Fri. Dec 5th, 2025

Chikkamagaluru: ಮಹಿಳೆಯ ಭೀಕರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ – ಕೊಂದಿದ್ದು ಯಾರು ಗೊತ್ತಾ.?

ಚಿಕ್ಕಮಗಳೂರು: ಡಿಸೆಂಬರ್ 1ರ ಬೆಳಗ್ಗೆ ಅರೇನೂರು ಗ್ರಾಮದ ಸಂಧ್ಯಾ ಎಂಬ ಮಹಿಳೆಯನ್ನು ಮನೆಯ ಹಿಂಭಾಗದಲ್ಲಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ ಹಂತಕ ಎಸ್ಕೇಪ್ ಆಗಿದ್ದ. ಘಟನೆ ನಡೆದು ಎರಡು ದಿನಗಳ ಬಳಿಕ ಸಂಧ್ಯಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ⭕ಕಾರ್ಕಳ : ಮದ್ಯವೆಂದು ಭಾವಿಸಿ ವಾಹನದ ಬ್ರೇಕ್ ಪ್ಯೂಡ್ ಆಯಿಲ್ ಸೇವಿಸಿದ್ದ ವ್ಯಕ್ತಿ ಸಾವು

ಅತ್ತೆ ಮಗನಿಂದಲೇ ಸಂಧ್ಯಾ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಇದಕ್ಕೆ ಕಾರಣವಾಗಿದ್ದು, ಅನೈತಿಕ ಸಂಬಂಧ.

ಜನಾರ್ಧನ್ ಸಂಧ್ಯಾಳ ಅತ್ತೆ ಮಗ. ಸಂಧ್ಯಾಳ‌ ಹತ್ಯೆ ಮಾಡಿ ವಾಟೆಖಾನ್ ಕಾಡು ಸೇರಿದ್ದ ಆತನನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಇದೀಗ ಬಂಧಿಸಿದ್ದಾರೆ. ಸಂಧ್ಯಾ ಹತ್ಯೆಯಾದ ದಿನವೇ ಆಲ್ದೂರು ಪೊಲೀಸರಿಗೆ ಜನಾರ್ಧನ್ ಮೇಲೆ ಅನುಮಾನ ಮೂಡಿತ್ತು. ಆ ಅನುಮಾನಕ್ಕೆ ಕಾರಣವಾಗಿದ್ದು ಸಂಧ್ಯಾ ಮತ್ತು ಜನಾರ್ಧನ್ ನಡುವಿನ ಲವ್ ಸ್ಟೋರಿ. ಹತ್ಯೆಯಾದ ಹಿಂದಿನ ದಿನ ವಾಟೆಖಾನ್ ಗ್ರಾಮದಿಂದ ಅರೇನೂರು ಗ್ರಾಮಕ್ಕೆ ವಾಪಸ್ ಬಂದಿದ್ದ ಸಂಧ್ಯಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದಕ್ಕೆ ಕಾರಣವಾಗಿದ್ದು ಒಂದು ಕಡೆ ಹೆಂಡತಿ ಕಾಟ, ಮತ್ತೊಂದು ಕಡೆ ಅತ್ತೆ ಮಗಳ ಲವ್ ಟಾರ್ಚರ್.

ಕಳೆದ ಒಂದು ತಿಂಗಳ ಹಿಂದೆ ಸಂಧ್ಯಾ ಅರೇನೂರು ಗ್ರಾಮದ ತನ್ನ ತಾಯಿ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ಕುಟುಂಬದವರು ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ‌ದಾಖಲು ಮಾಡಿದ್ದರು. ಸಂಧ್ಯಾಳಿಗಾಗಿ ಹುಡುಕಾಟ ನಡೆಸಿದ ಪೊಲೀಸರು, ಸಂಧ್ಯಾ ಮೂಡಿಗೆರೆ ತಾಲೂಕಿನ ವಾಟೆಖಾನ್ ಗ್ರಾಮದ ತನ್ನ ಅತ್ತೆ ಮನೆಯಲ್ಲಿ ಇರುವುದು ಗೊತ್ತಾಗಿತ್ತು. ಆದರೆ ನವೆಂಬರ್ 30ರ ಸಂಜೆ ಸಂಧ್ಯಾ ಅರೇನೂರು ಗ್ರಾಮದ ಮನೆಗೆ ಬಂದಿದ್ದು, ಬೆಳಗ್ಗೆ ಮನೆಯ ಹಿಂಭಾಗದಲ್ಲಿ ಹೆಣವಾಗಿದ್ದಳು.

ತನ್ನ ಅತ್ತೆ ಮಗ ಜನಾರ್ಧನ್​​ ಜೊತೆ ಸಂಧ್ಯಾಳಿಗೆ ಬಾಲ್ಯದಿಂದಲೇ ಸಲಿಗೆ ಬೆಳೆದಿತ್ತು. ಇದೇ ಸಲುಗೆ ಪ್ರೇಮವಾಗಿತ್ತು. ಆದರೆ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡದ ಹಿನ್ನೆಲೆ ಸಂಧ್ಯಾಳನ್ನು ಬಾಳೆಹೊನ್ನೂರು ಸಮೀಪದ ಶಿರಗೋಳ ಗ್ರಾಮದ ರವಿ ಜೊತೆ ಮದುವೆ ಮಾಡಲಾಗಿತ್ತು. ಜನಾರ್ಧನ್ ಕೂಡ ಮೂಡಿಗೆರೆ ಮೂಲದ ಯುವತಿ ಜೊತೆ ವಿವಾಹವಾಗಿದ್ದ. ಆದರೆ ಸಂಧ್ಯಾ ಮತ್ತು ಜನಾರ್ಧನ್ ಮಧ್ಯೆ ಅನೈತಿಕ ಸಂಬಂಧ ಬೆಳೆದಿತ್ತು. ಇದೆ ವಿಚಾರಕ್ಕೆ ಸಂಧ್ಯಾ ಮತ್ತು ಪತಿ ರವಿ ಜೊತೆ ಗಲಾಟೆಯಾಗಿ ಸಂಧ್ಯಾ ಮೂರು ವರ್ಷದ ಹಿಂದೆ ತನ್ನ ಮೂವರು ಮಕ್ಕಳ ಜೊತೆ ಅರೆನೂರು ಗ್ರಾಮದ ತಾಯಿ ಮನೆ ಸೇರಿದ್ದಳು.

ಜನಾರ್ಧನ್ ಮತ್ತು ಸಂಧ್ಯಾಳ ಆತ್ಮೀಯತೆ ಇನ್ನೂ ಹೆಚ್ಚಾಗಿತ್ತು. ಇದೇ ವಿಷಯಕ್ಕೆ ಜನಾರ್ಧನ್ ಪತ್ನಿ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ತವರು ಮನೆ ಸೇರಿದ್ದಳು. ಜನಾರ್ಧನ್ ಪತ್ನಿ ತವರುಮನೆ ಸೇರುತ್ತಿದ್ದಂತೆ ಸಂಧ್ಯಾ ಮದುವೆಯಾಗುವಂತೆ ಪೀಡಿಸಿದ್ದಾಳೆ. ಯಾರಿಗೂ ಹೇಳದೆ ವಾಟೆಖಾನ್ ಗ್ರಾಮದಲ್ಲಿರುವ ಜನಾರ್ಧನ್ ಮನೆಗೆ ಹೋಗಿ ಅಲ್ಲೇ ವಾಸವಾಗಿದ್ದಳು. ಈ ವಿಷಯ ಪೊಲೀಸ್ ಠಾಣೆವರೆಗೂ ಹೋಗುತ್ತಿದ್ದಂತೆ ವಾಪಸ್ ಬಂದಿದ್ದಳು. ಮನೆಯವರಿಗೆ ಹೇಳಿ ತನ್ನನ್ನು ಕರೆದುಕೊಂಡು ಹೋಗುವಂತೆ ಡಿಸೆಂಬರ್ 1ರ ಬೆಳಗ್ಗೆ ಜನಾರ್ಧನ್​​ಗೆ ಫೋನ್​​ ಮಾಡಿದ್ದಳು. ಒಂದು ‌ಕಡೆ ಹೆಂಡತಿ ಕಾಟ ಮತ್ತೊಂದು ಕಡೆ ‌ಅತ್ತೆ ಮಗಳ ಕಾಟಕ್ಕೆ‌‌ ಆಕ್ರೋಶಗೊಂಡ ಜನಾರ್ಧನ್, ಸಂಧ್ಯಾಳ ಕುತ್ತಿಗೆಯನ್ನು ತಾನು ‌ತಂದಿದ್ದ ಚಾಕುವಿನಿಂದ ಕೊಯ್ದು ತನ್ನ ವಾಟೆಖಾನ್ ಗ್ರಾಮದ‌ ಮನೆಯ ಹಿಂಭಾಗದ‌ ಕಾಡು ಸೇರಿದ್ದ.

ಸದ್ಯ ತನ್ನ ಪ್ರೇಯಸಿ ಅತ್ತೆ ಮಗಳನ್ನೇ ಕೊಂದ ಜನಾರ್ಧನ್ ಜೈಲು ಸೇರಿದ್ದಾನೆ. ಇವರಿಬ್ಬರ ಅನೈತಿಕ ಸಂಬಂಧಕ್ಕೆ ನಾಲ್ಕು ಕುಟುಂಬಗಳು ಕಣ್ಣೀರು ಹಾಕಿದರೆ, ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ತಮ್ಮನ್ನ ಸಾಕಿ ಬೆಳೆಸಬೇಕಿದ್ದ ಅಪ್ಪ ಜೈಲು ಸೇರಿದ್ದಾನೆ.

Leave a Reply

Your email address will not be published. Required fields are marked *