ಹೊಸಕೇರಿ:(ಮಾ.3)ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ, ಹಾಗೂ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೇರಿ ಗ್ರಾಮದಲ್ಲಿ. ಮಾ 2ರಂದು ಸಂಜೆ ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು, ನೀರು ಪಾಲಾಗಿರುವ ದುರ್ಘಟನೆ ಜರುಗಿದೆ.

ಇದನ್ನೂ ಓದಿ: ಮಂಗಳೂರು : ಯುವತಿಯರಿಗೆ ಅಶ್ಲೀಲ ವಿಡಿಯೋ ಇರುವುದಾಗಿ ಬೆದರಿಕೆ
ಹೊಸಕೇರಿ ಗ್ರಾಮದ ವೀರೇಶ ತಂದೆ ನಾಗರಾಜ, ಹಾಗೂ ವಿನಯ ತಂದೆ ರುದ್ರಪ್ಪ, ಬಾಲಕರೀರ್ವರು ಸಂಜೆ ಹೊತ್ತಲ್ಲಿ. ಕೆರೆಯಲ್ಲಿ ಈಜಲು ಕೆರೆಗೆ ಹಾರಿದ್ದು, ಕೆರೆಯ ಭಾರೀ ಆಳವಾದ ಗುಂಡಿಯಲ್ಲಿ ಡೈ ಹೊಡೆದಿದ್ದಾರೆ ಎನ್ನಲಾಗಿದೆ. ತೀರಾ ಆಳವಾದ ಗುಂಡಿಯಲ್ಲಿ ದುಮಿಕಿರುವ ಕಾರಣ, ಗುಂಡಿಯ ಆಳಕ್ಕೆ ಹೋಗಿದ್ದು ಮೇಲೆ ಬರಲಾಗದೇ ಮೃತ ಪಟ್ಟಿರಬಹುದೆಂದು ಹೇಳಲಾಗುತ್ತಿದೆ.

ಅಗ್ನಿ ಶಾಮಕ ದಳ ಕಾರ್ಯಚರಣೆ- ಸಂಜೆ ಸಮಯವಾದರೂ ತುಂಬಾ ಹೊತ್ತಿನಿಂದ, ತಮ್ಮ ಮಕ್ಕಳು ಪತ್ತೆಯಾಗದ ಹಿನ್ನಲೆಯಲ್ಲಿ. ಅವರ ಸಹಪಾಟಿ ಮಕ್ಕಳನ್ನು ಹಾಗೂ ಕೆಲ ಗ್ರಾಮಸ್ಥರಲ್ಲಿ ಪೋಷಕರು ವಿಚಾರಿಸಲಾಗಿ, ಅವರೀರ್ವರೂ ಒಟ್ಟಿಗೆ ಕೆರೆಗೆ ಈಜಲೆಂದು ತೆರಳಿರುವ ವಿಚಾರ ತಿಳಿದುಬಂದಿದೆ. ಪೋಷಕರು ತಕ್ಷಣ ಕೆರೆಯ ಅಂಗಳದಲ್ಲಿ ತೀವ್ರತೆರನಾಗಿ ತಡಕಾಡಿದ್ದಾರೆ, ಪತ್ತೆಯಾಗದ ಕಾರಣ ಕೂಡಲೇ ಪೊಲೀಸರಿಗೆ ಮಹಿತಿ ನೀಡಿದ್ದಾರೆ.
ಕೂಡ್ಲಿಗಿ ಪೊಲೀಸರು ಹಾಗೂ ಅಗ್ನಿ ಶಾಮಕ ಠಾಣಾ ಸಿಬ್ಬಂದಿ, ಕೆರೆಯಲ್ಲಿ ತಾಸುಗಟ್ಟಲೆ ಪತ್ತೆ ಕಾರ್ಯಚರಣೆ ನಡೆಸಿದ್ದಾರೆ. ಒಂದು ತಾಸಿನ ಪತ್ತೆ ಕಾರ್ಯಚರಣೆ ನಡೆಸಿದ್ದರ ಫಲವಾಗಿ, ಇಬ್ಬರ ಮೃತ ದೇಹಗಳು ಕೆರೆಯ ಆಳದಲ್ಲಿ ಪತ್ತೆಯಾಗಿವೆ. ಮೃತ ಬಾಲಕರು ಸ್ನೇಹಿತರಾಗಿದ್ದು, ಜೊತೆಯಾಗಿ ಈಜಲು ಹೋಗಿ ಜೊತೆಯಾಗಿಯೇ ಇಹಲೋಕ ತೆಜಿಸಿದ್ದಾರೆ. ದುರ್ಘಟನೆ ಸಂಭವಿಸಿರುವ ಸುದ್ದಿ ತಿಳಿದಾಕ್ಷಣ, ಇಡೀ ಗ್ರಾಮದ ಗ್ರಾಮಸ್ಥರು ಕೆರೆಯ ಏರಿಯ ಮೇಲೆ ದೌಡಾಯಿಸಿದ್ದಾರೆ.

ಮೃತ ಬಾಲಕರೀರ್ವರ ಮನೆಯಲ್ಲಿ ಅಕ್ರಂದನ ಮುಗಿಲು ಮುಟ್ಟಿದೆ, ಇಡೀ ಹೊಸಕೇರಿ ಗ್ರಾಮಕ್ಕೆ ಗ್ರಾಮವೇ ಸೂತಕದಲ್ಲಿ ಮಿಂದಿದ್ದು ನೀರವ ಮೌನ ತಾಳಿದೆ. ಬಾಲಕರ ಮೃತ ದೇಹ ಪತ್ತೆ ಕಾರ್ಯಚರಣೆ, ಕೂಡ್ಲಿಗಿ ಅಗ್ನಿ ಶಾಮಕ ಠಾಣಾಧಿಕಾರಿ ಎಸ್.ಎಮ್.ಪಾಷರವರ ನೇತೃತ್ವದ ತಂಡ ನಡೆಸಿದೆ. ಅಗ್ನಿ ಶಾಮಕ ಠಾಣಾ ಸಿಬ್ಬಂದಿಯವರಾದ ಸಿ.ಪಿ.ಕೆಂಗಪ್ಪ, ಆದಿ ಮಾಳಪ್ಪ, ಜಿ.ಮಂಜುನಾಥ, ಬಸವರಾಜ, ರವಿಕುಮಾರ, ಶಿವಶಂಕರ ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.


ಅವರೊಂದಿಗೆ ಹೊಸಕೇರಿ ಗ್ರಾಮದ ಕೆಲ ಅನುಭವಿ ಈಜುಪಟುಗಳು ಸಹ, ಮೃತ ದೇಹ ಪತ್ತೆ ಕಾರ್ಯಚರಣೆಯಲ್ಲಿ ಸಹಕರಿಸಿದ್ದಾರೆ. ಕೂಡ್ಲಿಗಿ ಪಿಎಸ್ಐ ಸಿ.ಪ್ರಕಾಶ ರವರು ಕೆರೆಯ ದಂಡೆಯ ಮೇಲೆ ಜಮಾಯಿಸಿದ್ದ, ಭಾರೀ ಜನ ದಟ್ಟಣೆ ನಿಯಂತ್ರಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅವರು ಮೃತ ಬಾಲಕರೀರ್ವರ ಪೋಷಕರು ನೀಡಿದ ಹೇಳಿಕೆಯನ್ವಯ, ದೂರು ದಾಖಲಿಸಿ ಕೊಂಡಿದ್ದಾರೆ.
