ಮಂಗಳೂರು:(ಆ.8) ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು ಜೋಕಟ್ಟೆಯಲ್ಲಿ ಮಂಗಳವಾರ ನಡೆದಿದ್ದ ಬೆಳಗಾವಿ ಮೂಲದ ಬಾಲಕಿಯ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ.

ಇದನ್ನೂ ಓದಿ: 🎬Toxic movie : “ಟಾಕ್ಸಿಕ್” ಸಿನಿಮಾ ಶೂಟಿಂಗ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಯಶ್
ಬೆಳಗಾವಿ ಜಿಲ್ಲೆಯ ಪ್ರಸ್ತುತ ಜೋಕಟ್ಟೆಯಲ್ಲಿ ವಾಸವಿದ್ದ ಫಕೀರಪ್ಪ ಬಂಧಿತ ಆರೋಪಿಯಾಗಿದ್ದು ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಲೆಗೈದ ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ. ಜೋಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹನುಮಂತಪ್ಪ ಎಂಬವರ ತಮ್ಮನ ಮಗಳು ಈಕೆಯಾಗಿದ್ದು, ಜಿಲ್ಲೆಯ ಹಾಸ್ಟೆಲ್ ವೊಂದರಲ್ಲಿ ಕಲಿಯುತ್ತಿದ್ದ ಈಕೆ ಬಿದ್ದು ಕೈಗೆ ಗಾಯಗೊಂಡಿದ್ದ ಕಾರಣ ಚಿಕಿತ್ಸೆಗಾಗಿ ಜೋಕಟ್ಟೆಗೆ ದೊಡ್ಡಪ್ಪ ಹನುಮಂತನ ಮನೆಗೆ ಬಂದಿದ್ದಳು.

ಮಂಗಳವಾರ ಮನೆಯವರು ಕೆಲಸಕ್ಕೆ ಹೋದ ಸಂದರ್ಭ ಬಾಲಕಿ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪಣಂಬೂರು ಪೋಲಿಸ್ ಠಾಣೆಯವರು, ತನಿಖೆ ಚುರುಕುಗೊಳಿಸಿ ಕೊಲೆ ಆರೋಪಿ ಫಕೀರಪ್ಪನನ್ನು ಬಂಧಿಸಿದ್ದಾರೆ. ಫಕೀರಪ್ಪ ಕಳೆದ ಆರು ತಿಂಗಳಿಂದ ಜೋಕಟ್ಟೆ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ಹನುಮಂತನ ಮನೆಯವರು ಮಂಗಳವಾರ ಬೆಳಗ್ಗೆ ಎಂದಿನಂತೆ ಸುರತ್ಕಲಿಗೆ ಕೂಲಿ ಕೆಲಸಕ್ಕೆ ಹೋಗಿದ್ದರು.
ಮನೆಯಲ್ಲಿ ಬಾಲಕಿ ಮಾತ್ರ ಇದ್ದಳು. ಆರೋಪಿ ಫಕೀರಪ್ಪ ಬೆಳಗ್ಗೆ 10.30 ಗಂಟೆ ಸುಮಾರಿಗೆ ಹನುಮಂತನಿಗೆ ಫೋನ್ ಮಾಡಿ ಬಾಲಕಿ ವಿಷ ಕುಡಿದು ಸತ್ತಿದ್ದಾಳೆ ಎಂದು ಹೇಳಿದ್ದಾನೆ. ಕೆಲಸದಲ್ಲಿಂದ ಹನುಮಂತ ತಕ್ಷಣ ಮನೆ ಓಡಿ ಬಂದು ನೋಡಿದಾಗ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಕಟ್ಟಿ ಬಿಗಿಯಲಾಗಿತ್ತು. ಅವಳ ಬಾಯಿ, ತುಟಿ ಕೆನ್ನೆಯಿಂದ ರಕ್ತ ಬರುತ್ತಿತ್ತು. ಹನುಮಂತ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಬಂದು ಪರಿಶೀಲಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದು ಬಳಿಕ ಕೊಲೆ ಮಾಡಿರುವುದು ಕಂಡು ಬಂದಿದ್ದು, ಮಾಹಿತಿ ಆಧಾರದಲ್ಲಿ ಆರೋಪಿ ಫಕೀರಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.