ಉಜಿರೆ:(ಅ.29) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು( ಸ್ವಾಯತ್ತ) ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ (ರಿ.) ಉಜಿರೆ ವತಿಯಿಂದ “ಎಸ್.ಡಿ.ಎಂ ನೆನಪಿನಂಗಳ” ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ, ವಿದ್ಯಾರ್ಥಿ ವೇತನ ವಿತರಣೆ ಹಾಗು ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ⭕Bigg Boss: ಅರಳುವ ಮೊದಲೇ ಮುದುಡಿದ ಪ್ರೀತಿ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ, ಜಿಐ ಅಟೋ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ, ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಜಗದೀಶ್ ಮುಗುಳಿ ಮಾತನಾಡಿ, ಸಾಧನೆಗಳೆಡೆಗಿನ ತುಡಿತ ಮತ್ತು ಅದಕ್ಕಾಗಿ ಪ್ರತಿನಿತ್ಯದ ಪ್ರಯತ್ನ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಆ ಸಾಧನೆ ಹಂತ ಹಂತವಾಗಿ ಹೆಜ್ಜೆ ಹಾಕಿದಾಗ ಮಾತ್ರ ಸಾಧ್ಯ. ನಾವು ಎಷ್ಟೇ ಎತ್ತರಕ್ಕೇರಿದರೂ ಮನುಷ್ಯರಾಗಿ, ಮನುಷ್ಯತ್ವದಿಂದ ಬಾಳಬೇಕು. ಸಮಾಜಕ್ಕೆ ನಮ್ಮಿಂದಾಗುವ ಕೊಡುಗೆಯನ್ನು ನೀಡಬೇಕು. ಇದಕ್ಕೆ ಉದಾಹರಣೆಯಾಗಿ ಹಲವು ದಶಕಗಳಿಂದ ನಿರಂತರವಾಗಿ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬರುತ್ತಿರುವ ಈ ಸಂಸ್ಥೆಯ ಅಧ್ಯಕ್ಷರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ನಿದರ್ಶನವಾಗಿ ಕಾಣಬವುದು ಎಂದರು.
ಕಾರ್ಯಕ್ರಮದ ಮತ್ತೊರ್ವ ಅತಿಥಿ ಹಿರಿಯ ಯಕ್ಷಗಾನ ಕಲಾವಿದ ಉಜಿರೆಯ ಅಶೋಕ್ ಭಟ್ ಮಾತನಾಡಿ, ಅಸತ್ಯದಿಂದ ಸತ್ಯದೆಡೆಗೆ ಮತ್ತು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವುದು ಜ್ಞಾನ. ಈ ಜ್ಞಾನ ಪರಂಪರೆ ಗುರು ಶಿಷ್ಯರ ಪರಂಪರೆಯಿಂದ ಬಂದಿದೆ.
ಇದು ನಮ್ಮ ಬದುಕನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಪ್ರಶ್ನಾ ಮನೋಭಾವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಗುರು ಗೌರವವನ್ನು ಕಾಪಾಡಿಕೊಂಡು ಬನ್ನಿ. ವಿದ್ಯೆ ಎಂಬುವುದು ಜ್ಞಾನದ ಹಸಿವಿಗೆ ಕೊಡುವ ಅನ್ನ, ನಮ್ಮ ಸುದೀರ್ಘ ಬದುಕನ್ನು ಶ್ರವಿಸಲು ಇರುವ ಇಂಧನ ಅದಕ್ಕಾಗಿ ನಾವು ಸದಾ ಕಲಿಯುವ ಹಂಬಲದಿ ವಿದ್ಯಾರ್ಥಿಗಳಾಗಿಯೇ ಇರಬೇಕು ಎಂದರು.
ಕಾರ್ಯಕ್ರಮದ ಪ್ರಧಾನ ಅಭ್ಯಾಗತರಾಗಿದ್ದ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮಾತನಾಡಿ, ಕಾಲೇಜಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿದೆ. ಇಂಥಹ ಕಾರ್ಯಕ್ರಮಗಳನ್ನು ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘ ನಿರಂತರವಾಗಿ ನಡೆಸಿಕೊಂಡು ಬಂದಿದೆ. ವಿದ್ಯಾರ್ಥಿಗಳು ತನ್ನ ವೈಯಕ್ತಿಕ ಜೀವನ, ಕೌಟುಂಬಿಕ ಜೀವನ ಮತ್ತು ಸಾಮಾಜಿಕ ಜೀವನಕ್ಕೆ ಒಂದೇ ರೀತಿಯ ಮಹತ್ವವನ್ನು ನೀಡಿದಾಗ ಬದುಕು ಮೌಲ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತನ್ನ ವೃತ್ತಿ ಬದುಕಿನಲ್ಲಿ ನಾನ ಹುದ್ದೆಗಳಲ್ಲಿ ಹಲವು ದಶಕಗಳಿಂದ ಮಾಡಿಕೊಂಡು ಬಂದಿರುವ ಎಸ್.ಡಿ.ಎಂ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕುಮಾರ್ ಹೆಗ್ಡೆ, ನಿವೃತ್ತ ಉಪ ಪ್ರಾಂಶುಪಾಲ, ಅಕಾಡೆಮಿಕ್ ಕಾರ್ಡಿನೇಟರ್ ಎಸ್.ಎನ್. ಕಾಕತ್ಕಾರ್ ಮತ್ತು ಎಸ್.ಡಿ.ಎಂ ಕಾಲೇಜಿನ ಪ್ರಸ್ತುತ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಇವರನ್ನು ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ ಎ ಕುಮಾರ್ ಹೆಗ್ಡೆ, ಎಸ್.ಡಿ.ಎಂ ಸಂಸ್ಥೆ ಅನ್ನ, ಅರಿವು ಮತ್ತು ಆರೋಗ್ಯವನ್ನು ಕೊಟ್ಟಿದೆ. ಇದರ ಜೊತೆಗೆ ಸಂಸ್ಥೆಯ ಅಧ್ಯಕ್ಷರು ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನನಗೆ ಅಭಯವನ್ನು ಕೊಟ್ಟಿದ್ದಾರೆ ಇದಕ್ಕೆ ನಾನು ಪುಣ್ಯವಂತ ಎಂದರು.
ಕಾರ್ಯಕ್ರವನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ, ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಪ್ರೇರಣೆ ಬೇಕು. ಈ ಪ್ರೇರಣೆ ಸಾಧಕರ ಯಶೋಗಾಥೆಯಿಂದ ನಮಗೆ ಸಿಗುತ್ತವೆ. ವಿದ್ಯಾರ್ಥಿಗಳು ಇದರಿಂದ ಸ್ಪೂರ್ತಿ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ನಿವೃತ್ತ ವರಿಷ್ಠಾಧಿಕಾರಿ ಪೀತಾಂಬರ ಹೆರಾಜೆ ಮಾತನಾಡಿ ವಿದ್ಯಾರ್ಥಿಗಳು ನಿಂತ ನೀರಾಗಬೇಡಿ ಸದಾ ಹರಿಯುವ ನೀರಾಗಿ. ಈ ಮೂಲಕ ಸಮಾಜಕ್ಕೆ ಸಹಕಾರಿಯಾಗಿ ಬದುಕಿ ಎಂದರು.

20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ :
ಪ್ರಸಕ್ತ ಸಾಲಿನ ಎಸ್.ಡಿ.ಎಂ ಕಾಲೇಜಿನ 20 ಜನ ಅರ್ಹ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ತಲಾ 5 ಸಾವಿರದಂತೆ 1 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಿದರು. ವಿದ್ಯಾರ್ಥಿ ವೇತನವನ್ನು ಜಿಐ ಅಟೋ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಜಗದೀಶ್ ಮುಗುಳಿ ವಿತರಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ, ಅಶೋಕ್ ಭಟ್, ಪೀತಾಂಬರ ಹೆರಾಜೆ, ಡಾ.ಬಿ.ಎ ಕುಮಾರ ಹೆಗ್ಡೆ, ಬಿ.ಕೆ ಧನಂಜಯ್ ರಾವ್ ಸೇರಿದಂತೆ ಇತರೆ ಅತಿಥಿಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಭೋಜನ ವ್ಯವಸ್ಥೆಗೆ ದೇಣಿಗೆ ಹಸ್ತಾಂತರ :
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಅರ್ಹ 250 ವಿದ್ಯಾರ್ಥಿಗಳಿಗೆ 9 ಲಕ್ಷ ಮೌಲ್ಯದ ಬಿಸಿ ಊಟದ ಯೋಜನೆಗೆ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ತಲಾ 2 ಲಕ್ಷ ಮೊತ್ತದ ದೇಣಿಗೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ ರವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರರ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಎಸ್.ಡಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿವಾ ಕೊಕ್ಕಡ ನಿರೂಪಿಸಿ, ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಹಿರಿಯ ವಕೀಲ ಧನಂಜಯ್ ರಾವ್ ವಂದಿಸಿದರು.


