ಬೆಳ್ತಂಗಡಿ: ತಾಲೂಕಿನ ವೇಣೂರು ವಲಯ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಇರ್ವತ್ತೂರು ಗ್ರಾಮದ ಪರಾರಿಯಲ್ಲಿ ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಜನವರಿ 10ರಂದು ಬೆಳಿಗ್ಗೆ ಸುಮಾರು 10 ಗಂಟೆಯ ಹೊತ್ತಿಗೆ ಇರ್ವತ್ತೂರಿನ ಸರಕಾರಿ ಜಾಗದಲ್ಲಿ ಚಿರತೆಯ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ, ಡಿ.ಆರ್.ಎಫ್ ಅಶ್ವಿತ್, ಗಸ್ತು ಅರಣ್ಯ ಪಾಲಕರಾದ ಸುರೇಶ್ ಮತ್ತು ದಿವಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.

ಪತ್ತೆಯಾದ ಚಿರತೆಗೆ ಸರಿಸುಮಾರು 3 ರಿಂದ 4 ವರ್ಷ ವಯಸ್ಸಾಗಿದ್ದು, ಅದು ಸಾವನ್ನಪ್ಪಲು ನಿಖರ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಸರಕಾರಿ ಪಶು ವೈದ್ಯರು ಚಿರತೆಯ ಮರಣೋತ್ತರ ಪರೀಕ್ಷೆ (Post-mortem) ನಡೆಸಲಿದ್ದಾರೆ.


ವರದಿ ಬಂದ ಬಳಿಕವಷ್ಟೇ ಚಿರತೆ ಅನಾರೋಗ್ಯದಿಂದ ಸಾವನ್ನಪ್ಪಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ಸ್ಪಷ್ಟವಾಗಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.


