ಉಜಿರೆ, ಡಿ.29 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಪದವಿ ಕಾಲೇಜಿನ ಹಾಮಾನಾ ಸಂಶೋಧನಾ ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಜಿಲ್ಲಾ ಘಟಕ ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತು
ಸಂಯುಕ್ತಾಶ್ರಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವಿಶಿಷ್ಟ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ ದ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭ ನಡೆಯಿತು.

ಸಮಾರಂಭದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಇತ್ತೀಚೆಗೆ ಕನ್ನಡ ಪುಸ್ತಕಗಳನ್ನ ಕೊಳ್ಳುವವರಿಲ್ಲ, ಓದುವವರಿಲ್ಲ ಎಂಬ ಕೊರಗು ನಮ್ಮ ಸಾಹಿತಿಗಳಲ್ಲಿ, ಪ್ರಕಾಶಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಪುಸ್ತಕ ಎಂಬುದು ಕೇವಲ ಸರಕಾಗದೆ ಅದೊಂದು ಸಂಸ್ಕೃತಿಯಾಗಿ ಮನಮನೆಯ ಜ್ಞಾನದ ಸಂಪತ್ತಾಗಿ ತನ್ನ ಅಸ್ಥಿತ್ವವನ್ನ ತಾನೇ ಕಾಪಾಡಿಕೊಳ್ಳಬೇಕು ಎಂಬ ವೈಜ್ಞಾನಿಕ ಆಶಯದ ತಳಹದಿಯ ಮೇಲೆ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿ ಮನೆಗೊಂದು ಗ್ರಂಥಾಲಯ ಅಸ್ಥಿತ್ವಕ್ಕೆ ಬರುತ್ತಿದೆ.
ಧಾವಂತದ ಬದುಕಿನಲ್ಲಿ ಪುಸ್ತಕ ಓದಲು ನಮಗೆ ಸಮಯವಿಲ್ಲ. ನಮ್ಮ ಮನೆಯಲ್ಲೊಂದು ಗ್ರಂಥಾಲಯವಿದೆ. ಅದರಲ್ಲಿ ಇಂತಿಂಥ ಪುಸ್ತಕಗಳಿವೆ ಎಂದು ಹೇಳಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ನಮ್ಮ ನಿತ್ಯದ ಹವ್ಯಾಸವಾಗಬೇಕು. ಆಗ ನಾವಿರುವ ಬಡಾವಣೆಗಳಲ್ಲಿ ನಮ್ಮ ಮನೆಯ ಘನತೆ, ಪ್ರತಿಷ್ಠೆ ನಿಜಕ್ಕೂ ಹೆಚ್ಚುತ್ತದೆ. ನಾವು ಕೆಲಸಮಾಡುವ ಸ್ಥಳಗಳಲ್ಲಿ ಜನ ನಮ್ಮನ್ನ ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಆಗ ನಮ್ಮ ಮಕ್ಕಳಿಗೆ ನಾವು ನೀತಿ ಪಾಠ ಹೇಳಬೇಕಾಗಿಲ್ಲ. ನಮ್ಮ ಬದುಕಿನ ರೀತಿಯೇ ಅವರನ್ನು ಬೆಳೆಸುತ್ತದೆ ಎಂದರು.
ಸಮಾರಂಭದಲ್ಲಿ ಗೌರವ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಸರ್ವರನ್ನು ಸ್ವಾಗತಿಸಿ, ಪ್ರಜ್ಞಾವಂತ ಸಮಾಜ ರೂಪುಗೊಳ್ಳಬೇಕು ಎಂದರೆ ಮನೆಮನೆಗಳಲ್ಲಿ ಗ್ರಂಥಾಲಯದ ಅವಶ್ಯವಿದೆ. ಗ್ರಂಥಾಲಯವೆಂದರೆ ಅದೊಂದು ಕೇವಲ ಪುಸ್ತಕದ ಸರಕಲ್ಲ. ನಮ್ಮ ದೇಹದೊಳಗಿನ ಆತ್ಮದಂತೆ, ನಮ್ಮ ಮನೆಯೆಂಬ ದೇವಾಲಯದ ಜ್ಞಾನ ಸಾಂಸ್ಕೃತಿಕ ಕಳಶ ಎಂದು ಪ್ರಾಸ್ತಾವಿಕ ಮಾತನಾಡಿದರು.


ಇದೇ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ನೇಮಕಾತಿ ಪತ್ರವನ್ನು ವಿತರಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯದುಪತಿ ಗೌಡ, ಮುಲ್ಕೀ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಿಥುನ್ ಉಡುಪ, ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ರಾಜೇಶ್ ಬಿ, ಉಪನ್ಯಾಸಕ ಡಾ. ನಾಗಣ್ಣ, ಪ್ರಸನ್ನಕುಮಾರ್ ಐತಾಳ್, ಭವ್ಯ , ಶ್ರೇಯಸ್, ವಿಶ್ವನಾಥ್ ಸೇರಿದಂತೆ ಮಂಜುವಾಣಿ ಚಂದ್ರಶೇಖರ ಅಂತರ ಮತ್ತು ಜಯೇಂದ್ರ ಸಮಾರಂಭದಲ್ಲಿ ಉಪಸ್ಥಿತರಿದ್ದರು.


