Mon. Mar 10th, 2025

Dharmasthala: ಆಸ್ತಿಯ ವಿಚಾರಕ್ಕಾಗಿ ಕತ್ತಿಯಿಂದ ಕಡಿದು ಕೊಲೆ – ಆರೋಪಿ ಖುಲಾಸೆ

ಧರ್ಮಸ್ಥಳ:(ಮಾ.8) ರೆಖ್ಯಾ ಗ್ರಾಮದ ಜಾಗದಲ್ಲಿನ ತಕರಾರು ವಿಚಾರಕ್ಕಾಗಿ ತನ್ನ ಸಹೋದರನ ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಯಚಂದ್ರ ಗೌಡ ಎಂಬುವವರನ್ನು ಮಂಗಳೂರಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆ ಗೊಳಿಸಿದೆ.

ಇದನ್ನೂ ಓದಿ: 🛑ಮಂಗಳೂರು: ನಾಪತ್ತೆಯಾಗಿ 20 ದಿನ ಕಳೆದರೂ ಪತ್ತೆಯಾಗದ ಯುವಕ

ಪ್ರಕರಣದ ಸಾರಾಂಶ :
ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ದೇವಸ ಎಂಬಲ್ಲಿ ಕೆಂಚಪ್ಪ ಗೌಡರವರ ಕುಟುಂಬ ಮತ್ತು ಆತನ ಸಹೋದರನಾದ ಜಯಚಂದ್ರ ಎಂಬುವವನ ಕುಟುಂಬ ವಾಸವಾಗಿದ್ದು, ಈ ಎರಡು ಕುಟುಂಬಗಳ ನಡುವೆ ಸುಮಾರು ಹತ್ತು ವರ್ಷಗಳಿಂದ ಜಮೀನಿನ ವಿಷಯದಲ್ಲಿ ವಿವಾದ ಉಂಟಾಗಿತ್ತು. ಇದು ಹಲವಾರು ಬಾರಿ ಕುಟುಂಬಸ್ಥರ ನಡುವೆ ತೀರ್ಮಾನಗಳು ನಡೆದರೂ ಸಮಸ್ಯೆ ಬಗೆಹರಿದಿರಲಿಲ್ಲ.

ಈ ಬಗ್ಗೆ ಹಲವಾರು ಬಾರಿ ಪೋಲಿಸ್ ಠಾಣೆಯಲ್ಲಿ ದೂರು – ಪ್ರತಿದೂರುಗಳು ದಾಖಲಾಗಿದ್ದವು, ಆದರೆ ಸಮಸ್ಯೆ ಬಗೆಹರಿಯಲಿಲ್ಲ.

ದಿನಾಂಕ: 13/01/2022ರಂದು ಕೆಂಚಪ್ಪ ಗೌಡರವರ ಮಗ ಶಾಂತಪ್ಪ ಗೌಡ ತಾನು ಕೆಲಸ ಮಾಡುತ್ತಿದ್ದ ಭಾರತೀಯ ಜೀವ ವಿಮಾ ನಿಗಮ ಕಂಪೆನಿಗೆ ಕೆಲಸದ ನಿಮಿತ್ತ ಹೊರಟು ಹೋಗುತ್ತಿರುವಾಗ ಆರೋಪಿ ಜಯಚಂದ್ರನು ತನ್ನ ಕೆಲಸದ ಆಳುಗಳ ಮುಖಾಂತರ ರಸ್ತೆಯ ಬದಿಯಲ್ಲಿ ಬಲ್ಲೆ ತೆಗೆಸುತ್ತಿದ್ದನು. ಇದನ್ನು ನೋಡಿದ ಶಾಂತಪ್ಪ ಗೌಡನು ರಸ್ತೆಯಲ್ಲಿ ಯಾಕೆ ಬಲ್ಲೆ ತೆಗೆಯುತ್ತಿದ್ದೀಯಾ?? ಎಂದು ಕೇಳಿದಾಗ ಜಯಚಂದ್ರನು ಶಾಂತಪ್ಪ ಗೌಡನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಶಾಂತಪ್ಪ ಗೌಡನ ಕುತ್ತಿಗೆಗೆ, ಕೆನ್ನೆಗೆ ಏಕಾಏಕಿ ಕಡಿಯಲು ಪ್ರಾರಂಭಿಸಿದನು. ಇದರಿಂದ ತೀವ್ರವಾಗಿ ಗಾಯಗೊಂಡ ಶಾಂತಪ್ಪ ಗೌಡನು ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿದ್ದನು.

ಈ ಘಟನೆಯನ್ನು ಶಾಂತಪ್ಪ ಗೌಡನ ಅಕ್ಕ ಮೀನಾಕ್ಷಿ ಆತನ ತಂದೆ ಕೆಂಚಪ್ಪ ಗೌಡ ತಾಯಿ ಕುಂಜ್ಞಮ್ಮ ಹಾಗೂ ಅವರ ಮನೆಯ ಹತ್ತಿರ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಜೋಸೆಫ್ ಎಂಬುವವರು ಕಣ್ಣಾರೆ ಕಂಡಿದ್ದರು. ಅವರು ಸ್ಥಳಕ್ಕೆ ಕೂಡಲೇ ಅಂಬುಲೆನ್ಸನ್ನು ಕರೆಯಿಸಿ ಆತನನ್ನು ಆಸ್ಪತ್ರೆಗೆ ಸಾಗಾಟ ಮಾಡಲು ಪಯತ್ನಿಸಿದ್ದರು. ಆತನು ಆಗಲೇ ಮೃತ ಪಟ್ಟಿದ್ದನು.

ಈ ಬಗ್ಗೆ ಧರ್ಮಸ್ಥಳ ಪೋಲೀಸ್ ಠಾಣೆಯ ಆಗಿನ ಪಿ.ಎಸ್.ಐ ಕೃಷ್ಣಕಾಂತ ಪಾಟೀಲ್ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಯಿಸಿಕೊಂಡು ಪರಿಶೀಲಿಸಿ ಜಯಚಂದ್ರ ಗೌಡನನ್ನು ಅರಸಿನಮಕ್ಕಿ ಬಸ್ ನಿಲ್ದಾಣದಲ್ಲಿ ಅದೇ ದಿನ ದಸ್ತಗಿರಿ ಮಾಡಿ, ಅವನು ತೋರಿಸಿಕೊಟ್ಟಂತೆ ಕೃತ್ಯಕ್ಕೆ ಬಳಸಿದ್ದ ಕತ್ತಿಯನ್ನು ವಶಪಡಿಸಿಕೊಂಡಿದ್ದು, ಅದನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿದ್ದರು. ನಂತರ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಬಿ. ಶಿವಕುಮಾರ್ ಎಂಬುವವರು ತನಿಖೆ ನಡೆಸಿ ದಾಖಲೆಗಳನ್ನು ಸಂಗ್ರಹಿಸಿ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಹೆಚ್ಚು ತೀವ್ರ ಸ್ವರೂಪದ್ದಾಗಿದ್ದರಿಂದ ಮಾನ್ಯ ಜಿಲ್ಲಾ ನ್ಯಾಯಾಲಯ ಮತ್ತು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ಆರೋಪಿಗೆ ಜಾಮೀನು ನಿರಾಕರಣೆ ಮಾಡಿತ್ತು.


ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರರಾದ ಶ್ರೀಮತಿ ಮೀನಾಕ್ಷಿ,
ಕೆಂಚಪ್ಪಗೌಡ, ಕುಂಜ್ಞಮ್ಮ, ಜೋಸೆಫ್ ಹಾಗೂ ಎಫ್.ಎಸ್.ಎಲ್ ತಜ್ಞರನ್ನು ಹಾಗೂ ಇತರ ಸಾಕ್ಷಿಗಳನ್ನು ಸಾಕ್ಷಿ ವಿಚಾರಣೆಗೆ ಒಳಪಡಿಸಿದ್ದು, ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರರೆಲ್ಲರೂ ಪ್ರಕರಣಕ್ಕೆ ಪೂರಕವಾಗಿ ಸಾಕ್ಷಿ ನುಡಿದಿದ್ದರು.

ಆದರೆ ಪ್ರಕರಣದಲ್ಲಿ ಆರೋಪವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಲಭ್ಯವಿದ್ದ ದಾಖಲೆಗಳನ್ನು ಪೋಲಿಸರು ತನಿಖೆ ಸಂದರ್ಭದಲ್ಲಿ ಪಡೆದಿಲ್ಲ ಎಂಬುದನ್ನು ಮನಗಂಡು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶೀ ರವೀಂದ್ರ ಎಂ. ಜೋಷಿರವರು ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿ ಪರವಾಗಿ ಮಂಗಳೂರಿನ ವಕೀಲರಾದ ವೇಣು ಕುಮಾರ್‌ ಮತ್ತು ಯುವರಾಜ್ ಕೆ. ಅಮೀನ್‌ರವರು ವಾದಿಸಿದ್ದರು.

Leave a Reply

Your email address will not be published. Required fields are marked *