ಪುತ್ತೂರು:(ಅ.11) ಪಡೂರು ಗ್ರಾಮದ ಸೇಡಿಯಾವು ಕೂಟೇಲು ಸಮೀಪ ಹೆಜ್ಜೇನು ದಾಳಿಗೆ ಗಂಭೀರಗೊಂಡಿದ್ದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿದ್ದು, ಹೆಜ್ಜೇನು ದಾಳಿ ಸಂದರ್ಭ ರಕ್ಷಣೆಗೆ ಹೋದ ವ್ಯಕ್ತಿ ಚೇತರಿಕೆಯಾಗಿದ್ದಾರೆ.

ಇದನ್ನೂ ಓದಿ: ಮುಂಡಾಜೆ: 14ರ ಮತ್ತು 17ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ಮೈಸೂರು ವಿಭಾಗ ಮಟ್ಟದ
ಅ.10ರಂದು ಸೇಡಿಯಾಪು ಸಮೀಪದ ಕೂಟೇಲು ಎಂಬಲ್ಲಿ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಮತ್ತು ಗಾಯಗೊಂಡ ವ್ಯಕ್ತಿಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ.11ರಂದು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.

ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಇಶಾ(7ವ) ಮೃತಪಟ್ಟವರು.
ಅ.10 ರಂದು ಸಂಜೆ ವಿದ್ಯಾರ್ಥಿಗಳಾದ ಕೂಟೇಲು ಇಶಾ ಮತ್ತು ಪ್ರತ್ಯಶ್ ಮತ್ತು ಸ್ಥಳೀಯ ನಾರಾಯಣ್ ಹೆಜ್ಜೇನು ದಾಳಿಗೊಳಗಾಗಿದ್ದರು.
ಸಂಜೆ ಮನೆಗೆ ತೆರಳುತ್ತಿದ್ದಾಗ ಕೂಟೇಲು ಸಮೀಪ ಹೆಜ್ಜೇನುಗಳು ಏಕಾಏಕಿ ವಿದ್ಯಾರ್ಥಿಗಳಿಬ್ಬರ ಮೇಲೆ ದಾಳಿ ಮಾಡಿದೆ.

ವಿದ್ಯಾರ್ಥಿಗಳು ಕಿರುಚಾಡುವುದನ್ನು ಕೇಳಿ ಸ್ಥಳೀಯರಾದ ನಾರಾಯಣ್ ಎಂಬವರು ವಿದ್ಯಾರ್ಥಿಗಳ ರಕ್ಷಣೆಗೆ ಬಂದಿದ್ದರು. ಈ ವೇಳೆ ಹೆಜ್ಜೇನು ಅವರಿಗೂ ಕಚ್ಚಿದೆ. ಗಾಯಗೊಂಡ ನಾರಾಯಣ್ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ವಿದ್ಯಾರ್ಥಿಗಳಿಬ್ಬರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳ ಪೈಕಿ ತೀವ್ರ ಅಸ್ವಸ್ಥಗೊಂಡ ಇಶಾ ಎಂಬವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಪ್ರತ್ಯಶ್ ಆರೋಗ್ಯದಲ್ಲೂ ಏರುಪೇರಾಗಿದ್ದು, ಅವರನ್ನು ಕೂಡಾ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
