ಪುತ್ತೂರು: ನೇಣುಬಿಗಿದುಕೊಂಡು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೆಯ್ಯೂರು ಗ್ರಾಮದ ಪೊಯೊಳೆ ನಿವಾಸಿ ನೀತಾ(22ವ) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಘಟನೆ ಕುರಿತು ಮೃತರ ಅಕ್ಕ ಗೀತಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
‘ತಂದೆ ಗುಡ್ಡಪ್ಪ ರೈಯವರು ಸುಮಾರು 20 ವರ್ಷಗಳ ಹಿಂದೆ ಕೌಟುಂಬಿಕ ಕಲಹದ ಕಾರಣದಿಂದ ದೂರವಿದ್ದುದರಿಂದ ಮನೆಯಲ್ಲಿ ತಾಯಿ ಮತ್ತು ಅಕ್ಕ,ತಂಗಿ ಮಾತ್ರ ಇರುವುದಾಗಿದೆ. ನ.23ರಂದು ಬೆಳಿಗ್ಗೆ ತಾನು ಕೆಲಸದ ನಿಮಿತ್ತ ಮತ್ತು ತಂಗಿಗೆ ಔಷಧಿಯನ್ನು ತರಲೆಂದು ಮಂಗಳೂರಿಗೆ ಹೊರಟು ಮನೆಯ ಎದುರು ಬಾಗಿಲಿನ ಚಿಲಕ ಹಾಕಿ ಬೀಗ ಹಾಕಿ ಹೋಗಿದ್ದೆ. ತಾಯಿ ಮತ್ತು ತಂಗಿ ಮನೆಯಲ್ಲಿದ್ದರು.

ನಾನು ಬಿ.ಸಿ.ರೋಡ್ ತಲುಪಿದಾಗ ಕೆಯ್ಯೂರು ಗ್ರಾ.ಪಂ. ಅಧ್ಯಕ್ಷರಾದ ಶರತ್ ಕುಮಾರ್ ರವರು ಕರೆ ಮಾಡಿ, ತಂಗಿ ನೀತಾ ಮನೆಯ ಒಳಗಿನಿಂದ ಹಿಂಬಾಗಿಲಿನ ಚಿಲಕವನ್ನು ಹಾಕಿ ಬಂದ್ ಮಾಡಿಕೊಂಡಿದ್ದು ಕರೆದರೂ ಬಾಗಿಲು ತೆಗೆಯುತ್ತಿಲ್ಲ ಎಂದು ತಾಯಿ ಬಂದು ಮಾಹಿತಿ ನೀಡಿರುತ್ತಾರೆ ಎಂದು ತಿಳಿಸಿದ್ದರು. ತಾನು ಸಂಜೆ 6.30 ಗಂಟೆಯ ಸಮಯಕ್ಕೆ ಮನೆಗೆ ಬಂದು ಮನೆಯ ಎದುರು ಬಾಗಿಲಿನ ಬೀಗ ಹಾಗೂ ಚಿಲಕವನ್ನು ತೆಗೆದು ಒಳಪ್ರವೇಶಿಸಿ, ನೀತಾಳು ಮಲಗುವ ಕೋಣೆಗೆ ಹೋಗಿ ನೋಡಿದಾಗ ಆಕೆ ಶಾಲಿನ ಒಂದು ತುದಿಯನ್ನು ಕಿಟಕಿಯ ಸರಳಿಗೆ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಳು.

ಹೊರಗೆ ಹೋದ ತಾಯಿ ಆ ಸಮಯ ಮನೆಗೆ ಬಂದಿರುವುದಾಗಿದೆ. ಮೃತ ನೀತಾಳು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು 2016ರ ನಂತರ ಆಕೆಗೆ ತಲೆನೋವು ಆರಂಭವಾಗಿ ಚಿಕಿತ್ಸೆ ಮಾಡಿದರು 2020ರ ನಂತರ ಕುತ್ತಿಗೆ, ಬೆನ್ನುಹುರಿ ಮತ್ತು ತಲೆಯಲ್ಲಿ ನರ ದೋಷ ಉಂಟಾದ ಕಾರಣ ಕೆಎಂಸಿ ಮಂಗಳೂರು, ಎಜೆ ಆಸ್ಪತ್ರೆ ಮಂಗಳೂರಿನಲ್ಲಿ ಚಿಕಿತ್ಸೆ ಮಾಡಿದ್ದು ಪ್ರಸ್ತುತ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಮತ್ತು ಎಸ್ಡಿಎಂ ಆಯುರ್ವೇದಿಕ್ ಆಸ್ಪತ್ರೆ ಉದ್ಯಾವರದಲ್ಲಿಸುಮಾರು 9 ತಿಂಗಳಿನಿಂದ ಚಿಕಿತ್ಸೆ ಕೊಡಿಸುತ್ತಿದ್ದು ಬಳಿಕ ಸ್ವಲ್ಪ ಚೇತರಿಕೆ ಆಗಿ ಮನೆಯ ಆಸುಪಾಸಿನಲ್ಲಿ ನಡೆದಾಡುತ್ತಿದ್ದಳು.
ತಂದೆ ತಾಯಿ ಸರಿಯಾಗಿ ನೋಡದೇ, ಆರೈಕೆ ಮಾಡದೇ, ಔಷಧಿ ನೀಡದೇ ಇದ್ದುದರಿಂದ ಹಾಗೂ ಆಕೆಯ ಕಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಅವರು ತಿಳಿಸಿದ್ದರು.
ಪೊಲೀಸರು ಯುಡಿಆರ್(ನಂಬ್ರ 42/2025) ಕಲಂ 194 ಬಿಎನ್ಎಸ್ ನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.



