ಉಜಿರೆ:(ಆ.20) “ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಯಲು ಪ್ರಯೋಗಾಲಯಗಳು ಅತ್ಯವಶ್ಯಕ” ಎಂದು ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾ. ಪ್ರವೀಣ್ ಲಿಯೋ ಲಸ್ರಾದೊ ಹೇಳಿದರು. ಅವರು ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂಲ ಸೌಕರ್ಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇದನ್ನೂ ಓದಿ: 📸ಉಜಿರೆ : ಪೋಟೋಗ್ರಾಫಿಯಲ್ಲಿ ಸಮಯ, ಸಂದರ್ಭ, ಭಾವನೆಗಳು ಬಹು ಮುಖ್ಯ – ಡಾ.ವೀರೇಂದ್ರ ಹೆಗ್ಗಡೆ
ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯನ್ನು ಶ್ಲಾಘಿಸಿದರು.
33 ಹೊಸ ಕಂಪ್ಯೂಟರ್ಗಳೊಂದಿಗೆ ಕಂಪ್ಯೂಟರ್ ಲ್ಯಾಬ್, 60 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆಯೊಂದಿಗೆ ಸುಸಜ್ಜಿತ ಗ್ರಂಥಾಲಯ, ವೈಜ್ಞಾನಿಕ ಪ್ರಯೋಗಗಳಿಗೆ ಆಧುನಿಕ ಸಲಕರಣೆಗಳೊಂದಿಗೆ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ವಿವಿಧ ಆಟದ ವಸ್ತುಗಳನ್ನು ಹೊಂದಿರುವ ಒಳಾಂಗಣ ಆಟಗಳ ಕೊಠಡಿ ಸಂಸ್ಥೆಗೆ ಸೇರಿಸಲಾದ ಹೊಸ ಮೂಲ ಸೌಕರ್ಯ ಸೌಲಭ್ಯಗಳು.
ಉದ್ಘಾಟನಾ ಸಮಾರಂಭಕ್ಕೆ ಸಂಚಾಲಕರಾದ ಫಾ. ಅಬೆಲ್ ಲೋಬೊ, ಪ್ರಾಂಶುಪಾಲರಾದ ಫಾ. ವಿಜಯ್ ಲೋಬೊ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಆಂಟೋನಿ ಫೆರ್ನಾಂಡಿಸ್, ಶ್ರೀ ಸ್ಟ್ಯಾನಿ ಪಿಂಟೋ, ಶ್ರೀಮತಿ ಅನಿತಾ ಮೋನಿಸ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಉಮೇಶ್ ಶೆಟ್ಟಿ ಹಾಜರಿದ್ದರು. ಶ್ರೀಮತಿ ವಿನಯಲತಾ ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.