷವಾಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ (Duty doctor) 4 ವೈದ್ಯರನ್ನು ಹೂ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಅದೇ ರೀತಿ ನಮ್ಮ ಆಮಂತ್ರಣ ಮನ್ನಿಸಿ ಆಗಮಿಸಿದ ಎಲ್ಲ ವೈದ್ಯರುಗಳಿಗೆ ಆಸ್ಪತ್ರೆಯ ವಿವಿಧ ವಿಭಾಗದ ಸಿಬ್ಬಂದಿಗಳು ಗುಲಾಬಿ ಹೂ ನೀಡಿ ಗೌರವಿಸಿದರು. ಡಾ.ಗೋಪಾಲಕೃಷ್ಣ ದಂಪತಿಗಳ ಸಂಕಲ್ಪದಂತೆ ಪ್ರತಿ ವರ್ಷ ಓರ್ವ ಬಡ ರೋಗಿಗೆ ನೀಡಲಾಗುವ ಉಚಿತ ಚಿಕಿತ್ಸೆ ಯೋಜನೆಯಂತೆ ಈ ವರ್ಷ ಹೃದಯ ಮತ್ತು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಮತಿ ರಾಮಕ್ಕು ಅವರಿಗೆ ಸುಮಾರು ಅರವತ್ತು ಸಾವಿರ ವೆಚ್ಚವನ್ನು ಆಸ್ಪತ್ರೆ ವತಿಯಿಂದ ಭರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣರವರು ವೈದ್ಯರು ಸಮಾಜದ ಹೃದಯವಿದ್ದಂತೆ ಎಂದು ನುಡಿಯುತ್ತ, ತಾಲೂಕಿನ ಹಿರಿಯ ವೈದ್ಯರನ್ನು ಆಮಂತ್ರಿಸಿ ನಮ್ಮ ಆಸ್ಪತ್ರೆಯ ವತಿಯಿಂದ ಗೌರವಿಸುವುದರಲ್ಲಿ ನಾವು ಸಾರ್ಥಕ್ಯವನ್ನು ಮೆರೆಯುತ್ತೇವೆ. ನಮ್ಮ ಕರೆಯನ್ನು ಮನ್ನಿಸಿ ಆಗಮಿಸಿದ ನನ್ನ ನೆಚ್ಚಿನ ಎಲ್ಲಾ ವೈದ್ಯ ಮಿತ್ರರಿಗೆ ವೈಯಕ್ತಿಕವಾಗಿ ಮತ್ತು ಆಸ್ಪತ್ರೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆಂದು ಹೇಳಿದರು. PRO ಎಸ್.ಜಿ ಭಟ್ ಸ್ವಾಗತಿಸಿ, ಕೊನೆಯಲ್ಲಿ ಡಾ.ನವ್ಯ ಭಟ್ ರವರು ಧನ್ಯವಾದ ಸಮರ್ಪಿಸಿದರು.


